ಹಿರಿಯೂರು: ಮಾನವ ಜಾತಿ ತಾನೊಂದೆ ವಲಂ ಎಂಬ ಪಂಪ ಕವಿಯ ವಾಣಿಯಂತೆ ರಾಜ್ಯದಲ್ಲಿ ನೂರಾರು ಜಾತಿ ಉಪಜಾತಿಗಳು ಇದ್ದರೂ, ಎಲ್ಲಾ ಸಮುದಾಯಗಳು ಒಂದೇ ನೆಲೆಯಲ್ಲಿ ವಾಸಿಸುವ ಮೂಲಕ ಹೊಂದಾಣಿಕೆ, ಭಾವೈಕ್ಯತೆ, ಸಮಗ್ರತೆಯಿಂದ ಒಂದೇ ಬಳ್ಳಿಯ ಹೂವುಗಳಂತೆ ಬದುಕುವ ದೇಶದ ಏಕೈಕ ರಾಜ್ಯ ಕರ್ನಾಟಕ ಆಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ.ತಿಪ್ಪೇಸ್ವಾಮಿ ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟದಲ್ಲಿ ಅನ್ಯ ಭಾಷಿಕರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಸಂಸ್ಕೃತಿ, ಸಂಸ್ಕಾರದಿಂದ ವಿಶ್ವಕ್ಕೆ ಕರ್ನಾಟಕ ಮಾದರಿ ರಾಜ್ಯವಾಗಿದೆ. ಪ್ರಾದೇಶಿಕ ಭಾಷೆಯಿಂದ ಮಾತ್ರ ನಮ್ಮಲ್ಲಿರುವ ಕಷ್ಟ, ಸುಖ, ಸಂತೋಷ, ದುಃಖ ದುಮ್ಮಾನ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ತಾಯಿಯ ಭಾಷೆ ಹಾಗೂ ಎದೆಯ ಭಾಷೆಯಾದ ಕನ್ನಡ ಉಳಿಯಬೇಕಾದರೆ ನಾಡಿನ ಜಲ, ನೆಲ ಸಂಪತ್ತಿನ ರಕ್ಷಣೆಗೆ ನಾವೆಲ್ಲರೂ ಹೋರಾಟ ಮಾಡಬೇಕಿದೆ. ಮಕ್ಕಳಲ್ಲಿ, ಯುವಜನರಲ್ಲಿ ಕನ್ನಡದ ಪ್ರಜ್ಞೆ, ಕನ್ನಡದ ಜಾಗೃತಿ ಮೂಡಿಸಿ ಪ್ರಾದೇಶಿಕ ಭಾಷೆಯ ಉಳಿವಿಗೆ ನೆರವಾಗಬೇಕು ಎಂದು ಹೇಳಿದರು.ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತ ಮನಸ್ಸಿಗೆ ಸಂತೋಷ ನೀಡಿ ದುಃಖ, ದುಮ್ಮಾನ, ಸಂಕಟ ವೇದನೆ ದೂರ ಮಾಡಿ ಮನಸ್ಸನ್ನು ಹಗುರಗೊಳಿಸುತ್ತದೆ. ಸಂಗೀತಕ್ಕೆ ರೋಗ ರುಜಿನ ದೂರ ಮಾಡುವ, ಮಳೆ ತರಿಸುವ ಶಕ್ತಿ ಇದೆ. ಆದುದರಿಂದ ಸಂಗೀತವನ್ನು ದಿವ್ಯೌಷಧಿ ಎಂದು ಕರೆಯುತ್ತಾರೆ ಎಂದು ತಿಳಿಸಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮಹಮ್ಮದ್ ಜಬೀವುಲ್ಲಾ ಮಾತನಾಡಿದರು.
ಸಂಗೀತಗಾನ ಸಂಭ್ರಮದಲ್ಲಿ ಮದಕರಿಪುರದ ಟಿ.ಶ್ರೀನಿವಾಸಮೂರ್ತಿ ಮತ್ತು ತಂಡದಿಂದ ಕನ್ನಡ ಗೀತ ಗಾಯನ, ಚಿತ್ರದುರ್ಗದ ಬಹುಮುಖಿ ಕಲಾ ಕೇಂದ್ರದ ಕಲಾವಿದರಾದ ನನ್ನಿವಾಳದ ಹನುಮಂತಪ್ಪ ಪೂಜಾರ್ ಮತ್ತು ತಂಡದಿಂದ ತತ್ವಪದ ಗಾಯನ, ಕಸಪ್ಪನಹಳ್ಳಿಯ ಕೆ.ಜಯಣ್ಣ ಮತ್ತು ತಂಡದಿಂದ ರಂಗಗೀತೆ ಗಾಯನವನ್ನು ಕಲಾವಿದರು ಪ್ರಸ್ತುತ ಪಡಿಸಿದರು.ಈ ಸಂದರ್ಭದಲ್ಲಿ ಮೇಟಿಕುರ್ಕೆ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಅಂಜನಮೂರ್ತಿ, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ.ನಿಜಲಿಂಗಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಓ.ಮೂರ್ತಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹನುಮಂತಪ್ಪ ಪೂಜಾರ್, ಹಿರಿಯ ತಬಲ ವಾದಕ ಆಯಿತೋಳು ಚಂದ್ರಪ್ಪ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಈರಗೋಪಯ್ಯ, ತರಬೇತಿ ಅಧಿಕಾರಿಗಳಾದ ಕೆ.ನವೀನ್, ಜಿ.ಟಿ.ಲೋಕೇಶ್, ಅಬ್ದುಲ್ ಸಮದ್, ಬಸವರಾಜ್, ಟಿ.ಮಧು, ಪರ್ಹ ತಂಕೀನ್, ಸೈಯದ್ ರಿಯಾಜುದ್ದೀನ್, ಹರೀಶ್, ಮಧುಸೂದನ್, ಸಂಜನಾ ಮತ್ತಿತರರಿದ್ದರು.