25ರಿಂದ ಪಾರ್ವತಮ್ಮ ಶಾಮನೂರು ಸ್ಮರಣಾರ್ಥ ಕ್ರಿಕೆಟ್‌

KannadaprabhaNewsNetwork |  
Published : Nov 12, 2025, 01:30 AM IST
11ಕೆಡಿವಿಜಿ3-ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಯುವ ಉದ್ಯಮಿ ಶ್ರೀನಿವಾಸ ವಿ.ಶಿವಗಂಗಾ, ಜಯಪ್ರಕಾಶಗೌಡ, ರಂಗಸ್ವಾಮಿ ಇತರರು ಇದ್ದರು. ...............11ಕೆಡಿವಿಜಿ4-ದಿವಂಗತ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ. | Kannada Prabha

ಸಾರಾಂಶ

ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿಗಾಗಿ ದಾವಣಗೆರೆ ಇಲೆವೆನ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದಿಂದ 18ನೇ ಬಾರಿಗೆ ಶ್ರೀಲಂಕಾ, ನೇಪಾಳ ತಂಡಗಳನ್ನು ಒಳಗೊಂಡ ರಾಷ್ಟ್ರಮಟ್ಟದ ಹೊನಲು ಬೆಳಕಿನ ಲೀಗ್ ಕಂ ನೌಕೌಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನ.26ರಿಂದ 30 ರವರೆಗೆ 5 ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

- ಶಾಮನೂರು ಡೈಮಂಡ್‌ ಕಪ್‌, ಶಿವಗಂಗಾ ಕಪ್‌, ದಾಖಲೆಯ ನಗದು ಬಹುಮಾನ: ದಿನೇಶ ಶೆಟ್ಟಿ ಮಾಹಿತಿ - ರಾಜ್ಯದ ಜಿಲ್ಲೆಗಳು, ಗುಜರಾತ್‌, ತಮಿಳುನಾಡು, ಮಹಾರಾಷ್ಟ್ರ, ಜೊತೆಗೆ ನೇಪಾಳ, ಶ್ರೀಲಂಕಾ ತಂಡಗಳೂ ಭಾಗಿ ವಿಶೇಷ

- - - - ದೇಶದಲ್ಲೇ ಅತಿ ಹೆಚ್ಚು ನಗದು ಬಹುಮಾನ ನೀಡಲಾಗುವ ಟೆನ್ನಿಸ್ ಪಂದ್ಯಾವಳಿ ಎಂಬ ಖ್ಯಾತಿ

- ಪ್ರತಿವರ್ಷ ಸುಮಾರು ₹40-₹45 ಲಕ್ಷ ವೆಚ್ಚದಲ್ಲಿ ಪಂದ್ಯಾವಳಿ ಆಯೋಜನೆ ವಿಶೇಷ

- ವೈಯಕ್ತಿಕ ಉತ್ತಮ ಆಲ್‌ರೌಂಡರ್‌ಗೆ ಹೀರೋ ಹೊಂಡಾ ಬೈಕ್‌ ಬಹುಮಾನವಾಗಿ ನೀಡಲಾಗುವುದು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸವಿನೆನಪಿಗಾಗಿ ದಾವಣಗೆರೆ ಇಲೆವೆನ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದಿಂದ 18ನೇ ಬಾರಿಗೆ ಶ್ರೀಲಂಕಾ, ನೇಪಾಳ ತಂಡಗಳನ್ನು ಒಳಗೊಂಡ ರಾಷ್ಟ್ರಮಟ್ಟದ ಹೊನಲು ಬೆಳಕಿನ ಲೀಗ್ ಕಂ ನೌಕೌಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನ.26ರಿಂದ 30 ರವರೆಗೆ 5 ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾಹಿತಿ ನೀಡಿ, ಶಾಮನೂರು ಡೈಮಂಡ್‌, ಶಿವಗಂಗಾ ಕಪ್-2025 ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆವ ತಂಡಕ್ಕೆ ₹5,55,555, ದ್ವಿತೀಯ ಸ್ಥಾನಕ್ಕೆ ₹3,55,555 ಹಾಗೂ ತೃತೀಯ ಸ್ಥಾನಕ್ಕೆ ₹1,55,555 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು ಎಂದರು.

ದೇಶದಲ್ಲೇ ಅತಿ ಹೆಚ್ಚು ನಗದು ಬಹುಮಾನದ ಈ ಟೆನ್ನಿಸ್ ಪಂದ್ಯಾವಳಿಯಲ್ಲಿ ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳು, ಗುಜರಾತ್‌, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಜೊತೆಗೆ ನೆರೆಯ ದೇಶಗಳಾದ ನೇಪಾಳ, ಶ್ರೀಲಂಕಾ ತಂಡಗಳೂ ಭಾಗವಹಿಸುತ್ತಿರುವುದು ಪಂದ್ಯಾವಳಿ ವಿಶೇಷ ಎಂದು ತಿಳಿಸಿದರು.

ಒಟ್ಟು 52 ತಂಡಗಳು, 850 ಆಟಗಾರರು ಭಾಗವಹಿಸುವರು. ಪ್ರತಿ ತಂಡದ ಸದಸ್ಯರಿಗೂ ಟಿ ಶರ್ಟ್ ನೀಡಲಾಗುವುದು. ತಂಡಗಳಿಗೆ ನಗರದಲ್ಲೇ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಪಂದ್ಯಾವಳಿಯಲ್ಲಿ ವೈಯಕ್ತಿಕ ಉತ್ತಮ ಆಲ್‌ರೌಂಡರ್‌ಗೆ ಹೀರೋ ಹೊಂಡಾ ಬೈಕನ್ನು ಬಹುಮಾನವಾಗಿ ನೀಡಲಾಗುವುದು. ಸುಮಾರು ₹40-₹45 ಲಕ್ಷ ವೆಚ್ಚದಲ್ಲಿ ಪ್ರತಿ ವರ್ಷ ಟೂರ್ನಿ ನಡೆಯುತ್ತಾ ಬಂದಿದೆ ಎಂದು ಹೇಳಿದರು.

ವಿಶೇಷವಾಗಿ ಪಂದ್ಯಾವಳಿ ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ಯಾಲರಿಗಳ ವ್ಯವಸ್ಥೆ ಮಾಡಲಾಗುವುದು. ಟೂರ್ನಿಗೆ 3ನೇ ಅಂಪೈರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಯು ಟ್ಯೂಬ್ ನಲ್ಲಿ ಇಡೀ ಪಂದ್ಯಾವಳಿಯ ನೇರ ಪ್ರಸಾರವಿರುತ್ತದೆ. ಈಗಾಗಲೇ ಪರ ಜಿಲ್ಲೆ, ಪರ ರಾಜ್ಯ, ಶ್ರೀಲಂಕಾ, ನೇಪಾಳ ತಂಡಗಳು ಹೆಸರು ನೋಂದಾಯಿಸಿದ್ದು, ಪಂದ್ಯಾವಳಿಗಾಗಿ ಭರದ ಸಿದ್ಧತೆ ನಡೆದಿದೆ ಎಂದು ದಿನೇಶ್‌ ಶೆಟ್ಟಿ ಮಾಹಿತಿ ನೀಡಿದರು.

ವಿಶೇಷವಾಗಿ ಅಫಿಷಿಯಲ್ ಕಪ್:

ಪಂದ್ಯಾವಳಿ ಆಯೋಜಕ, ಸಂಘದ ಸಹ ಕಾರ್ಯದರ್ಶಿ ಜಯಪ್ರಕಾಶ ಗೌಡ ಮಾತನಾಡಿ, ಪ್ರತಿ ವರ್ಷದಂತೆ ಈ ಸಲವೂ ಪೊಲೀಸ್, ಪತ್ರಕರ್ತರು, ವರ್ತಕರು, ಜಿಲ್ಲಾಧಿಕಾರಿಗಳ ತಂಡ, ಪಾಲಿಕೆ ಸದಸ್ಯರ ತಂಡ, ವಕೀಲರ ತಂಡಗಳು ಸೇರಿದಂತೆ 8 ತಂಡಗಳಿಗಾಗಿ ವಿಶೇಷವಾಗಿ ಅಫಿಷಿಯಲ್ ಕಪ್ ಪಂದ್ಯಾವಳಿ ಇರುತ್ತದೆ. ಈ ಸಲ ವಿಶೇಷವಾಗಿ ದಾವಣಗೆರೆ ಜಿಲ್ಲಾ ವರದಿಗಾರರ ತಂಡದ ಮನವಿ ಮೇರೆಗೆ, ಪತ್ರಕರ್ತರ ಎರಡು ತಂಡಗಳಿಗೆ ಅವಕಾಶ ನೀಡುತ್ತಿದ್ದೇವೆ ಎಂದರು.

ಅಫಿಷಿಯಲ್ ಕಪ್ ಪಂದ್ಯಾವಳಿಯು ನ.25ರಂದು ಸಂಜೆ 6 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಇದರೊಂದಿಗೆ ಪಂದ್ಯಾವಳಿಯೂ ಉದ್ಘಾಟನೆಗೊಳ್ಳಲಿದೆ. ಶಾಮನೂರು ಡೈಮಂಡ್ ಕಪ್‌, ಶಿವಗಂಗಾ ಕಪ್-2025 ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ಊಟ, ವಸತಿ ಜೊತೆಗೆ ಪ್ರತಿ ತಂಡಕ್ಕೂ ಟೀ ಶರ್ಟ್ ನೀಡಲಿದ್ದೇವೆ. ಪ್ರತಿ ವರ್ಷದಂತೆ ಕ್ರೀಡಾಪ್ರೇಮಿಗಳು ಪಂದ್ಯಾವಳಿಯನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ, ಯುವ ಕೈಗಾರಿಕೋದ್ಯಮಿ ಶ್ರೀನಿವಾಸ ವಿ.ಶಿವಗಂಗಾ, ಹಿರಿಯ ಕ್ರೀಡಾಪಟುಗಳಾದ ರಂಗಸ್ವಾಮಿ, ಸುರೇಶ, ಚಂದ್ರು, ಹಾಲಪ್ಪ, ಬಸವನಗೌಡ, ಶಾಂತಕುಮಾರ, ರಾಘವೇಂದ್ರ ಇತರರು ಇದ್ದರು.

- - -

-11ಕೆಡಿವಿಜಿ3.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಯುವ ಉದ್ಯಮಿ ಶ್ರೀನಿವಾಸ ವಿ.ಶಿವಗಂಗಾ, ಜಯಪ್ರಕಾಶಗೌಡ, ರಂಗಸ್ವಾಮಿ ಇತರರು ಇದ್ದರು. -11ಕೆಡಿವಿಜಿ4: ದಿ। ಪಾರ್ವತಮ್ಮ ಶಿವಶಂಕರಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ