ನಾಡಿನ ಸಂರಕ್ಷಣೆಯಲ್ಲಿ ಒನಕೆ ಓಬವ್ವನವರ ಹೋರಾಟ ಅವಿಸ್ಮರಣೀಯ ಎಂದು ಪಟ್ಟಣದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಓಬವ್ವನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ನಾಡಿನ ಉಳಿವಿಗಾಗಿ ಸಾಕಷ್ಟು ವೀರವನಿತೆಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದ ಚರಿತ್ರೆಯನ್ನು ಸಮಕಾಲೀನ ಜನತೆಗೆ ತಿಳಿಸಬೇಕು. ಅದೇ ರೀತಿ ಕರ್ನಾಟಕದ ಉದ್ದಕ್ಕೂ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮರಂತಹ ವೀರಾಗ್ರಹಿಣಿಯರು ನಾಡಿನ ಅಸ್ಥಿತ್ವ ಮತ್ತು ತಮ್ಮಪರಂಪರೆಯನ್ನು ಅನ್ಯ ಸಂಸ್ಕೃತಿಯ ದಾಳಿಗೆ ಸಿಕ್ಕಿ ಹಾಳಾಗದಂತೆ ನೋಡಿಕೊಳ್ಳಲು ತೀವ್ರ ಹೋರಾಟ ನಡೆಸಿ ಮಡಿದರು ಎಂದು ಅವರು ತಿಳಿಸಿದರು.
12 ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ವಚನ ಚಳವಳಿಯಲ್ಲಿ ಅಕ್ಕಮಹಾದೇವಿ ಸೇರಿದಂತೆ ನೂರಾರು ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದರು. ಕಾಯಕದ ಶುದ್ಧ ಭಕ್ತಿ ಹೇಗಿರಬೇಕೆಂದು ತೋರಿಸಿಕೊಟ್ಟರು ಎಂದರು.
ಮಹಿಳೆಯರು ಕೇವಲ ಗೃಹ ಕಾರ್ಯಗಳಿಗೆ ಮಾತ್ರ ಸೀಮಿತರಾಗದೆ ಆಧುನಿಕ ಯುಗದಲ್ಲಿ ಪುರುಷನಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುವುದರೊಂದಿಗೆ ದೇಶ ಕಟ್ಟುವ ಕೆಲಸದಲ್ಲಿ ಸಹಭಾಗಿಯಾಗಿದ್ದಾರೆ. ಈ ನಾಡು ಹೆಣ್ಣಿಗೆ ಪವಿತ್ರ ಹಾಗೂ ಪೂಜನೀಯ ಸ್ಥಾನ ನೀಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಇ.ಒ ಅನಂತ್ ರಾಜ್, ಗ್ರೇಟ್-2 ತಹಸೀಲ್ದಾರ್ ಬಿ.ಸಿ.ಸುಮತಿ, ಶಿರಸ್ತೇದಾರ್ ಗಳಾದ ಅಂಬುಜಾಕ್ಷಿ, ಸುನಿಲ್ ಕುಮಾರ್, ಎಸ್.ಡಿ.ಎ ವತ್ಸಲಾ, ದಸಂಸ ಮುಖಂಡರಾದ, ಡೊಂಕಿಹಳ್ಳಿ ರಾಮಣ್ಣ, ಜಗದೀಶ್, ದಂಡಿನಶಿವರ ಕುಮಾರ್ ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.