ಅತೀಯಾದ ಮಳೆಯಿಂದ ಕೋಟ್ಯಂತರ ರುಪಾಯಿ ಬೆಳೆ ಹಾನಿ

KannadaprabhaNewsNetwork |  
Published : Oct 22, 2024, 12:04 AM ISTUpdated : Oct 22, 2024, 12:05 AM IST
21ಕೆಪಿಎಲ್21,22 ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದ ಬಳಿ ಭತ್ತ ನೆಲದ ಪಾಲಾಗಿರುವುದು. | Kannada Prabha

ಸಾರಾಂಶ

ಜಿಲ್ಲಾದ್ಯಂತ ಅತೀಯಾದ ಮಳೆಯಿಂದ ಬೆಳೆ ಹಾನಿಯಾಗುತ್ತಿದೆ. ಅದರಲ್ಲೂ ಹಿರೇಹಳ್ಳ ಜಲಾಶಯ ವ್ಯಾಪ್ತಿಯಲ್ಲಿ ಬತ್ತ ನೆಲದ ಪಾಲಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

- ತತ್ತರಿಸಿದ ರೈತ ಸಮುದಾಯ

- ಬೆಳೆ ಕಾಪಾಡಿಕೊಳ್ಳಲು ಹೆಣಗಾಡುತ್ತಿರುವ ರೈತ

- ಜಿಲ್ಲಾದ್ಯಂತ ಕಾಡುತ್ತಿರುವ ಮಳೆರಾಯ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾದ್ಯಂತ ಅತೀಯಾದ ಮಳೆಯಿಂದ ಬೆಳೆ ಹಾನಿಯಾಗುತ್ತಿದೆ. ಅದರಲ್ಲೂ ಹಿರೇಹಳ್ಳ ಜಲಾಶಯ ವ್ಯಾಪ್ತಿಯಲ್ಲಿ ಬತ್ತ ನೆಲದ ಪಾಲಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಭಾರಿ ಹಾನಿಯಾಗುತ್ತಿದೆ. ಈರುಳ್ಳಿ ಕಟಾವು ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ ಮೆಕ್ಕೆಜೋಳ ಹೊಲದಲ್ಲಿಯೇ ಸಸಿ ನಾಟುತ್ತಿದೆ.

ಆಗಾಗ್ಗೆ ಸುರಿಯುತ್ತಿರುವ ಮಳೆ ಬೆಳೆಯನ್ನು ರಾಶಿ ಮಾಡಿಕೊಳ್ಳುವುದಕ್ಕೂ ಬಿಡುತ್ತಿಲ್ಲ ಎನ್ನುವುದು ರೈತರ ಅಳಲು.

ಕಟಾವಿಗೆ ಬಂದಿರುವ ಬೆಳೆಯನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಹಿಂಗಾರು ಬಿತ್ತನೆ ಮಾಡುವುದಕ್ಕೂ ಆಗುತ್ತಿಲ್ಲ. ಹೀಗಾಗಿ, ರೈತರು ಅಯ್ಯೋ ಮಳೆ ದೇವರೇ ಕೆಲಕಾಲ ಬಿಡುವುಕೊಡು ಎಂದು ಪ್ರಾರ್ಥಿಸುತ್ತಿದ್ದಾರೆ.ಬತ್ತ ನೆಲದ ಪಾಲು:

ಹಿರೇಹಳ್ಳ ಮತ್ತು ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬತ್ತ ಇನ್ನೇನು ಕಟಾವಿಗೆ ಬಂದಿತ್ತು. ಹದಿನೈದು ದಿನಗಳು ಕಳೆದಿದ್ದರೇ ರಾಶಿ ಮಾಡಿಕೊಳ್ಳಬಹುದಿತ್ತು. ಆದರೆ, ಈಗ ಸುರಿದ ಮಳೆಯಿಂದಾಗಿ ಬತ್ತ ನೆಲಕ್ಕೆ ಬಿದ್ದಿದ್ದು, ತೆನೆ ನೆಲದ ಪಾಲಾಗಿರುವುದರಿಂದ ಅದು ಕಟಾವು ಮಾಡಿಕೊಳ್ಳಲು ಆಗದಂತೆ ಆಗಿದೆ.350 ಹೆಕ್ಟೇರ್ ಹಾನಿ:

ಕೇವಲ ಬತ್ತ ಬೆಳೆಯೇ ಸುಮಾರು 350 ಹೆಕ್ಟೇರ್ ಹಾನಿಯಾಗಿದ್ದು, ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಬಹುತೇಕ ಬೆಳೆಗಳು ಹಾನಿಯಾಗಿವೆ. ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ರೈತ ಸಮುದಾಯ ಆಗ್ರಹಿಸಿದೆ.ಕೈಗೆ ಬಂದು ತುತ್ತಾ ಬಾಯಿಗೆ ಬರಲಿಲ್ಲ:

ಕೈಗೆ ಬಂದ ತುತ್ತಾ ಬಾಯಿಗೆ ಬರಲಿಲ್ಲ ಎನ್ನುವಂತೆ ಆಗಿದೆ ರೈತರ ಗೋಳು. ರಾಶಿ ಮಾಡುವ ವೇಳೆಯಲ್ಲಿ ಬಹುತೇಕ ಬೆಳೆ ಮಣ್ಣುಪಾಲಾಗಿದ್ದರಿಂದ ಉತ್ತಮ ಬೆಲೆ ಇದ್ದರೂ ಪ್ರಯೋಜನವಾಗುವುದಿಲ್ಲ ಎನ್ನುವಂತಾಗಿದೆ.

ಈ ವರ್ಷ ಈರುಳ್ಳಿ, ಮೆಕ್ಕೆಜೋಳಕ್ಕೆ ಉತ್ತಮ ದರವೂ ಇತ್ತು ಮತ್ತು ಫಸಲು ಬಂದಿತ್ತು. ಆದರೆ, ಬಂದಿರುವ ಫಸಲು ಮಾರುಕಟ್ಟೆಗೆ ಕಳುಹಿಸಲು ಆಗದಂತೆ ಆಗಿ, ಕಣದಲ್ಲಿಯೇ ಕೊಳೆಯುವಂತೆ ಆಗಿದ್ದು ಮಾತ್ರ ದುರಂತವೇ ಸರಿ.

ಈ ವರ್ಷ ಮುಂಗಾರು ಅತ್ಯುತ್ತಮವಾಗಿ ಬಂದಿದೆ. ಬೆಳೆ ಕೈ ಸೇರಿತು ಎನ್ನುವಾಗಲೇ ಭಾರಿ ಹಾನಿಯಾಗಿದ್ದರಿಂದ ರೈತರು ಮತ್ತಷ್ಟೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ವೆ ಕಾರ್ಯ ನಿಧಾನಗತಿ:

ಹಾನಿಯ ಸರ್ವೆ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ವರ್ಷ ಏಕಕಾಲದಲ್ಲಿ ಹಾನಿಯಾಗಿರುವುದರಿಂದ ಸರ್ವೆ ಮಾಡುವುದು ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಗೂ ಸಮಸ್ಯೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ