ಧಾರವಾಡ ಜಿಲ್ಲೆಯ ಲಕ್ಷಾಂತರ ರೈತರಿಗೆ ಬೆಳೆವಿಮೆ ಮರೀಚಿಕೆ

KannadaprabhaNewsNetwork |  
Published : Jun 23, 2025, 12:33 AM IST
ಬಿತ್ತನೆ | Kannada Prabha

ಸಾರಾಂಶ

ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾಗಿದೆ. ಆದರೆ, ಧಾರವಾಡದಲ್ಲಿ ಆಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ಜಿಲ್ಲಾಡಳಿತ ಮಾತ್ರ ಪರಿಹಾರದ ಹಣ ಜಮೆ ಆಗಿದೆ ಎಂದು ಹೇಳಿಕೆ ನೀಡುತ್ತಿರುವುದು ಸಹಜವಾಗಿ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಸಿಗಬೇಕಿದ್ದ ಬೆಳೆ ವಿಮೆ ಪರಿಹಾರ ಸಿಗದೇ ಧಾರವಾಡ ಜಿಲ್ಲೆಯ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಗದಗ, ಬಾಗಲಕೋಟೆ, ಹಾವೇರಿ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ರೈತರಿಗೆ ಈಗಾಗಲೇ ವಿಮಾ ಪರಿಹಾರದ ಹಣ ಜಮೆಯಾಗಿದೆ. ಆದರೆ, ಧಾರವಾಡ ಜಿಲ್ಲೆಯ ರೈತರಿಗೆ ಮಾತ್ರ ವಿಮಾ ಪರಿಹಾರ ಸಿಗದೇ ಇರುವುದರಿಂದಾಗಿ ಮುಂಗಾರಿ ಬಿತ್ತನೆ ಸಂದರ್ಭದಲ್ಲಿ ಅನುಕೂಲವಾಗಬೇಕಾಗಿದ್ದ ಹಣ ರೈತರ ಕೈಸೇರದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಸಾಲದ ಶೂಲದಲ್ಲಿ ರೈತ: ಕಳೆದ ಎರಡು ವರ್ಷಗಳಿಂದ ಧಾರವಾಡ ಜಿಲ್ಲೆಯ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯ ಕರಾಳ ಛಾಯೆಗೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನ ಹೆಸರು, ಶೇಂಗಾ, ಹತ್ತಿ, ಈರುಳ್ಳಿ ಮತ್ತು ಸೋಯಾಬಿನ್ ಬೆಳೆಗಳು ಕೈಗೆ ಸಿಗದೆ ನಷ್ಟ ಅನುಭವಿಸಿದ್ದಾರೆ.

2024-25ನೇ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಭರಣ ಮಾಡಿದ್ದರೂ ವಿಮಾ ಕಂಪನಿ ಮತ್ತು ಸರ್ಕಾರದ ವಿಳಂಬ ನೀತಿ ರೈತರನ್ನು ಸಾಲದ ಸುಳಿಗೆ ದೂಡಿದೆ. ಕಷ್ಟಕಾಲದಲ್ಲಿ ಕೈಹಿಡಿಯುತ್ತದೆ ಎಂದು ನಂಬಿ ಕಟ್ಟಿದ ವಿಮಾ ಕಂತಿನ ಪರಿಹಾರ, ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಲಕ್ಷಕ್ಕೂ ಅಧಿಕ ರೈತರು: ಕೃಷಿ ಇಲಾಖೆಯ ದಾಖಲೆಗಳ ಆಧಾರದಲ್ಲಿ ಜಿಲ್ಲೆಯಲ್ಲಿ 1,36,225.88 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳಿಗೆ 2024ನೇ ಸಾಲಿನ ಮುಂಗಾರು ಬೆಳೆಗಳಿಗೆ 1,39,416 ರೈತರು ವಿಮಾ ಕಂತು ಪಾವತಿಸಿ, ಪಿಎಂಎಫ್‌ಬಿವೈ ಅಡಿಯಲ್ಲಿ ನೋಂದಣಿ ಮಾಡಿಸಿದ್ದರು. ಆದರೆ, ಈ ರೈತರ ಖಾತೆಗಳಿಗೆ ಈವರೆಗೂ ವಿಮಾ ಪರಿಹಾರದ ಹಣ ಜಮೆಯಾಗಿಲ್ಲ.

ಇಲ್ಲಿ ಮಾತ್ರ ವಿಳಂಬವೇಕೆ?: ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆಯಾಗಿದೆ. ಆದರೆ, ಧಾರವಾಡದಲ್ಲಿ ಆಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ಜಿಲ್ಲಾಡಳಿತ ಮಾತ್ರ ಪರಿಹಾರದ ಹಣ ಜಮೆ ಆಗಿದೆ ಎಂದು ಹೇಳಿಕೆ ನೀಡುತ್ತಿರುವುದು ಸಹಜವಾಗಿ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಮೊದಲ ಹಂತದ ಬೆಳೆ ವಿಮೆ ಹಣ ಬೆರಳೆಣಿಕೆಯ ಕೆಲವೇ ಕೆಲವು ರೈತರಿಗೆ ತಲುಪಿದ್ದು, ಬಹುತೇಕ ರೈತರು ಇನ್ನೂ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವಾಗಿ ಹಲವಾರು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಾಕಿ ಉಳಿದ ಎಲ್ಲ ರೈತರಿಗೆ ವಿಮಾ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಹಾಗೂ ಧಾರವಾಡ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಗಾಯದ ಮೇಲೆ ಬರೆ: ಬೆಳೆ ನಷ್ಟವಾದಾಗ ಪರಿಹಾರ ಬರಲಿ ಎಂಬ ಉದ್ದೇಶದಿಂದ ರೈತರು ಬೆಳೆವಿಮೆ ತುಂಬುತ್ತಾರೆ. ಆದರೆ, ರೈತರಿಗೆ ಅನುಕೂಲವಾಗಬೇಕಿದ್ದ ಬೆಳೆವಿಮೆ, ವಿಮಾಕಂಪನಿಗಳಿಗೆ ಅನುಕೂಲವಾದಂತಾಗಿದೆ. ಈ ಕುರಿತು ಜಿಲ್ಲೆಯ ರೈತರು ಹಲವು ಬಾರಿ ಜಿಲ್ಲಾಡಳಿತಕ್ಕೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿ ಎಚ್ಚರಿಸಿದರೂ ಸಹ ರೈತರ ಖಾತೆಗಳಿಗೆ ಬೆಳೆವಿಮೆ ಪರಿಹಾರ ಮಾತ್ರ ಇಂದಿಗೂ ಜಮೆಯಾಗದಿರುವುದು ರೈತರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಅವೈಜ್ಞಾನಿಕ ನೀತಿ: ಯಾವುದೇ ಒಂದು ಬೆಳೆ ಹಾನಿಯಾದಲ್ಲಿ ಆ ಪ್ರದೇಶದ 7 ವರ್ಷಗಳ ಇಳುವರಿಯೊಂದಿಗೆ ತಾಳೆ ಮಾಡಲಾಗುತ್ತದೆ. ಇದರಲ್ಲಿ ಪ್ರಸಕ್ತ ಸಾಲಿನ ಬೆಳೆ ಇಳುವರು 7 ವರ್ಷಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿಬೇಕು. ಅಂದರೆ ಮಾತ್ರ ಬೆಳೆ ಹಾನಿ. ಅಲ್ಲದೇ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿರುತ್ತದೆಯೋ ಅಷ್ಟೇ ಪ್ರಮಾಣದ ಪರಿಹಾರ ನೀಡಲಾಗುತ್ತದೆ. ಇದು ಅವೈಜ್ಞಾನಿಕ ಎಂಬುದು ರೈತರ ಅಭಿಪ್ರಾಯ. ಕೆಲವು ಕಡೆಗಳಲ್ಲಿ ಇಳುವರಿ ಉತ್ತಮವಾಗಿ ಬಂದಿದ್ದರೂ ಬೆಳೆಹಾನಿ ಪರಿಹಾರಕ್ಕೆ ಅರ್ಜಿ ಹಾಕಲಾಗಿದೆ. ಹಾಗಾಗಿ ನಿಮಗೆ ಪರಿಹಾರ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾನಿಯಾಗದೇ ಹೇಗೆ ನಾವು ಬೆಳೆವಿಮಾ ಪರಿಹಾರಕ್ಕೆ ಅರ್ಜಿ ಹಾಕುತ್ತೇವೆ ಎಂಬುದು ರೈತರ ಆರೋಪ.

ನಷ್ಟವಾಗಿರುವ ಬೆಳೆಗಳಿಗೆ ರೈತರು ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆವಿಮೆ ತುಂಬಿದ್ದಾರೆ. ಈ ವರೆಗೂ ಪರಿಹಾರದ ಹಣ ಜಮೆಯಾಗಿಲ್ಲ. ಜಿಲ್ಲಾಡಳಿತವು ಬೆಳೆವಿಮೆ ಪರಿಹಾರದ ಮೊತ್ತ ರೈತರ ಖಾತೆಗೆ ಜಮೆಯಾಗಿದೆ ಎಂದು ಸುಳ್ಳು ಹೇಳುತ್ತಿದೆ. ಎಷ್ಟು ರೈತರಿಗೆ ಪರಿಹಾರ ಬಿಡುಗಡೆಯಾಗಿದೆ ಎಂಬುದರ ಸ್ಪಷ್ಟ ಮಾಹಿತಿ ನೀಡಲಿ ಎಂದು ಕರ್ನಾಟಕ ರೈತಸೇನೆ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಹೇಳಿದರು.ಕಳೆದ ಸಾಲಿನ ಮುಂಗಾರು ಬೆಳೆ ಹಾನಿಗೆ ಈಗಾಗಲೇ ಹಲವು ರೈತರ ಖಾತೆಗೆ ಜಮಾ ಆಗಿದೆ. ಕೆಲವೇ ಕೆಲವು ರೈತರಿಗೆ ಸಮಸ್ಯೆಯಾಗಿದೆ. ವಿಮೆ ಮಾಡಿಸಿದ ಎಲ್ಲ ರೈತರಿಗೂ ಪರಿಹಾರ ಬರುವುದಿಲ್ಲ. ಹಾನಿಯಾಗಿರುವ ಬೆಳೆಗಳಿಗೆ ಮಾತ್ರ ವಿಮಾ ಪರಿಹಾರ ನೀಡಲಾಗುತ್ತದೆ ಎಂದು ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.ಯಾವ ತಾಲೂಕಲ್ಲಿ ಎಷ್ಟೆಷ್ಟು ರೈತರು:

ಜಿಲ್ಲೆ ಎಷ್ಟು ರೈತರು? ಕ್ಷೇತ್ರ(ಹೆಕ್ಟೇರ್‌ಗಳಲ್ಲಿ)

ಅಳ್ನಾವರ 3670 2164.76

ಅಣ್ಣಿಗೇರಿ 10076 12325.27

ಧಾರವಾಡ 21953 17762.80

ಹುಬ್ಬಳ್ಳಿ(ಗ್ರಾಮೀಣ) 19715 22718.91

ಹುಬ್ಬಳ್ಳಿ ಶಹರ 1248 1428.21

ಕಲಘಟಗಿ 21876 16213.81

ಕುಂದಗೋಳ 39774 37682.85

ನವಲಗುಂದ 21104 25929.28

ಒಟ್ಟು 139416 136225.88

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ