- ಆಷಾಡ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ
ಭಾರತ ವೈವಿಧ್ಯತೆ ಮತ್ತು ವಿವಿಧತೆಯಲ್ಲಿ ಏಕತೆ ಒಳಗೊಂಡ ದೇಶ. ಈ ದೇಶದಲ್ಲಿ ನಾಡು. ನುಡಿ. ನೆಲ. ಜಲ ಜೊತೆಗೆ ಸಂಸ್ಕಾರ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.
ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಳೇಕಲ್ಲಹಳ್ಳಿಯ ಕೃಷಿಕ ಲಯನ್ಸ್ ಎಲ್. ಗೋಪಿಕೃಷ್ಣ ಮನೆಯಂಗಳದಲ್ಲಿ ಐಸಿರಿ ಫೌಂಡೇಷನ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ , ಲಯನ್ಸ್ ಕ್ಲಬ್ ಚಿಕ್ಕಮಗಳೂರು ಇವರ ಸಹಯೋಗದಲ್ಲಿ ಆಷಾಡ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.ಶ್ರಾವಣ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳಿ ನಾವು ಒಳ್ಳೆಯದನ್ನು ಮಾಡಬೇಕು. ನಾಡುನುಡಿ ಜೊತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಮುಂದಿನ ಯುವ ಪೀಳಿಗೆಗೆ ಇವುಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅಭಿಮಾನ ಬೆಳೆಸುತ್ತಿವೆ. ಇದರ ಜೊತೆ ನಾವೂ ಸಹ ಕೈ ಜೋಡಿಸಬೇಕು. ಪ್ರತೀ ಹಳ್ಳಿ ಗಳಿಗೂ ಇಂತಹ ಸಂಸ್ಕೃತಿ ತಲುಪುತ್ತಿರುವುದು ಸಂತಸ ತಂದಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಸಾಹಿತಿ ಚೆಟ್ನಳ್ಳಿ ಮಹೇಶ್ ಮಾತನಾಡಿ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಗಾಧೆಯಂತೆ ಗ್ರಾಮೀಣ ಭಾಗದ ಜನರು ಅನುಭವಗಳ ಮೂಲಕ ತಾವೂ ಜೀವನ ನಡೆಸುತ್ತಾ ಬೇರೆಯವರಿಗೂ ಮಾದರಿಯಾಗಿ ಬದುಕುತ್ತಿದ್ದಾರೆ. ನಾಡು ನುಡಿ ಬಗ್ಗೆ ನಮ್ಮ ಗ್ರಾಮೀಣರಿಗೆ ಅತಿಯಾದ ಪ್ರೀತಿಯಿದ್ದು ಅವುಗಳನ್ನು ಉಳಿಸುವ ಕೆಲಸ ಇಲ್ಲಿಂದಲೇ ಆಗುತ್ತಿದೆ. ಶಿಕ್ಷಣ ಪ್ರಜ್ಞಾವಂತರಾಗಲು ಬೇಕು. ಜೀವನ ನಡೆಸಲು ಶಿಕ್ಷಣದ ಜೊತೆಗೆ ಸಂಸ್ಕೃತಿ ಅವಶ್ಯಕತೆ ಯಿದೆ. ಹಿರಿಯರ ಅನುಭವವನ್ನು ಆದರ್ಶವಾಗಿಟ್ಟುಕೊಂಡು ಹಳ್ಳಿಗಳು ಇಂದು ಮಾದರಿಯಾಗುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಬಿಳೇಕಲ್ಲಹಳ್ಳಿ ಮಾದರಿ ಗ್ರಾಮವಾಗಿದೆ ಎಂದರು.
ಲಯನ್ಸ್ ಅಧ್ಯಕ್ಷ ಟಿ ನಾರಾಯಣಸ್ವಾಮಿ, ಮಾಧ್ಯಮ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಡಾ.ಹರಿಕೃಷ್ಣ, ಗೋಪಿಕೃಷ್ಣ, ಗಾಯಕ ಚಂದನ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸಖರಾಯಪಟ್ಟಣ ಸಮೀಪದ ಬಿಳೇಕಲ್ಲಹಳ್ಳಿಯ ಕೃಷಿಕ ಲಯನ್ಸ್ ಎಲ್ ಗೋಪಿಕೃಷ್ಣ ಮನೆಯಂಗಳದಲ್ಲಿ ಆಷಾಡ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಶಾಸಕ ತಮ್ಮಯ್ಯ ಮಾತನಾಡಿದರು.