)
ಉಡುಪಿ: ನಗರದ ಕಿನ್ನಿಮುಲ್ಕಿಯ ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ 18ನೇ ಪರ್ಯಾಯ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ, ನೆರವು, ಸೌಲಭ್ಯಗಳ ವಿತರಣೆ ಜ.17ರಂದು ಕಿನ್ನಿಮುಲ್ಕಿ ಜಂಕ್ಷನ್ ಬಳಿಯ ಭವ್ಯ ವೇದಿಕೆಯಲ್ಲಿ ಸಂಪನ್ನಗೊಳ್ಳಲಿದೆ. ಈ ಬಗ್ಗೆ ಕಾರ್ಯಕ್ರಮದ ರೂವಾರಿ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಸಂಜೆ 7 ಗಂಟೆಗೆ ಕಾರ್ಯಕ್ರಮವನ್ನು ಸ್ವೀಕರ್ ಯು.ಟಿ.ಖಾದರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ.ಕೃಷ್ಣ ಪ್ರಸಾದ್ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ 160ಕ್ಕೂ ಅಧಿಕ ಅಂಗನವಾಡಿಗಳಿಗೆ ಕುಕ್ಕರ್ ವಿತರಣೆ, 100 ಶಾಲೆಗಳಿಗೆ ಫ್ಯಾನ್ ವಿತರಣೆ, 100 ಸ್ಪೋರ್ಟ್ಸ್ ಕಿಟ್ ವಿತರಣೆ, ಅಂಗನವಾಡಿಗಳಿಗೆ ಖುರ್ಚಿ ವಿತರಣೆ, ಆರೋಗ್ಯ ನಿಧಿ ವಿತರಣೆ, ರಿಕ್ಷಾ ಚಾಲಕರಿಗೆ ಇನ್ಸೂರೆನ್ಸ್ ಪಾಲಿಸಿ ವಿತರಣೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವನ್ನು ಕ್ರಮವಾಗಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಎಂಎಲ್ಸಿ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಆಂಧ್ರದ ವೈಎಸ್ಆರ್ಸಿಪಿ ಪಕ್ಷದ ರಾಜ್ಯ ವಕ್ತಾರ ಗಂಟಾ ನರಹರಿ ವಿತರಣೆ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಶ್ರೀಕೃಷ್ಣ ಗ್ರೂಪ್ ಡ್ಯಾನ್ಸ್ ಸದಸ್ಯ ಪ್ರಶಾಂತ ಆಚಾರ್ಯ, ಹರೀಶ್ ಉಪಸ್ಥಿತರಿದ್ದರು.