ಔರಾದ್: ನ್ನತ ನಾಗರೀಕತೆ ನಿರ್ಮಾಣದಲ್ಲಿ ನಮ್ಮ ಮಾತೃಭಾಷೆ ಹಾಗೂ ಸಂಸ್ಕೃತಿ ತಳಪಾಯವಾಗಿರುತ್ತದೆ ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ನುಡಿದರು.
ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿ, ಕನ್ನಡವೆಂದರೆ ಒಂದು ಭಾಷೆಯಲ್ಲ ಅದು ಸಮಗ್ರ ಜೀವನ ಮೌಲ್ಯಗಳ ಸಂಗಮವಾಗಿದೆ. ಕನ್ನಡಪರ ಕಾಳಜಿ ಇಟ್ಟುಕೊಂಡು ಗಡಿಯಲ್ಲಿ ಕನ್ನಡದ ಬೆಳವಣಿಗೆಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ತಾಲೂಕು ಆಡಳಿತದ ಕಾರ್ಯ ಶ್ಲಾಘನೀಯ ಎಂದರು.
ಅಮರೇಶ್ವರ ಪದವಿ ಕಾಲೇಜು ಪ್ರಾಚಾರ್ಯೆ ಡಾ. ಪ್ರೇಮಾ ಹೂಗಾರ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಆರ್.ಪಿ ಮಠ ಮಾತನಾಡಿದರು.ಪತ್ರಕರ್ತ ಅಮರಸ್ವಾಮಿ ಸ್ಥಾವರಮಠ, ಕಸಾಪ ಸಂಚಾಲಕ ಅಶೋಕ ಶೆಂಬೆಳ್ಳೆ, ಉತ್ತಮ ಜಾಧವ, ಶಿವರಾಮ ರಾಠೋಡ, ಉತ್ತಮ ದಂಡೆ, ಸಿಕಂದರ್ ಚವ್ಹಾಣ, ಶೇಖ್ ಮುಜೀಬ್, ಪ್ರೀಯಾ ಮಿಲಿಂದ್ ಸೇರಿದಂತೆ ಇನ್ನಿತರರಿದ್ದರು.
ಮಕ್ಕಳೊಂದಿಗೆ ತಹಸೀಲ್ದಾರ್ ಸಂವಾದ
ಸಮಾರಂಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ತಹಸೀಲ್ದಾರ್ ಮಹೇಶ ಪಾಟೀಲ್, ಹಲವು ಕನ್ನಡದ ಪ್ರಶ್ನೆಗಳನ್ನು ಕೇಳಿ ಮಕ್ಕಳಲ್ಲಿನ ಕನ್ನಡ ಜ್ಞಾನದ ಕುರಿತು ಪರಿಶೀಲಿಸಿದರು. ಕನ್ನಡ ನಾಡು ನುಡಿ ವಿಚಾರಗಳು, ಕವಿಗಳು, ಲೇಖಕರು, ವಚನಕಾರರು, ಕೀರ್ತನೆಕಾರರು, ಕರ್ನಾಟಕ ಏಕೀಕರಣ, ರಾಜ್ಯೋತ್ಸವಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಕನ್ನಡದ ಪ್ರಾಧ್ಯಾಪಕರಂತೆ ಕಂಡರು.