ನರಗುಂದ: ಕಳೆದ ಹಲವು ದಿನಗಳಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಪರಿಣಾಮ ಅಡುಗೆ ಅನಿಲ ಪೂರೈಕೆ ಸಮಸ್ಯೆಯಾಗಿರುವ ಹಿನ್ನೆಲೆ ಪಟ್ಟಣದಲ್ಲಿ ಗುರುವಾರ ಪೊಲೀಸ್ ರಕ್ಷಣೆಯಲ್ಲಿ ಗ್ರಾಹಕರಿಗೆ ಸಿಲಿಂಡರಗಳನ್ನು ವಿತರಿಸಲಾಯಿತು.
ನೂರಾರು ಗ್ರಾಹಕರು ತಮ್ಮ ಅಡುಗೆ ಅನಿಲದ ಸಿಲಿಂಡರ್ಗಳನ್ನು ಹೊತ್ತು ತಂದು ಎಜೆನ್ಸಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸರತಿ 300 ಮೀಟರ್ಗೂ ಹೆಚ್ಚಿತ್ತು. ಬಿರು ಬಿಸಿಲಲ್ಲಿಯೂ ಮಹಿಳೆಯರು, ಮಕ್ಕಳು, ವೃದ್ಧರು ಗ್ಯಾಸ್ ಸಿಲಿಂಡರ್ಗಾಗಿ ಕಾಯುತ್ತಿದ್ದರು.
ಎರಡು ಏಜೆನ್ಸಿ: ತಾಲೂಕಿನಲ್ಲಿ ಪಟ್ಟಣ ಹಾಗೂ ಕೊಣ್ಣೂರು ಸೇರಿದಂತೆ ಒಟ್ಟು ಎರಡು ಕಡೆ ಅಡುಗೆ ವಿತರಣಾ ಏಜೆನ್ಸಿಗಳಿವೆ. ಪಟ್ಟಣದಲ್ಲಿ ಇಂಡೇನ್ ಗ್ಯಾಸ್ ಇದ್ದು, ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಭಾರತ ಗ್ಯಾಸ್ ಏಜೆನ್ಸಿ ಇದೆ. ತಾಲೂಕಿನಲ್ಲಿ ಒಟ್ಟು 20 ಸಾವಿರಕ್ಕಿಂತ ಹೆಚ್ಚು ಜನರು ಗ್ಯಾಸ್ ಬಳಕೆದಾರರು ಇದ್ದಾರೆ. ಈಗಾಗಲೇ 2100 ಸಿಲಿಂಡರಗಳಿಗೆ ಬೇಡಿಕೆ ಬಂದಿದೆ. ಆದರೆ ನರಗುಂದಕ್ಕೆ ಪ್ರತಿದಿನ ಕೇವಲ 300 ಗ್ಯಾಸ ಸಿಲಿಂಡರ್ಗಳು ಪೂರೈಕೆಯಾಗುತ್ತಿದ್ದು, ಜನರ ಬೇಡಿಕೆಯಂತೆ ಅಡುಗೆ ಅನಿಲ ಪೂರೈಕೆಯಾಗುತ್ತಿಲ್ಲ.ಕೆಲವು ಗ್ರಾಹಕರು ಮುಂದಿನ ದಿನಗಳಲ್ಲಿ ಅಡುಗೆ ಅನಿಲದ ಅಭಾವವಾಗಬಹುದು ಎಂದು ಭಾವಿಸಿ ಅವಶ್ಯವಿಲ್ಲದಿದ್ದರೂ ಸಿಲಿಂಡರ್ ಕೊಳ್ಳಲು ಬರುತ್ತಿದ್ದಾರೆ. ಇದು ಕೂಡ ಸಿಲಿಂಡರ್ ಅಭಾವಕ್ಕೆ ಒಂದು ಕಾರಣವಾಗಿದೆ ಎಂದು ಪಟ್ಟಣದ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮಾಲೀಕ ಚನ್ನಬಸಪ್ಪ ಕೋರಿ ತಿಳಿಸಿದರು.ಪೂರ್ವಭಾವಿ ಸಭೆ ಮುಂದೂಡಿಕೆ