೧೩,೬೭೫ ಜನರಿಗೆ ದರ್ಶನ: ಟಿಬೇಟಿಯನ್ ಮುಖ್ಯ ಪ್ರತಿನಿಧಿ ಅಧಿಕಾರಿ ಜಿಗ್ಮೆ ಸುಲ್ಟ್ರಿಮ್ ಮಾಹಿತಿ
ನೊಬೆಲ್ ಪುರಸ್ಕೃತ ಟಿಬೇಟಿಯನ್ ಧರ್ಮ ಗುರು ದಲೈಲಾಮಾ ಅವರ ೨೮ನೇ ಮುಂಡಗೋಡ ಭೇಟಿಯಲ್ಲಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಸುಮಾರು ೧೩,೬೭೫ ಜನರಿಗೆ ದರ್ಶನ ನೀಡಿದ್ದಾರೆ ಎಂದು ಟಿಬೇಟಿಯನ್ ಮುಖ್ಯ ಪ್ರತಿನಿಧಿ ಅಧಿಕಾರಿ ಜಿಗ್ಮೆ ಸುಲ್ಟ್ರಿಮ್ ಹೇಳಿದರು.
ಶನಿವಾರ ಇಲ್ಲಿಯ ಟಿಬೇಟಿಯನ್ ಲಾಲನಿ ಲಾಮಾ ಕ್ಯಾಂಪ್ ನಂ. ೨ರ ಟಿಬೇಟಿಯನ್ ಸೆಟ್ಲಮೆಂಟ್ ಕಚೇರಿಯಲ್ಲಿ ಈ ವಿಷಯ ತಿಳಿಸಿದರು. ದರ್ಶನ ಪಡೆದವರ ಪೈಕಿ ೨,೩೬೨ ಸ್ಥಳಿಯರು ಹಾಗೂ ಇನ್ನುಳಿದವರು ಬೇರೆ ಬೇರೆ ಕಡೆಯಿಂದ ಬಂದವರಾಗಿದ್ದಾರೆ. ಸಮಯದ ಅಭಾವದಿಂದ ಮತ್ತಷ್ಟು ಜನರಿಗೆ ದರ್ಶನ ನೀಡಲಾಗಲಿಲ್ಲ. ಇದರಿಂದ ಯಾರಿಗಾದರೂ ಬೇಸರವಾದರೆ ವಿಷಾದಿಸುತ್ತೇವೆ. ೨೦೨೬ರ ಡಿಸೆಂಬರ್ ಹಾಗೂ ೨೦೨೭ ಜನವರಿಯಲ್ಲಿ ಮತ್ತೆ ಇಲ್ಲಿಗೆ ಆಗಮಿಸಲಿರುವ ದಲೈಲಾಮಾ ಅವರಿಂದ ಸಾರ್ವಜನಿಕರಿಗೆ ದರ್ಶನ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.ದಲೈಲಾಮಾ ನಿರ್ಗಮನಕ್ಕೆ ಕ್ಷಣಗಣನೆ:
ದಲೈಲಾಮಾ ಅವರ ಸಹೋದರ ನಿಧನ ಹೊಂದಿ ೧ ವರ್ಷ ಕಳೆದ ಹಿನ್ನೆಲೆ ಭಾನುವಾರ ಟಿಬೇಟಿಯನ್ ಕಾಲನಿಯಲ್ಲಿ ಅವರ ಪುಣ್ಯಸ್ಮರಣೆ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಪೂಜೆಯಲ್ಲಿ ದಲೈ ಲಾಮಾ ತೊಡಗಿಸಿಕೊಳ್ಳಲಿದ್ದಾರೆ. ಸೋಮವಾರ ಬೆಳಗಿನ ಜಾವ ಇಲ್ಲಿಂದ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ವಿಮಾನ ಮೂಲಕ ಹಿಮಾಚಲ ಪ್ರದೇಶದ ಧರ್ಮಶಾಲಾ ಪ್ರವೇಶಿಸಲಿದ್ದಾರೆ ಎಂದು ಜಿಗ್ಮೆ ಸುಲ್ಟ್ರಿಮ್ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಟಿಬೇಟಿಯನ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಕುಂಗಾ, ಟಿಬೇಟಿಯನ್ ಮುಖಂಡ ಜಂಪಾ ಲಾಮಾ ಮುಂತಾದವರಿದ್ದರು.