ಡಂಬಳ: ಕೋಮು ಸೌಹಾರ್ದತೆಯ ಹಾಗೂ ಜನಜಾಗೃತಿ ಜಾತ್ರೆ ಎಂಬ ಖ್ಯಾತಿ ಪಡೆದಿರುವ ಡಂಬಳ ತೋಂಟದಾರ್ಯ ಮಠದ ಮದರ್ಧನಾರೀಶ್ವರ ರಥೋತ್ಸವ ಮಂಗಳವಾರ ಸಂಜೆ ಮಘಾ ನಕ್ಷತ್ರದಲ್ಲಿ ಅಪಾರ ಭಕ್ತಸಮೂಹದ ನಡುವೆ ನೆರವೇರಿತು.
ತೇರಿನ ಮುಂದೆ ಸಿದ್ದಲಿಂಗೇಶ್ವರರು ರಚಿಸಿದ ಷಟ್ಸ್ಥಲ ಜ್ಞಾನ ಸಾರಾಮೃತ ಹಾಗೂ ತಾಳೆಗರಿಯಲ್ಲಿ ರಚಿಸಿದ ವಚನ ಕಟ್ಟುಗಳನ್ನು ಇರಿಸಿ ಅಡ್ಡಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ಮದರ್ಧನಾರೀಶ್ವರರ ಹಾಗೂ ಯಡೆಯೂರ ಸಿದ್ದಲಿಂಗೇಶ್ವರರ ಭಾವಚಿತ್ರ, ಯಡೆಯೂರ ಸಿದ್ದಲಿಂಗೇಶ್ವರರು ರಚಿಸಿದ ಷಟಸ್ಥಲ ಜ್ಞಾನ ಸಾರಮೃತ ವಚನ ಕಟ್ಟುಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ತೇರಿನ ಮುಂದೆ ಭಕ್ತರಂತೆ ಸಾಗಿದ್ದು ವಿಶೇಷವಾಗಿತ್ತು.
ಕೆಳದಿ ಅರಸರು ನೀಡಿದ್ದ ಬಂಗಾರದ ಪಾದುಕೆಯನ್ನೂ ಪಲ್ಲಕ್ಕಿಯಲ್ಲಿರಿಸಿ ರಾಜಗೊಂಡೆ ಹಾಗೂ ಹೂವಿನಿಂದ ಅಲಂಕರಿಸಿದ್ದ ಪಲ್ಲಕ್ಕಿಯ ದರ್ಶನವನ್ನು ಭಕ್ತರು ಪಡೆದರು. ವಿವಿಧ ಡೊಳ್ಳು, ಝಾಂಜ್ ಮೇಳಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು. ಭಕ್ತರು ರಥಕ್ಕೆ ಉತ್ತತ್ತಿ ಹಾಗೂ ಹೂವುಗಳನ್ನು ಅರ್ಪಿಸಿ ಧನ್ಯತೆ ಪಡೆದರು.ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ್, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಯಲ್ಲಪ್ಪ ದಂಡಿನ, ಉಪಾಧ್ಯಕ್ಷ ಯಂಕಣ್ಣ ಗಡಗಿ, ಕಾರ್ಯದರ್ಶಿ ಬುಡ್ನೆಸಾಬ ಅತ್ತಾರ, ಖಜಾಂಚಿ ತಿಮ್ಮಪ್ಪ ವಡ್ಡರ, ಜಿ.ವಿ. ಹಿರೇಮಠ, ಬಸವರಡ್ಡಿ ಬಂಡಿಹಾಳ, ಮಲ್ಲಪ್ಪ ಮಠದ, ಮುದಿಯಪ್ಪ ಗದಗಿನ, ಗವಿಸಿದ್ಧಪ್ಪ ಹಳ್ಳಾಕಾರ, ಮಹೇಶ ಗಡಗಿ, ಮಲ್ಲಿಕಾರ್ಜುನ ಪ್ಯಾಟಿ, ರಾಘು ಹಡಪದ, ದುರಗಪ್ಪ ಹರಿಜನ, ರೇವಣಸಿದ್ಧಪ್ಪ ಕರಿಗಾರ, ಬಸವರಾಜ ಹಮ್ಮಗಿ, ಮುದಕಪ್ಪ ಮೇವುಂಡಿ, ಗೌಸುಸಾಬ ಆಲೂರ, ನಾಗರಾಜ ಗಡಗಿ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು.