ದಾನಮ್ಮ ಸಾಮಾಜಿಕ, ವೈಚಾರಿಕ ಕ್ರಾಂತಿ ಮಾಡಿದ ಶರಣೆ: ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು

KannadaprabhaNewsNetwork |  
Published : Nov 15, 2025, 02:00 AM IST
ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ಸಂಸಾರದಲ್ಲಿದ್ದುಕೊಂಡು ಸದ್ಗತಿ ಹೊಂದಿ ಧರ್ಮ, ಸಂಸ್ಕಾರ, ಸಂಸ್ಕೃತಿ ಕುರಿತು ಜಾಗೃತಿ ಮೂಡಿಸಿದ ದಾನಮ್ಮ ಕೇವಲ ಶರಣೆ ಅಲ್ಲ, ನಂಬಿದ ಭಕ್ತರಿಗೆ ವರ ನೀಡುವ ವರದಾನೇಶ್ವರಿಯೂ ಹೌದು.

ಗದಗ: 12ನೇ ಶತಮಾನದಲ್ಲಿ ಜನಸೇವೆ, ಧರ್ಮಜಾಗೃತಿ ಮತ್ತು ಕಾಯಕ- ದಾಸೋಹಗೈದ ಗುಡ್ಡಾಪುರದ ಶರಣೆ ದಾನಮ್ಮ ಶರಣೆಯಾಗಿ ನಂಬಿದ ಭಕ್ತಸಮೂಹಕ್ಕೆ ವರ ನೀಡುವವಳು ದಾನೇಶ್ವರಿ ದೇವಿಯಾಗಿದ್ದಾಳೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.

ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ವರದಾನೇಶ್ವರಿ ಮಹಿಳಾ ಮಂಡಳದ ಆಶ್ರಯದಲ್ಲಿ ಶರಣೆ ದಾನಮ್ಮ ತಾಯಿಯ 19ನೇ ವರ್ಷದ ಪ್ರವಚನ ಮಾಲಿಕೆಗೆ ಚಾಲನೆ ನೀಡಿ ಮಾತನಾಡಿದರು.

ಸಂಸಾರದಲ್ಲಿದ್ದುಕೊಂಡು ಸದ್ಗತಿ ಹೊಂದಿ ಧರ್ಮ, ಸಂಸ್ಕಾರ, ಸಂಸ್ಕೃತಿ ಕುರಿತು ಜಾಗೃತಿ ಮೂಡಿಸಿದ ದಾನಮ್ಮ ಕೇವಲ ಶರಣೆ ಅಲ್ಲ, ನಂಬಿದ ಭಕ್ತರಿಗೆ ವರ ನೀಡುವ ವರದಾನೇಶ್ವರಿಯೂ ಹೌದು. 12ನೇ ಶತಮಾನದಲ್ಲಿ ಸಾಮಾಜಿಕ, ವೈಚಾರಿಕ ಕ್ರಾಂತಿ ಮಾಡಿದ ದಿಟ್ಟ ಶರಣೆ ಎಂದರು.

ದಾನಮ್ಮದೇವಿಯ ಪುರಾಣ- ಪ್ರವಚನವನ್ನು ಭಕ್ತಿ ಮತ್ತು ದಾನಕ್ಕೆ ಹೆಸರಾಗಿರುವ ಬಸವೇಶ್ವರ ನಗರದಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಮುನ್ನಡೆಸಿಕೊಂಡು ಬಂದಿರುವ ಇಲ್ಲಿನ ಭಕ್ತಾದಿಗಳ ಹಾಗೂ ಸಂಘಟಕರ ಭಕ್ತಿ ಹಾಗೂ ದಾನ ಗುಣ ಮೆಚ್ಚುವಂತದ್ದು. ಈ ಪರಂಪರೆ ಮುಂದುವರಿಯಲಿ. ಕಾಯಕ ಮತ್ತು ದಾಸೋಹದಿಂದ ಮನುಷ್ಯ ಸಂತೃಪ್ತಿ ಹೊಂದುತ್ತಾನೆ ಹಾಗೆಯೇ ಪುರಾಣ ಪ್ರವಚನ ಶ್ರವಣದಿಂದ ಸದ್ಭಾವನೆ ಮೂಡಿ ಜ್ಞಾನ ಇಮ್ಮಡಿಗೊಳ್ಳುವುದು ಎಂದರು.

ಸ್ವಚ್ಛ ಮನಸ್ಸು ಇದ್ದಲ್ಲಿ ದೇವರು ನೆಲೆಸಿರುತ್ತಾನೆ ಎಂಬುದನ್ನು ಗುರುವಿನಿಂದ ತಿಳಿಯಬಹುದು. ಗುರುವಿನ ಸನ್ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಜೀವನ್ಮುಕ್ತಿ ಹೊಂದಬೇಕು. ಮಕ್ಕಳಿಗೆ ಸದ್ವಿನಿಯ, ಸದಾಚಾರಗಳನ್ನು, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ರೂಢಿಸಬೇಕು. ಇದಕ್ಕೆಲ್ಲ ಪ್ರವಚನ ಮಾಲಿಕೆ ದಾರಿದೀಪವಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುರಾಣ ಸಮಿತಿ ಅಧ್ಯಕ್ಷೆ ಶಾರದಾ ಹಚಡದ ಮಾತನಾಡಿ, ನೀತಿ, ಸತ್ಯ, ಧರ್ಮ ಮತ್ತು ಧಾರ್ಮಿಕ ಕಾಯಕದ ಮಾರ್ಗವನ್ನು ಅನುಸರಿಸಿದ ದಾನಮ್ಮ ಶ್ರದ್ಧಾಭಕ್ತಿಯುಳ್ಳ ಭಕ್ತರಿಗೆ ಬೇಡಿದ ವರ ನೀಡಿ ಕರುಣಿಸಿದ ಮಾತೆ. ಶರಣ ಪರಂಪರೆಯ ಆದರ್ಶಗಳನ್ನು ಪಾಲಿಸಿ ಇತರರಿಗೆ ಮಾದರಿಯಾದ ಶರಣೆ ಎಂದರು.

ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳು ರಚಿಸಿದ ದಾನಮ್ಮದೇವಿ ಪುರಾಣವನ್ನು ನಂದಿಕೇಶ್ವರದ ವೀರೇಶ್ವರ ಶಾಸ್ತ್ರಿಗಳಿಂದ ಮೊದಲ ದಿನ ಆರಂಭಗೊಂಡ ಪುರಾಣ ಪ್ರವಚನಕ್ಕೆ ಮೃತ್ಯುಂಜಯ ಹಿರೇಮಠ, ಹೇಮಂತಕುಮಾರ ಹಿರೇಮಠ ಸಂಗೀತ ಸಾಥ್ ನೀಡಿದರು.

ಹಿರಿಯ ಟ್ರಸ್ಟಿ ರಾಚಪ್ಪ ಮಿಣಜಗಿ ಹಾಗೂ ಗೌರವಾಧ್ಯಕ್ಷೆ ಶೈಲಜಾ ಕೊಡೇಕಲ್ ಮಾತನಾಡಿದರು. ಈ ವೇಳೆ ಟ್ರಸ್ಟಿಗಳಾದ ಶಿವಬಸಪ್ಪ ಯಂಡಿಗೇರಿ, ಶಿವಕುಮಾರ ಬೇವಿನಮರದ, ಶಂಭು ಕಾರಕಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುರೇಖಾ ಪಿಳ್ಳಿ ಸ್ವಾಗತಿಸಿದರು. ಜ್ಯೋತಿ ಹೇರಲಗಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ