ಕನ್ನಡಪ್ರಭ ವಾರ್ತೆ ಸಾಗರ
ನೃತ್ಯ ಉತ್ಸವಗಳಿಂದ ಕಲಾವಿದರಿಗೆ ನಿರಂತರವಾಗಿ ಪ್ರೋತ್ಸಾಹ ಸಿಗುತ್ತಿದ್ದು, ಪ್ರತಿಯೊಬ್ಬ ಕಲಾವಿದರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಕಲಾಶ್ರೀ ಪುರಸ್ಕೃತ ನೃತ್ಯಗುರು ಮಿನಾಲ್ ಪ್ರಭು ಹೇಳಿದರು. ಪಟ್ಟಣದ ಪರಿಣಿತಿ ಕಲಾಕೇಂದ್ರ ಹಮ್ಮಿಕೊಂಡಿದ್ದ ಎರಡು ದಿನಗಳ ಪರಿಣಿತಿ ರಾಷ್ಟ್ರೀಯ ನೃತ್ಯ, ಯೋಗ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆ ನೃತ್ಯ ಕಲಿಕೆಗೆ, ಕಾರ್ಯಕ್ರಮಗಳಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಆದರೆ, ಇಂದಿನ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಮೂಲಕ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.ಪರಿಣಿತಿ ಕಲಾಕೇಂದ್ರ ಗೌರವಾಧ್ಯಕ್ಷೆ ವೀಣಾ ಬೆಳೆಯೂರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಆಯೋಜಿಸಿರುವ ಈ ಉತ್ಸವದಲ್ಲಿ ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಹೆಸರಾಂತ ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳ ಕಲಾವಿದರು ಪ್ರದರ್ಶನ ನೀಡುವುದರಿಂದ ವೈವಿಧ್ಯಮಯ ಕಲಾ ಪ್ರಕಾರಗಳ ಪರಿಚಯ ಸ್ಥಳೀಯ ಕಲಿಕಾರ್ಥಿಗಳಿಗೆ ಆಗುತ್ತದೆ. ಸ್ಥಳೀಯ ಪ್ರತಿಭೆಗಳಿಗೂ ರಾಷ್ಟ್ರೀಯಮಟ್ಟದ ವೇದಿಕೆಗಳಲ್ಲಿ ಪ್ರದರ್ಶನ ನೀಡಲು ಅವಕಾಶ ಸಿಗುತ್ತದೆ ಎಂದು ಹೇಳಿದರು.
ಪರಿಣಿತಿ ಕಲಾ ಕೇಂದ್ರದ ಮುಖ್ಯಸ್ಥ ವಿದ್ವಾನ್ ಎಂ. ಗೋಪಾಲ್ ಮಾತನಾಡಿ, 15 ವರ್ಷಗಳಿಂದ ಸಾಗರದಲ್ಲಿ ಪರಿಣಿತಿ ಕಲಾಕೇಂದ್ರವು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, 9 ವರ್ಷಗಳಿಂದ ರಾಷ್ಟ್ರೀಯ ನೃತ್ಯ ಉತ್ಸವ ನಡೆಸಲಾಗುತ್ತಿದೆ. ಸಾಗರದ ಜನತೆಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.ಉದ್ಯಮಿಗಳಾದ ಎಸ್.ಡಿ. ವೀರಪ್ಪ, ಟಿ.ವಿ.ಪಾಂಡುರಂಗ, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಕೆ.ಸಿದ್ದಪ್ಪ, ಸೋಮಶೇಖರ್, ಟಿ.ಎಂ. ಸುಬ್ಬರಾಯ, ಮೈತ್ರಿ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರಿನ ಮುದ್ರಿಕಾ ಫೌಂಡೇಶನ್ ಕಲಾವಿದರಿಂದ ಭರತನಾಟ್ಯ, ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಕೆ.ವಿ.ರಮೇಶ್ ಅವರಿಂದ ಬೊಂಬೆಯಾಟ, ವಿದೂಷಿ ಅದಿತಿ ಪ್ರಹ್ಲಾದ್ ಬೆಂಗಳೂರು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಕೇರಳದ ಪ್ರಸಿದ್ಧ ಗುರು ಕಲಾನಿಲಯಮ್ ವಾಸುದೇವನ್ ತಂಡದಿಂದ ಕಥಕ್ ನೃತ್ಯ ನಡೆಯಿತು.- - - -17ಕೆ.ಎಸ್.ಎ.ಜಿ.1: