ಹಿರಿಯೂರಿನ ನೆಹರು ಮಾರುಕಟ್ಟೆಯ ಸ್ಥಳಾಂತರ ಕಾರ್ಯಾಚರಣೆ ಪರಿಶೀಲಿಸಿದ ಸಚಿವರು

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಹಿರಿಯೂರು ಪಟ್ಟಣದ ನೆಹರು ಮಾರುಕಟ್ಟೆಯ ವ್ಯಾಪಾರಿಗಳ ಮನವಿಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾನುವಾರ ಬೆಳಗ್ಗೆ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳಾಂತರ ಕಾರ್ಯಾಚರಣೆ ಪರಿಶೀಲನೆ ನಡೆಸಿದರು.

- ಬೀದಿ ಬದಿಯ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕ್ರಮ

- ಪರಿಶೀಲನೆ ವೇಳೆ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್‌ ಭರವಸೆ- ಟ್ರಾಫಿಕ್‌ ನಿವಾರಣೆಗೆ ಸ್ಥಳಾಂತರ ಅನಿವಾರ್ಯ: ಪೌರಾಯುಕ್ತಕನ್ನಡಪ್ರಭ ವಾರ್ತೆ ಹಿರಿಯೂರುಹಿರಿಯೂರು ಪಟ್ಟಣದ ನೆಹರು ಮಾರುಕಟ್ಟೆಯ ವ್ಯಾಪಾರಿಗಳ ಮನವಿಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾನುವಾರ ಬೆಳಗ್ಗೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆಯವರು ಕಳೆದ ಎರಡು ದಿನಗಳ ಹಿಂದೆ ಟ್ರಾಫಿಕ್ ಸಮಸ್ಯೆಯ ಕಾರಣದಿಂದ ಮಾರ್ಕೆಟ್ ಮುಂದಿನ ಬಸ್ ನಿಲ್ದಾಣದ ವ್ಯಾಪಾರಿಗಳನ್ನು ಸಂತೇ ಮೈದಾನಕ್ಕೆ ಸ್ಥಳಾಂತರ ಮಾಡುವ ಕಾರ್ಯಾಚರಣೆ ಕೈಗೊಂಡ ಪರಿಣಾಮ ತರಕಾರಿ ವ್ಯಾಪಾರಿಗಳ ತಂಡ ಸಚಿವರ ಮೊರೆ ಹೋಗಿತ್ತು. ಈ ವೇಳೆ ವ್ಯಾಪಾರಿಗಳು ಇಲ್ಲಿಂದ ಸಂತೇ ಮೈದಾನಕ್ಕೆ ಸ್ಥಳಾಂತರ ಮಾಡಿದರೆ ಸಂಪೂರ್ಣ ವ್ಯಾಪಾರವೇ ಇಲ್ಲದಂತಾಗುತ್ತದೆ. ಮುಖ್ಯ ರಸ್ತೆಯಿಂದ ದೂರವಿದ್ದರೆ ವ್ಯಾಪಾರ ಆಗುವುದಿಲ್ಲ. ಇಲ್ಲಿಯೇ ಮಾರ್ಕೆಟ್‌ನ ಹಿಂಬದಿ ರಸ್ತೆಯಲ್ಲಿ ಒಂದು ಮಗ್ಗುಲಿಗೆ ಕುಳಿತು ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ವ್ಯಾಪಾರಿಗಳ ಬೇಡಿಕೆಗೆ ಉತ್ತರಿಸಿದ ಸಚಿವರು, ಈ ಭಾಗದಲ್ಲಿನ ಟ್ರಾಫಿಕ್ ಸಮಸ್ಯೆಗೆ ಇತಿಶ್ರೀ ಹಾಡಲೇಬೇಕಿದೆ. ಹಾಗಂತ ಇಲ್ಲಿನ ವ್ಯಾಪಾರಿಗಳ ದುಡಿಮೆಗೆ ತೊಂದರೆಯಾಗುವಂತಹ ನಿರ್ಧಾರ ಮಾಡುವುದಿಲ್ಲ. ಒಂದೆರಡು ದಿನದಲ್ಲಿ ಟ್ರಾಫಿಕ್ ಆಗದಂತೆ, ವ್ಯಾಪಾರಕ್ಕೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂದರು.ಪೌರಾಯುಕ್ತ ಎಚ್.ಮಹoತೇಶ್ ಮಾತನಾಡಿ, ಬಸ್ ಅಪಘಾತದ ನಂತರ ಈ ಭಾಗದಲ್ಲಿ ಎಲ್ಲೆಂದರಲ್ಲಿ ವ್ಯಾಪಾರ ಮಾಡುವುದು, ಹೂವಿನ ಮಾರ್ಕೆಟ್ ಗೆ ಬರುವವರು ಉಂಟು ಮಾಡುತ್ತಿದ್ದ ಟ್ರಾಫಿಕ್ ಗೆ ಕಡಿವಾಣ ಹಾಕಲು ನಗರಸಭೆ ವತಿಯಿಂದ ಕ್ರಮ ತೆಗೆದುಕೊಂಡಿದ್ದೇವೆ. ಮಾರ್ಕೆಟ್ ನ ಒಳಗೇ ಕುಳಿತು ವ್ಯಾಪಾರ ಮಾಡಲು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದೇವೆ. ಇಲ್ಲಿನವರ ಉಪಯೋಗಕ್ಕೆಂದೆ ನಿರ್ಮಿಸಿರುವ ಶೌಚಾಲಯವನ್ನು ಸುಸಜ್ಜಿತಗೊಳಿಸಲಾಗಿದೆ.

ಮಾರ್ಕೆಟ್ ನ ಒಳಗೆ ಬೆಳಕಿನ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಇದೀಗ ಸಚಿವರ ಬಳಿ ಅವರ ಅಹವಾಲು ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಜಯ್ ಕುಮಾರ್, ಆರೋಗ್ಯ ನಿರೀಕ್ಷಕಿ ಸಂಧ್ಯಾ, ನಾಗಲಕ್ಷ್ಮಿ, ಬಾಬು ಮುಂತಾದವರು ಹಾಜರಿದ್ದರು.

Share this article