ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿತ್ರದುರ್ಗದ ಔಷಧಿ ಮಾರಾಟ ಅಂಗಡಿ ಕೆಲಸಗಾರ ರೇಣುಕಾಸ್ವಾಮಿ (34) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ದರ್ಶನ್, ಅವರ ಗೆಳತಿ ಪವಿತ್ರಾಗೌಡ, ಸಹಚರರಾದ ಪಟ್ಟಣಗೆರೆ ವಿನಯ್, ಪವನ್, ಪ್ರದೋಶ್, ನಂದೀಶ್, ಕೇಶವ ಮೂರ್ತಿ, ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ದರ್ಶನ್ ಕಾರು ಚಾಲಕ ಲಕ್ಷ್ಮಣ್, ದೀಪಕ್ ಕುಮಾರ್, ನಾಗರಾಜ್, ನಿಖಿಲ್, ಕಾರ್ತಿಕ್ ಬಂಧನಕ್ಕೊಳಗಾಗಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ 6 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಾಗಡಿ ರಸ್ತೆಯ ಸುಮನಹಳ್ಳಿ ಸಮೀಪದ ರಾಜಕಾಲುವೆಯಲ್ಲಿ ಭಾನುವಾರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಯಿತು. ಈ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆಗಿಳಿದಾಗ ಕೊಲೆ ಕೃತ್ಯ ಬಯಲಾಗಿದೆ.
ಕೊಂದು ಸಹಚರರ ಶರಣಾಗತಿ ಮಾಡಿಸಿದ್ದ ದರ್ಶನ್:
ಅದೇ ರೀತಿ ಇನ್ಸ್ಟಾಗ್ರಾಂನಲ್ಲಿ ಪವಿತ್ರಾಗೌಡಳ ಖಾತೆಗೆ ಟ್ಯಾಗ್ ಮಾಡಿ ದರ್ಶನ್ ಅಭಿಮಾನಿಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೂಡ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುತ್ತಿದ್ದ. ಈ ಕಾಮೆಂಟ್ಗಳಿಗೆ ಆಕೆ ಆಕ್ಷೇಪಿಸಿದ್ದಳು. ಹೀಗಿದ್ದರೂ ಸಹ ಆತ ಕಾಮೆಂಟ್ ಮುಂದುವರೆಸಿದ್ದ. ಇದನ್ನು ದರ್ಶನ್ ಗಮನಕ್ಕೆ ಪವಿತ್ರಾ ತಂದಿದ್ದಳು.
ಆನಂತರ ರಾಜರಾಜೇಶ್ವರಿ ನಗರ ವ್ಯಾಪ್ತಿಯ ಪಟ್ಟಣಗೆರೆ ಗ್ರಾಮದಲ್ಲಿ ದರ್ಶನ್ ಸ್ನೇಹಿತ ದೀಪಕ್ ಪಾಲುದಾರಿಕೆಯ ಶೆಡ್ಗೆ (ಸಾಲ ತೀರಿಸದ ವಾಹನಗಳ ಜಪ್ತಿ ಮಾಡಿ ನಿಲ್ಲಿಸುವ ಜಾಗ) ರೇಣುಕಾಸ್ವಾಮಿಯನ್ನು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕರೆದೊಯ್ದಿದ್ದರು. ಆ ಶೆಡ್ಗೆ ಪವಿತ್ರಾ ಜತೆ ದರ್ಶನ್ ತೆರಳಿದ್ದರು. ಬಳಿಕ ಐದಾರು ತಾಸು ನಿರಂತರವಾಗಿ ರೇಣುಕ ಮೇಲೆ ಮನಬಂದಂತೆ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ಚಿತ್ರಹಿಂಸೆ ತಾಳಲಾರದೆ ರಾತ್ರಿ 12 ಗಂಟೆಗೆ ಸುಮಾರಿಗೆ ಆತ ಕೊನೆಯುಸಿರೆಳೆದಿದ್ದ.
ಸಿಸಿಟಿವಿ ಕ್ಯಾಮೆರಾ ಹೇಳಿದ ಸತ್ಯ:
ಹೀಗೆ ಏಕಾಏಕಿ ತಾವಾಗಿ ಠಾಣೆಗೆ ಬಂದು ಶರಣಾದ ಆರೋಪಿಗಳ ನಡವಳಿಕೆ ಬಗ್ಗೆ ಗುಮಾನಿಗೊಂಡ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆ ನಾಲ್ವರನ್ನು ತೀವ್ರ ಪ್ರಶ್ನಿಸಿದಾಗ ಮತ್ತೆ 7 ಮಂದಿ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆ 7 ಮಂದಿಯನ್ನು ಸೆರೆಹಿಡಿದು ವಿಚಾರಿಸಿದಾಗ ಅಂತಿಮವಾಗಿ ದರ್ಶನ್ ಹಾಗೂ ಅವರ ಗೆಳತಿ ಹೆಸರು ಬಾಯ್ಬಿಟ್ಟಿದ್ದಾರೆ.
ಕೊಲೆ ಪ್ರಕರಣದಲ್ಲಿ ತನ್ನ ಸಹಚರರ ಬಂಧನ ವಿಚಾರ ತಿಳಿದ ಕೂಡಲೇ ತಾವು ಪೊಲೀಸರ ಅತಿಥಿಯಾಗುವುದು ದರ್ಶನ್ ಅವರಿಗೆ ಖಚಿತವಾಗಿದೆ. ಹೀಗಾಗಿ ಮೈಸೂರಿನ ಪಂಚತಾರಾ ಹೋಟೆಲ್ನಲ್ಲಿ ತಂಗಿದ್ದ ವಿಚಾರ ತಿಳಿದು ಹೋಟೆಲ್ಗೆ ದರ್ಶನ್ ಬಂಧಿಸಲು ಪೊಲೀಸರು ತೆರಳಿದ್ದಾರೆ. ಆಗ ಯಾವುದೇ ರೀತಿ ಪ್ರತಿರೋಧ ಅಥವಾ ಕೂಗಾಟ ಮಾಡದೆ ಸುಮ್ಮನೆ ಹೋಟೆಲ್ ರೂಂನಿಂದ ಬಂದು ಪೊಲೀಸರ ಜೀಪ್ ಹತ್ತಿದ್ದಾರೆ. ಅಷ್ಟರಲ್ಲಿ ಬೆಂಗಳೂರಿನ ಆರ್.ಆರ್.ನಗರದಲ್ಲಿದ್ದ ಪವಿತ್ರಾಗೌಡಳನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ನಂತರ ಎಲ್ಲ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದು ಪ್ರಾಥಮಿಕ ಹಂತದ ವಿಚಾರಣೆ ನಡೆಸಿದ ಪೊಲೀಸರು, ಸಂಜೆ 5.30 ಗಂಟೆಗೆ ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ನಂತರ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆಗ ಪೊಲೀಸರು ಹೆಚ್ಚಿನ ತನಿಖೆಗೆ ವಶಕ್ಕೆ ನೀಡುವಂತೆ ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಗಳಿಗೆ 6 ದಿನಗಳು ಪೊಲೀಸ್ ಕಸ್ಟಡಿ ನೀಡಿದೆ.ಬಳಿಕ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಪವಿತ್ರಾಗೌಡ ಹೊರತುಪಡಿಸಿ ಇನ್ನುಳಿದ 11 ಮಂದಿಯನ್ನು ಕರೆತಂದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇತ್ತ ಮಡಿವಾಳದ ಮಹಿಳಾ ಸ್ವಾಂತನ ಕೇಂದ್ರಕ್ಕೆ ಪವಿತ್ರಾಗೌಡಳನ್ನು ಪೊಲೀಸರು ಕಳುಹಿಸಿದ್ದು, ಬುಧವಾರ ಬೆಳಗ್ಗೆ ಆಕೆಯನ್ನು ಮತ್ತೆ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.