ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಜಿಲ್ಲಾಡಳಿತಕ್ಕೆ ದಸಂಸ ಆಗ್ರಹ

KannadaprabhaNewsNetwork | Updated : May 30 2024, 12:48 AM IST

ಸಾರಾಂಶ

ಚಿಕ್ಕಮಗಳೂರು, ನರಸಿಂಹರಾಜಪುರ ತಾಲೂಕಿನ ಸೂಸಲವಾನಿ ಗ್ರಾಮದಲ್ಲಿರುವ ಆದಿ ಕರ್ನಾಟಕ ಸಮುದಾಯದ ಕುಟುಂಬಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನರಸಿಂಹರಾಜಪುರ ತಾಲೂಕಿನ ಸೂಸಲವಾನಿ ಗ್ರಾಮದಲ್ಲಿರುವ ಆದಿ ಕರ್ನಾಟಕ ಸಮುದಾಯದ ಕುಟುಂಬಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರನ್ನು ಬುಧವಾರ ಸಮುದಾಯದವರೊಂದಿಗೆ ಭೇಟಿ ಮಾಡಿದ ಸಮಿತಿ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.ನರಸಿಂಹರಾಜಪುರ ತಾಲೂಕಿನ ಸೂಸಲವಾನಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಆದಿ ಕರ್ನಾಟಕ ಸಮುದಾಯದ ಅನೇಕ ಕುಟುಂಬಗಳು 150 ವರ್ಷಗಳಿಂದ ವಾಸವಾಗಿವೆ. ಈ ಕುಟುಂಬಗಳು ತಮ್ಮ ಪೂರ್ವಜರ ಕಾಲದಿಂದಲೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿವೆ ಎಂದರು.ಮೂಲತಃ ಆದಿ ಕರ್ನಾಟಕ ಜಾತಿಯ ಈ ಕುಟುಂಬಗಳನ್ನು 1993ರಲ್ಲಿ ಅಂದಿನ ತಹಸೀಲ್ದಾರರು ತಪ್ಪಾಗಿ ಪುಲಿಯನ್‌ ಜಾತಿ ಎಂದು ನಮೂದಿಸಿದ್ದಾರೆ. 2013ರ ನಂತರ ಈ ಕುಟುಂಬಗಳ ಜಾತಿ ಪ್ರಮಾಣ ಪತ್ರವನ್ನು ಸರ್ಕಾರ ನವೀಕರಣ ಮಾಡದೇ ಕಡೆಗಣಿಸಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯದಿರುವುದರಿಂದ ಕಡು ಬಡತನದಲ್ಲಿರುವ ಈ ಕುಟುಂಬಗಳು ಸರ್ಕಾರದ ಸವಲತ್ತು ಗಳಿಂದ ವಂಚಿತವಾಗಿವೆ. ಮಕ್ಕಳ ವಿದ್ಯಾಭ್ಯಾಸದ ಶುಲ್ಕವನ್ನು ಭರಿಸಲಾಗದೇ ಪರದಾಡುತ್ತಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಲ್‌.ಎಸ್. ಶ್ರೀಕಾಂತ್, ಸಂಘಟನಾ ಸಂಚಾಲಕ ಡಿ. ರಾಮು, ತಾಲೂಕು ಸಂಘಟನಾ ಸಂಚಾಲಕ ಸುನಿಲ್, ಹೋಬಳಿ ಅಧ್ಯಕ್ಷ ಸಜಿ, ಮಹಿಳಾ ವಿಭಾಗದ ಸಂಚಾಲಕಿ ರಾಗಿಣಿ, ಶೀಲಾ ಗೋಪಾಲ್ ಹಾಜರಿದ್ದರು.

29 ಕೆಸಿಕೆಎಂ 3ನರಸಿಂಹರಾಜಪುರ ತಾಲೂಕಿನ ಸೂಸಲವಾನಿ ಗ್ರಾಮದಲ್ಲಿರುವ ಆದಿ ಕರ್ನಾಟಕ ಸಮುದಾಯದ ಕುಟುಂಬಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ದಸಂಸ ಮುಖಂಡ ಶ್ರೀಕಾಂತ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಗೆ ಬುಧವಾರ ಮನವಿ ಸಲ್ಲಿಸಲಾಯಿತು.

Share this article