ದಾವಣಗೆರೆ : ಒನ್ ವೇನಲ್ಲಿ ಬೈಕ್ನಲ್ಲಿ ಬರುತ್ತಿದ್ದ ಸವಾರನಿಗೆ ಹೀಗೆ ಒನ್ ವೇನಲ್ಲಿ ಬರಬಾರದು ಎಂದು ತಿಳಿ ಹೇಳಿದಕ್ಕೆ ಸವಾರ ತಿರುಗಿ ಜಿಲ್ಲಾಧಿಕಾರಿಗೇ ಬೈದು ಹೋಗಿರುವ ಘಟನೆ ದಾವಣಗೆರೆ ಜಿಲ್ಲೆಯ ಎಸ್.ನಿಜಲಿಂಗಪ್ಪ ಬಡಾವಣೆ ಬಳಿ ಗುರುವಾರ ನಡೆದಿದೆ.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಪ್ರತಿದಿನ ಬೆಳಗ್ಗೆ ವಾಯುವಿಹಾರ ಮಾಡುತ್ತ ಸೈಕಲ್ ರೈಡ್ ಮಾಡುತ್ತಾರೆ. ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದಾಗ, ನಿಜಲಿಂಗಪ್ಪ ಬಡಾವಣೆಯ ಶ್ರೀ ಶಾರದಾಂಬ ದೇವಸ್ಥಾನದ ಬಳಿ ಬೈಕ್ನಲ್ಲಿ ವ್ಯಕ್ತಿಯೋರ್ವ ಒನ್ ವೇ ರಸ್ತೆಯಲ್ಲಿ ಬರುತ್ತಿದ್ದುದ್ದನ್ನು ಕಂಡು ಆ ವ್ಯಕ್ತಿಗೆ ಹೀಗೆ ಒನ್ ವೇನಲ್ಲಿ ಸಂಚರಿಸಬಾರದು. ಅದು ಅಪರಾಧ ಎಂದು ತಿಳಿ ಹೇಳಿದ್ದಾರೆ.
ಅದಕ್ಕೆ ಬೈಕ್ ಸವಾರ ಬುದ್ಧಿ ಹೇಳಿದ ವ್ಯಕ್ತಿ ಜಿಲ್ಲಾಧಿಕಾರಿ ಎಂಬುದನ್ನು ಅರಿಯದೇ ದುರ್ವರ್ತನೆ ತೋರಿದ್ದಾನೆ. ತಕ್ಷಣವೇ ಜಿಲ್ಲಾಧಿಕಾರಿ ದುರ್ನಡತೆ ತೋರಿದ ವ್ಯಕ್ತಿಯ ಫೋಟೋ ಮತ್ತು ವಾಹನದ ಫೋಟೋ ತೆಗೆದು ಎಸ್ಪಿ ಉಮಾ ಪ್ರಶಾಂತ್ ಅವರಿಗೆ ವಾಟ್ಸ್ಆ್ಯಪ್ ಮಾಡಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಪೊಲೀಸರು ದುರ್ವರ್ತನೆ ತೋರಿದ ಆರೋಪಿಗಾಗಿ ಶೋಧ ನಡೆಸಿದ್ದಾರೆ.