ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಸಂಜೆ ಸುಮಾರು ಹೊತ್ತು ಜೋರು ಗಾಳಿ, ಗುಡುಗು, ಮಿಂಚು, ಸಿಡಿಲಿನ ಆರ್ಭಟದಿಂದ ಜನ ಭಯ ಭೀತರಾಗಿದ್ದರು. ಈಚಘಟ್ಟ ಹೊರ ವಲಯದಲ್ಲಿ ಮೇಕೆ ಮೇಯಿಸಲು ಹೋಗಿದ್ದ ರೈತ ದಂಪತಿ ಸಮ್ಮುಖದಲ್ಲೇ ಸಿಡಿಲು ಬಡಿದು, 26 ಮೇಕೆಗಳು ಸಾವನ್ನಪ್ಪಿವೆ. ಇದರಿಂದಾಗಿ ಸುಮಾರು 5 ಲಕ್ಷ ರು.ಗೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಕುರಿಗಳ ಮಾಲೀಕರಾದ ಪಾಪ್ಯಾನಾಯ್ಕ ಹಾಗೂ ಪತ್ನಿ ರೇವತಿಬಾಯಿ ಕೂದಲೆಳೆ ಅಂತರದಲ್ಲಿ ಸಿಡಿಲಿನ ಹೊಡೆತದಿಂದ ಪಾರಾಗಿ, ಸಾವನ್ನು ಗೆದ್ದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರ ಪರ ರೋಡ್ ಶೋನಲ್ಲಿ ಭಾಗವಹಿಸಿದ್ದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಈಚಘಟ್ಟಕ್ಕೆ ದೌಡಾಯಿಸಿದ್ದಾರೆ. ಮೇಕೆಗಳ ಮಾಲೀಕರಿಗೆ ಧೈರ್ಯ ಹೇಳಿ, ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.ಇತ್ತ ಜಿಲ್ಲಾ ಕೇಂದ್ರ ದಾವಣಗೆರೆ ಸುತ್ತಮುತ್ತಲು ಸಹ ಭಾರೀ ಗಾಳಿ, ಸಿಡಿಲು, ಗುಡುಗು, ಮಿಂಚಿನ ಆರ್ಭಟಕ್ಕೆ ಹಲವಾರು ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದರೆ, ಅನೇಕ ಕಡೆ ಮರದ ರೆಂಬೆ ಕೊಂಬೆಗಳೇ ಮುರಿದು ಬಿದ್ದಿವೆ. ಸುಮಾರು 15-20 ನಿಮಿಷ ಕಾಲ ಜೋರು ಮಳೆಯಿಂದಾಗಿ ಏಕಾಏಕಿ ವಿದ್ಯುತ್ ತಂತಿಗಳ ಮೇಲೆ ರೆಂಬೆ ಕೊಂಬೆ ಬಿದ್ದಿದ್ದರಿಂದ ಅನೇಕ ಕಡೆ ವಿದ್ಯುತ್ ನಿಲುಗಡೆಯಾಗಿತ್ತು. ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಲು ಹರಸಾಹಸಪಡುತ್ತಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರ ರಸ್ತೆ ಬಳಿ ಹಳೆ ಸಾಗರ್ ಬೆಣ್ಣೆ ದೋಸೆ ಹೋಟೆಲ್ ಬಳಿ ವಿದ್ಯುತ್ ಕಂಬಗಳು ತುಂಡಾಗಿ, ನೆಲ ತೇವಗೊಂಡು ಉರುಳಿ ಬಿದ್ದಿದ್ದು, ಕೆಲ ಕಡೆ ಮರಗಳು ಉರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಅಪಾಯ ಸಂಭವಿಸಿಲ್ಲವಾದರೂ ಸಾಕಷ್ಟು ಹಾನಿ ಸಂಭವಿಸಿದೆ. ಮಳೆಯಾಗುವ ವಾತಾವರಣ ಮುಂದುವರಿದಿದ್ದು, ಜನರು ಮತ್ತೆ ಏನಾಗುವುದೋ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.