)
- ತಮ್ಮ ತಂದೆ ಶಾಮನೂರು ಇದ್ದಿದ್ದರೆ ಮೊಮ್ಮಗನ ಸಾಧನೆಗೆ ಬೆನ್ನು ಚಪ್ಪರಿಸುತ್ತಿದ್ದರು: ಎಸ್ಸೆಸ್ಸೆಂ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ದೇಶಕ್ಕೆ ಮಾದರಿ ಆಗುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು. ನಗರದಲ್ಲಿ ತಮ್ಮ ಪುತ್ರ ಸಮರ್ಥ ಶಾಮನೂರು ಉಪ ಚುನಾವಣೆಯಲ್ಲಿ ಗೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ. ಎಲ್ಲೆಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕೋ ಅಂತಹ ಕಡೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು. ದಕ್ಷಿಣ ಕ್ಷೇತ್ರದಲ್ಲಿ ಮಹಿಳಾ ಕಾಲೇಜು ಮಂಜೂರಾಗಿದೆ. ಇಡೀ ಲೋಕಸಭಾ ಕ್ಷೇತ್ರವನ್ನು ರಾಷ್ಟ್ರಕ್ಕೆ ಮಾದರಿ ಆಗಿಸಲಾಗುವುದು. ಜನರ ಆಶೀರ್ವಾದ ಮತ್ತು ಮತದಾರರ ಬೆಂಬಲ ನಮ್ಮ ಮೇಲಿದೆ. ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಹೋರಾಟ ನಡೆಸಿದ ಪರಿಣಾಮ ನಮ್ಮ ಪುತ್ರ ಸಮರ್ಥ್ ಗೆಲುವು ಸಾಧಿಸಿದ್ದಾನೆ. ನಮ್ಮ ತಂದೆ ಮತ್ತು ನಾನು ಇದೇ ಕ್ಷೇತ್ರದಿಂದ ಗೆದ್ದಿದ್ದೇವೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ, ಮುಂದೆಯೂ ಇನ್ನಷ್ಟು ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದು ಅವರು ಹೇಳಿದರು. ಹಲವಾರು ಗೊಂದಲಗಳ ಮಧ್ಯೆಯೂ ಮತದಾರರು ನಮ್ಮನ್ನು ಆಶೀರ್ವದಿಸಿದ್ದು, ಎಲ್ಲರಿಗೂ ಹೃತ್ಫೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮ್ಮ ಅಪ್ಪಾಜಿ ಇದ್ದಿದ್ದರೆ ಬಹಳ ಸಂತೋಷ ಪಡುತ್ತಿದ್ದರು. ಮೊಮ್ಮಗ ಗೆದ್ದಿದ್ದಾನೆಂದು ಬೆನ್ನು ಚಪ್ಪರಿಸುತ್ತಿದ್ದರು. ನಾನು ಬೆನ್ನು ಚಪ್ಪರಿಸುತ್ತೇನೆ. ಮುಂದೆ ನುಗ್ಗಿ ಒಳ್ಳೆಯ ಕೆಲಸ, ಕಾರ್ಯ ಮಾಡಲೆಂದು ಹೇಳುತ್ತೇನೆ. ತಾನು ಅಂದುಕೊಂಡಿದ್ದನ್ನು ಸಮರ್ಥ ಮಾಡುತ್ತಾನೆ ಎಂದು ಅವರು ತಿಳಿಸಿದರು. ನನ್ನದೇ ಆದಂತಹ ಪ್ರಸ್ತಾವನೆಗಳಿವೆ: ನೂತನ ಶಾಸಕ ಸಮರ್ಥ ಎಂ.ಶಾಮನೂರು ಮಾತನಾಡಿ, ಜನರು ನನ್ನ ಮೇಲಿಟ್ಟ ವಿಶ್ವಾಸ ನನಗೆ ಸಂತೋಷ ತಂದಿದೆ. ನಾನು ಮಾತುಗಳಿಂದಲ್ಲ, ಕೆಲಸದ ಮೂಲಕ ಉತ್ತರ ನೀಡುತ್ತೇನೆ. ಮುಂದಿನ 2 ವರ್ಷದಲ್ಲಿ ದಕ್ಷಿಣ ಕ್ಷೇತ್ರವನ್ನು ಅಭಿವೃದ್ಧಿಯ ದಾರಿಗೆ ಕೊಂಡೊಯ್ಯುವೆ. ನನ್ನದೇ ಆದಂತಹ ಪ್ರಸ್ತಾವನೆಗಳಿವೆ. ಯುವಜನಾಂಗಕ್ಕೆ ಉದ್ಯೋಗ ಒದಗಿಸುವುದು ಸೇರಿದಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ದಾವಣಗೆರೆ ಜನ ಬೆಣ್ಣೆದೋಸೆ ತಿನ್ನುವಂತಹವರು. ಒಳ್ಳೆಯವರಿಗೆ ಬೆಣ್ಣೆದೋಸೆ ಕೊಡಿಸುವಂತಹವರು. ಅದೇ ರೀತಿ ನನ್ನನ್ನು ಗೆಲ್ಲಿಸುವ ಮೂಲಕ ಬೆಣ್ಣೆದೋಸೆ ತಿನ್ನಿಸಿದ್ದಾರೆ ಎಂದು ತಮ್ಮ ಗೆಲುವಿಗೆ ಪ್ರತಿಕ್ರಿಯಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಸಮರ್ಥ ಸಹ ತನ್ನ ತಂದೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರಂತೆ ಸಹ ಉಪ ಚುನಾವಣೆ ಮೂಲಕ ರಾಜಕಾರಣ ಪ್ರವೇಶಿಸಿದ್ದರು. ಅದೇ ರೀತಿ ಸಮರ್ಥ ಸಹ ಉಪ ಚುನಾವಣೆ ಮೂಲಕವೇ ರಾಜಕಾರಣ ಪ್ರವೇಶ ಮಾಡಿರುವುದು ಸಂತೋಷದ ವಿಚಾರ. ನಾವಾಗಿಯೇ ಸಮರ್ಥ್ಗೆ ಟಿಕೆಟ್ ಕೇಳಿರಲಿಲ್ಲ. ನಮ್ಮ ಮುಖಂಡರು ಬೆಂಗಳೂರಿಗೆ ಹೋಗಿ ಸಮರ್ಥ ಸೂಕ್ತ ಅಭ್ಯರ್ಥಿಯೆಂದು ಕೆಪಿಸಿಸಿ ಮುಂದೆ ಹೇಳಿ ಟಿಕೆಟ್ ತಂದರು. ಮಾತ್ರವಲ್ಲ ತಾವೇ ಮುಂದೆ ನಿಂತು ಕೆಲಸ ಮಾಡಿ, ಗೆಲ್ಲಿಸಿದ್ದಾರೆ ಎಂದರು. ದಾವಣಗೆರೆಯಲ್ಲಿ ಐಟಿ-ಬಿಟಿಯಂತಹ ಕಂಪನಿಗಳು ಬರಲು ಜಾಗದ ಅವಶ್ಯಕತೆ ಇದೆ. ಕೆಎಸ್ಸಾರ್ಟಿಸಿಗೆ ಸಂಬಂಧಿಸಿದ ಜಾಗದಲ್ಲಿ ಐಟಿ-ಬಿಟಿ ಕಂಪನಿಗಳಿಗೆ ಜಾಗ ಗುರುತಿಸಲಾಗಿದೆ. ಉಪ ಚುನಾವಣೆ ಮತ ಎಣಿಕೆ ಕಾರ್ಯದ ಪ್ರಾರಂಭದಲ್ಲಿ ಬಿಜೆಪಿಗೆ ಲೀಡ್ ಬಂದಿತ್ತು. ಅನಂತರ ಕಾಂಗ್ರೆಸ್ಗೆ ಲೀಡ್ ದೊರೆಯಲಾರಂಭಿಸಿತು. ಅಲ್ಪಸಂಖ್ಯಾತರು ಸದಾ ಕಾಂಗ್ರೆಸ್ನೊಂದಿಗೆ ಇರುತ್ತಾರೆ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. - - - (ಕೋಟ್ಸ್) ಜನರ ಆಶೀರ್ವಾದ, ಮತದಾರರ ಬೆಂಬಲ ನಮ್ಮ ಮೇಲಿದೆ. ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಹೋರಾಟ ನಡೆಸಿ ಪರಿಣಾಮ ನಮ್ಮ ಪುತ್ರ ಸಮರ್ಥ ಗೆಲುವು ಸಾಧಿಸಿದ್ದು, ನಮ್ಮ ತಂದೆ, ನಾನು ಈ ಕ್ಷೇತ್ರದಿಂದ ಗೆದ್ದಿದ್ದೇವೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡುತ್ತೇವೆ. ಅನೇಕ ಗೊಂದಲಗಳ ಮಧ್ಯೆಯೂ ಮತದಾರರು ನಮ್ಮನ್ನು ಆಶೀರ್ವದಿಸಿದ್ದಾರೆ. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ. - ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ. - - - ದಾವಣಗೆರೆ ದಕ್ಷಿಣ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ವಿಶ್ವಾಸವು ನನ್ನಲ್ಲಿ ಸಂತೋಷ ತಂದಿದೆ. ನಾನು ಮಾತುಗಳಿಂದ ಅಲ್ಲ, ಕೆಲಸಗಳ ಮೂಲಕ ಉತ್ತರ ನೀಡುತ್ತೇವೆ. ಮುಂದಿನ ಎರಡು ವರ್ಷಗಳಲ್ಲಿ ದಕ್ಷಿಣ ಕ್ಷೇತ್ರವನ್ನು ಅಭಿವೃದ್ಧಿಯ ದಾರಿಯಲ್ಲಿ ಕೊಂಡೊಯ್ಯುತ್ತೇನೆ. - ಸಮರ್ಥ ಎಂ.ಶಾಮನೂರು. ನೂತನ ಶಾಸಕ, ದಾವಣಗೆರೆ ದಕ್ಷಿಣ ಕ್ಷೇತ್ರ. - - - (-ಫೋಟೋ ಇದೆ.)