ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕೆಆರ್ಎಸ್ ನೀರಾವರಿ ನಿಗಮದ ಕಚೇರಿ ಎದುರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪುಗೌಡ ನೇತೃತ್ವದಲ್ಲಿ ಸೇರಿದ ರೈತ ಸಂಘದ ಕಾರ್ಯ ಕರ್ತರು ಮುತ್ತಿಗೆ ಹಾಕಿ ಕೆಲ ಕಾಲ ಧರಣಿ ನಡೆಸಿ, ರಾಜ್ಯ ಸರ್ಕಾರ, ಜಿಲ್ಲಾ ಶಾಸಕರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಜಲಾಶಯದಲ್ಲಿ 80 ಅಡಿಗೂ ಕಡಿಮೆ ನೀರು ಇದ್ದ ಸಮಯದಲ್ಲೂ ಸಹ ನಾಲೆಗಳಿಗೆ ನೀರು ಹರಿಸಲಾಗಿದೆ. ಆದರೆ, ಈ ಬಾರಿ ಜಲಾಶಯದಲ್ಲಿ 92 ಅಡಿ ನೀರಿದ್ದರೂ ಸಹ ನೀರು ಹರಿಸುತ್ತಿಲ್ಲ. ರೈತರ ಬೆಳೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೈಸೂರು ಮಹಾರಾಜರು ಜಿಲ್ಲೆಯ ರೈತರು ಹಾಗೂ ಜನರ ಅನುಕೂಲಕ್ಕೆ ಜಲಾಶಯ ನಿರ್ಮಿಸಿದ್ದಾರೆ ಎಂದರು.ಪ್ರಸ್ತುತ ರಾಜಕಾರಣಿಗಳು ನೀರಿನ ಮೂಲವನ್ನೇ ಮುಚ್ಚಿ ಇದೀಗ ಕೆಆರ್ಎಸ್ ಜಲಾಶಯದಿಂದ ಬೆಂಗಳೂರಿಗೆ ನೀರನ್ನು ಕೊಂಡ್ಯೊಯುತ್ತಿದ್ದಾರೆ. ಜಿಲ್ಲೆಯ ಶಾಸಕರು ರೈತರ ಕಷ್ಟಗಳನ್ನ ಕೇಳಿಸಿಕೊಳ್ಳಲು ಸಹ ಮುಂದೆ ಬರುತ್ತಿಲ್ಲ ಕೂಡಲೇ ನಾಲೆಗಳಿಗೆ ನೀರು ಹರಿಸುವರೆವಿಗೂ ಆಹೋರಾತ್ರಿ ಧರಣಿ ಕೂರುತ್ತೇವೆ ಎಂದು ಎಚ್ಚರಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಆಗಮಿಸಿ, ರೈತರೊಂದಿಗೆ ಪ್ರಸ್ತುತ ಬೆಳೆ ಮತ್ತು ಅಣೆಕಟ್ಟೆ ವಾಸ್ತವ ಸ್ಥಿತಿಗತಿಗಳ ಬಗ್ಗೆ ಈಗಾಗಲೇ ಮುಖ್ಯ ಮಂತ್ರಿಗಳಿಗೆ ತಿಳಿಸಲಾಗಿದೆ. ಇನ್ನೇರಡು ದಿನದಲ್ಲಿ ಚರ್ಚಿಸಿ ರೈತರ ಸಮಸ್ಯೆಗಳ ಬಗೆಹರಿಸಲಾಗುತ್ತದೆ. ಈಗ ಧರಣಿಯನ್ನು ಕೈ ಬಿಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಾಂಡವಪುರ ತಾಲೂಕು ಅಧ್ಯಕ್ಷ ವೈ.ಕೆ.ಮಂಜು, ಕೆನ್ನಾಳು ನಾಗಣ್ಣ, ಹರವು ಪ್ರಕಾಶ್ ಕಟ್ಟೇರಿ ಮಹದೇವ, ಕಡತನಾಳು ಬಾಲಕೃಷ್ಣ, ದೊಡ್ಡಪಾಳ್ಯ ಜಯರಾಮು, ದೊಡ್ಡೆಗೌಡನ ಕೊಪ್ಪಲು ಪ್ರಕಾಶ್, ಕ್ಯಾತನಹಳ್ಳಿ ಮಹದೇವು, ಡಿ.ಎಂ ಕೃಷ್ಣೇಗೌಡ, ಪಾಂಡು, ಬಿ.ಎಸ್ ರಮೇಶ್, ರೇಡಿಯೋ ರಮೇಶ್, ಶಶಿಕುಮಾರ್, ಅಗ್ರಹಾರ ನಾಗರಾಜು, ಸಬ್ಬನ ಕುಪ್ಪೆ ನಾಗರಾಜು, ಮಧು ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.