ಡಿಸಿಸಿ ಬ್ಯಾಂಕ್ ಚುನಾವಣೆ: ಎಂಎಲ್‌ಎ, ಎಂಎಲ್‌ಸಿಗಳಿಗೆ ಅಗ್ನಿ ಪರೀಕ್ಷೆ

KannadaprabhaNewsNetwork |  
Published : Jan 15, 2026, 01:15 AM IST
ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್‌. | Kannada Prabha

ಸಾರಾಂಶ

ಚಿಕ್ಕಮಗಳೂರುಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ)ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು ಮಂದಿ ಶಾಸಕರು, ವಿಧಾನಪರಿಷತ್‌ ಸದಸ್ಯರು, ಮಾಜಿ ಶಾಸಕರು ಸ್ಪರ್ಧೆ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.

- ಸಿ.ಟಿ. ರವಿ, ಕೆ.ಎಸ್‌. ಆನಂದ್‌ ಫಸ್ಟ್ ಟೈಂ ಸ್ಪರ್ಧೆ । ದೋಸ್ತಿಗಳ ಅವಿರೋಧ ಆಯ್ಕೆಗೆ ತಣ್ಣೀರು ಎರಚಿದ್ರಾ ನಿರಂಜನ್‌

ಆರ್‌. ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ)ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು ಮಂದಿ ಶಾಸಕರು, ವಿಧಾನಪರಿಷತ್‌ ಸದಸ್ಯರು, ಮಾಜಿ ಶಾಸಕರು ಸ್ಪರ್ಧೆ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಈಗಾಗಲೇ ಮಾಜಿ ಶಾಸಕರಾದ ಡಿ.ಎಸ್‌. ಸುರೇಶ್‌ ಹಾಗೂ ಬೆಳ್ಳಿ ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹಾಗೂ ಕಡೂರು ಕ್ಷೇತ್ರದ ಶಾಸಕ ಕೆ.ಎಸ್‌. ಆನಂದ್‌ ಸ್ಪರ್ಧೆ ಮಾಡಿದ್ದಾರೆ. ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಸಹ ಕಣದಲ್ಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಚುನಾವಣಾ ಉಸ್ತುವಾರಿಯಂತಹ ಉನ್ನತ ಹುದ್ದೆಗಳು, ಸಚಿವರು ಹಾಗೂ ಶಾಸಕರಾಗಿ ಕೆಲಸ ಮಾಡಿರುವ ಸಿ.ಟಿ. ರವಿ ಅವರು ಇದೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದು ರಾಜಕೀಯ ವಲಯದಲ್ಲಿ ಮಾತ್ರ ಅಲ್ಲ, ಸಾರ್ವಜನಿಕರಲ್ಲೂ ಕುತೂಹಲ ಮೂಡಿಸಿದೆ.

ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಸಿ.ಟಿ. ರವಿ ಅವರು ಬಿಜೆಪಿ ಮುಖಂಡರನ್ನು ನಿಲ್ಲಿಸಿ ಚುನಾವಣಾ ಕಾರ್ಯತಂತ್ರ ರೂಪಿಸು ತ್ತಿದ್ದರು. ಆದರೆ, ಈ ಬಾರಿ ಅವರೇ ಕಣಕ್ಕೆ ಇಳಿದಿದ್ದಾರೆ. ಹಾಗಾಗಿ ಯಕ್ಷ ಪ್ರಶ್ನೆಯಾಗಿದೆ.ಕಾರ್ಯ ತಂತ್ರವೇ ?

ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಒಟ್ಟು 32 ಮಂದಿ ಮತದಾರರು ಇದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ಸಹಕಾರ ಕ್ಷೇತ್ರದಲ್ಲೂ ಹೊಂದಾಣಿಕೆ ಮುಂದುವರಿಸಿದ್ದರಿಂದ ಗೆಲುವು ಸುಲಭವಾಗಲಿದೆ ಎಂದು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಸಿ.ಟಿ. ರವಿ ಹಾಗೂ ಎಸ್‌.ಎಲ್‌. ಭೋಜೇಗೌಡ ಅವರು ಅಂದುಕೊಂಡಿದ್ದರು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಎಂ.ಎಸ್‌. ನಿರಂಜನ್‌ ಕಣದಲ್ಲಿ ಉಳಿದುಕೊಳ್ಳುತ್ತಾರೆಂದು ದೋಸ್ತಿಗಳು ಭಾವಿಸಿರಲಿಲ್ಲ. ಇದು, ಬಿಜೆಪಿ ಕಾರ್ಯತಂತ್ರ ಇರಬಹುದೇ ಎಂಬ ಚಿಕ್ಕದೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ.

ಕಾರಣ, ಕಳೆದ ಬಾರಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಎಂ.ಎಸ್. ನಿರಂಜನ್‌ ಹಾಗೂ ಬಿಜೆಪಿ ಮುಖಂಡರಾದ ಕಬ್ಬಿಣ ಸೇತುವೆಯ ಸತೀಶ್ ಅವರು ಸ್ಪರ್ಧೆ ಮಾಡಿದ್ದಾಗ, ಅವರನ್ನು ಗೆಲ್ಲಿಸಲು ಬಿಜೆಪಿ ಹರ ಸಾಹಸ ಮಾಡಿತ್ತು. ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಹಾಕಬಹುದೆಂಬ ಕಾರಣಕ್ಕೆ ಕೆಲವು ಸೊಸೈಟಿಗಳು ಮತ ಚಲಾವಣೆ ಮಾಡುವ ಹಕ್ಕನ್ನು ಕಳೆದುಕೊಳ್ಳುವ ತಂತ್ರಗಾರಿಕೆ ಮಾಡಿದ್ದರಿಂದ ಇದು ನ್ಯಾಯಾಲಯದ ಮೆಟ್ಟಿಲು ಕೂಡ ಏರಿತ್ತು.

ಎರಡು ಸ್ಥಾನಗಳಿಗೆ ಮೂರು ಮಂದಿ ಅಂದರೆ, ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಹಾಗೂ ಎಂ.ಎಸ್‌. ನಿರಂಜನ್‌ ಸ್ಪರ್ಧೆ ಮಾಡಿದ್ದಾರೆ. ಇಲ್ಲಿ ನಿರಂಜನ್‌ ಗೆಲುವು ಸಾಧಿಸಿದರೆ ಇಬ್ಬರು ವಿಧಾನಪರಿಷತ್‌ ಸದಸ್ಯರ ಪೈಕಿ ಓರ್ವರಿಗೆ ಮುಖ ಭಂಗವಾಗಲಿದೆ. ದೋಸ್ತಿಗಳು ಜೋಡೆತ್ತಿನಂತೆ ಕೊನೆ ಕ್ಷಣದವರೆಗೆ ಮುಂದುವರಿದರೆ, ಪರಸ್ಪರ ಗೌರವ ಉಳಿಸಿ ಕೊಂಡಂತಾಗುತ್ತದೆ.

ಕಡೂರು ಕ್ಷೇತ್ರದ ಶಾಸಕ ಕೆ.ಎಸ್‌. ಆನಂದ್‌ ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಕ್ಷೇತ್ರ ದಿಂದ ಸ್ಪರ್ಧೆ ಮಾಡಿದ್ದಾರೆ. ಇಲ್ಲಿ ಒಟ್ಟು 7 ಸಹಕಾರ ಸಂಘಗಳು ಮತದಾನ ಮಾಡುವ ಹಕ್ಕನ್ನು ಹೊಂದಿದ್ದು, ಒಂದು ಸ್ಥಾನಕ್ಕೆ ಶಾಸಕರು ಸೇರಿದಂತೆ ಕೊಪ್ಪದ ಎಚ್‌.ಕೆ. ದಿನೇಶ್‌ ಕಣದಲ್ಲಿದ್ದಾರೆ. ನಾಲ್ಕು ಮತಗಳನ್ನು ಪಡೆಯುವವರು ಜಯಶೀಲರಾಗುತ್ತಾರೆ.--- ಬಾಕ್ಸ್‌ ---ನಿರಂಜನ್‌ ಮತ್ತೆ ರೇಬಲ್‌ ಆಗ್ತಾರಾ ?ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಎಂ.ಎಸ್‌. ನಿರಂಜನ್‌ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಪರವಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆಯಿಂದ ಕೈ ಬಿಡಲಾಗಿತ್ತು. ಆದರೆ, ನಂತರ ನಡೆದ ವಿಧಾನಸಭಾ ಚುನಾವಣೆ ವೇಳೆ ಅವರನ್ನು ಮತ್ತೆ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿತ್ತು. ಇದೀಗ ಅವರು ಸಿ.ಟಿ. ರವಿ ಸ್ಪರ್ಧೆ ಮಾಡಿರುವ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮುಂದುವರಿದಿದ್ದರಿಂದ ಅಂದರೆ, ದೋಸ್ತಿಗಳ ಅವಿರೋಧ ಆಯ್ಕೆಗೆ ಅಡ್ಡಿಯಾಗಿದ್ದರೆಂಬ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಮತ್ತೆ ನಿರಂಜನ್ ವಿರುದ್ಧ ಕ್ರಮವಾಗುತ್ತಾ, ನಿರಂಜನ್‌ ಜಯಗಳಿಸಿದರೆ ಬಿಜೆಪಿ ಶುಭಾ ಹಾರೈಸುತ್ತಾ, ಈ ಪ್ರಶ್ನೆಗಳಿಗೆ ಜ. 17 ರಂದು ನಡೆಯಲಿರುವ ಚುನಾವಣೆಯಲ್ಲಿ ಉತ್ತರ ಸಿಗಲಿದೆ.

---14 ಕೆಸಿಕೆಎಂ 1ಚಿಕ್ಕಮಗಳೂರಿನ ಡಿಸಿಸಿ ಬ್ಯಾಂಕ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ