ಡಿಸಿಸಿ ಬ್ಯಾಂಕ್‌ ಚುನಾವಣೆ: ಮೈತ್ರಿಕೂಟಕ್ಕೆ ಜಯ

KannadaprabhaNewsNetwork |  
Published : Jan 18, 2026, 01:15 AM IST
ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಹಾಗೂ  ಬಿಜೆಪಿ, ಜೆಡಿಎಸ್‌ ಮುಖಂಡರು. | Kannada Prabha

ಸಾರಾಂಶ

ಚಿಕ್ಕಮಗಳೂರುಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ 5 ನಿರ್ದೇಶಕರ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ವಿಧಾನಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಜಯಗಳಿಸಿದ್ದು, ಕಡೂರು ಶಾಸಕ ಕೆ.ಎಸ್‌. ಆನಂದ್‌, ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪರಾಭವಗೊಂಡಿದ್ದಾರೆ.

- ಮೊದಲ ಬಾರಿಗೆ ಸಿ.ಟಿ. ರವಿ ಡಿಸಿಸಿ ಬ್ಯಾಂಕ್‌ಗೆ ಎಂಟ್ರಿ । ಶಾಸಕ ಆನಂದ್‌, ಮಾಜಿ ಶಾಸಕ ಕುಮಾರಸ್ವಾಮಿ ಪರಾಭವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ 5 ನಿರ್ದೇಶಕರ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ವಿಧಾನಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಜಯಗಳಿಸಿದ್ದು, ಕಡೂರು ಶಾಸಕ ಕೆ.ಎಸ್‌. ಆನಂದ್‌, ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪರಾಭವಗೊಂಡಿದ್ದಾರೆ.

ಬ್ಯಾಂಕಿನ ಆಡಳಿತ ಮಂಡಳಿಯ ಒಟ್ಟು 13 ನಿರ್ದೇಶಕರ ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದರೆ, ಇನ್ನುಳಿದ 5 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು. ಕಣದಲ್ಲಿ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ, ಕೆ.ಎಸ್‌. ಆನಂದ್‌, ಎಂ.ಪಿ. ಕುಮಾರಸ್ವಾಮಿ ಸೇರಿದಂತೆ 10 ಮಂದಿ ಇದ್ದರು.

ನಾಲ್ಕು ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡು ಸ್ಥಾನಗಳ ಫಲಿತಾಂಶ ಕುತೂಹಲ ಮೂಡಿಸಿತ್ತು. ಈ ಕ್ಷೇತ್ರದಲ್ಲಿ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್‌. ನಿರಂಜನ್‌ ಸ್ಪರ್ಧೆ ಮಾಡಿದ್ದರು.

ನಿರಂಜನ್ ಅವರು ತಾವು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಿದ್ದರು. ಅದ್ದರಿಂದ ಮುಂಜಾಗ್ರತೆಯಾಗಿ ಮೈತ್ರಿ ಪಕ್ಷಗಳ ಬೆಂಬಲಿತ ಸಹಕಾರ ಸಂಘಗಳ ಮತದಾರರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು.

ಶನಿವಾರ ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಡಿಸಿಸಿ ಬ್ಯಾಂಕ್‌ನಲ್ಲಿ ಚುನಾವಣಾಧಿಕಾರಿ ಹಾಗೂ ಚಿಕ್ಕಮಗಳೂರು ಉಪ ವಿಭಾಗಾಧಿ ಕಾರಿ ಸುದರ್ಶನ್‌ ಹಾಗೂ ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಶೆಟ್ಟಿ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದರು. ಚುನಾವಣೆ ಹಿನ್ನಲೆಯಲ್ಲಿ ಮತದಾನ ಕೇಂದ್ರದ 100 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಮತದಾನ ಆರಂಭವಾಗುತ್ತಿದ್ದಂತೆ ಪ್ರವಾಸ ತೆರಳಿದ್ದ 28 ಮಂದಿ ಮತದಾರರು ಒಂದೇ ವಾಹನದಲ್ಲಿ ಆಗಮಿಸಿದರು. ಅವರೊಂದಿಗೆ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಹಾಜರಿದ್ದರು. ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆ ನೇರವಾಗಿ ಡಿಸಿಸಿ ಬ್ಯಾಂಕಿನ ಮತದಾನ ಕೇಂದ್ರದೊಳಗೆ ತೆರಳಿದರು. ಸಂಜೆ 4 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಕ್ತಾಯ ಗೊಂಡಿತು. ನಂತರ ಮತ ಎಣಿಕೆ ಆರಂಭಗೊಂಡು ಸಂಜೆ 5.30ರ ‍ವೇಳೆಗೆ ಫಲಿತಾಂಶವನ್ನು ಚುನಾವಣಾಧಿಕಾರಿಗಳು ಪ್ರಕಟಿಸಿದರು.

ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡು ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದ 3 ಮಂದಿಯ ಪೈಕಿ ಎಸ್‌.ಎಸ್‌. ಭೋಜೇಗೌಡ, ಸಿ.ಟಿ. ರವಿ ಜಯಗಳಿದ್ದು, ಎಂ.ಎಸ್‌. ನಿರಂಜನ್‌ ಪರಾಭವಗೊಂಡಿದ್ದಾರೆ. ಕೊಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದ ಬಿ.ಎಸ್‌. ಸತೀಶ್‌ ಜಯಗಳಿಸಿದ್ದು, ಯು.ಎಸ್‌. ಪ್ರಜ್ವಲ್‌, ಕೆ.ಎಸ್‌. ರವೀಂದ್ರ ಪರಾಭವಗೊಂಡಿದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಎಚ್‌.ಕೆ. ದಿನೇಶ್‌ ಹೊಸೂರು ಜಯಗಳಿಸಿದ್ದು, ಕಡೂರು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್‌ ಪರಾಭವಗೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕ್‌ ಹಾಗೂ ಇನ್ನುಳಿದ ಎಲ್ಲಾ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಟಿ.ಎಲ್‌. ರಮೇಶ್‌ ಜಯಗಳಿಸಿದ್ದರೆ, ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಪರಾಭವಗೊಂಡಿದ್ದಾರೆ.---- ಬಾಕ್ಸ್----ಕ್ಷೇತ್ರ ಅಭ್ಯರ್ಥಿಗಳುಪಡೆದ ಮತ

--------------------------------------------------------------------------------------

ಚಿಕ್ಕಮಗಳೂರು ಕೃಷಿ ಪತ್ತಿನ ಸಹಕಾರ ಸಂಘಎಸ್‌.ಎಲ್‌. ಭೋಜೇಗೌಡ30

ಸಿ.ಟಿ. ರವಿ27

ಎಂ.ಎಸ್‌. ನಿರಂಜನ್05

--------------------------------------------------------------------------------------------

ಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘ ಬಿ.ಎಸ್‌. ಸತೀಶ್‌ 06

ಯು.ಎಸ್‌. ಪ್ರಜ್ವಲ್‌ 05

ಕೆ.ಎಸ್‌. ರವೀಂದ್ರ 00

--------------------------------------------------------------------------------------

ಟಿಎಪಿಸಿಎಂಎಸ್‌ದಿನೇಶ್‌ ಹೊಸೂರು04

ಕೆ.ಎಸ್‌.ಆನಂದ್03

---------------------------------------------------------------------------------------

ಇತರೆ ಸಹಕಾರ ಸಂಘಗಳುಟಿ.ಎಲ್‌. ರಮೇಶ್‌56

ಎಂ.ಪಿ.ಕುಮಾರಸ್ವಾಮಿ38

------------------------------------------------------------------------------------------ 17 ಕೆಸಿಕೆಎಂ 3ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ ಹಾಗೂ ಬಿಜೆಪಿ, ಜೆಡಿಎಸ್‌ ಮುಖಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರೆಗೆ ಹಣ ನೀಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ಉದಾಸೀನ
ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ