ವಕೀಲರ ಸಮಸ್ಯೆ ಬಗೆಹರಿಸುವೆ: ಡಿಸಿಎಂ ಭರವಸೆ

KannadaprabhaNewsNetwork |  
Published : Aug 15, 2025, 01:00 AM IST
ಕೆ ಕೆ ಪಿ ಸುದ್ದಿ 03: ಡಿ ಸಿ ಎಂ ಸುದ್ದಿ | Kannada Prabha

ಸಾರಾಂಶ

ಕನಕಪುರ: ಬೆಂಗಳೂರು ದಕ್ಷಿಣ ಜಿಲ್ಲೆಯ ವಕೀಲರಿಗೆ ಏನೇ ಸಮಸ್ಯೆ ಬಂದರೂ ಅವರ ಸಹೋದರನಂತೆ ನಿಂತು ಬಗೆಹರಿಸುವುದು ನನ್ನ ಕರ್ತವ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕನಕಪುರ: ಬೆಂಗಳೂರು ದಕ್ಷಿಣ ಜಿಲ್ಲೆಯ ವಕೀಲರಿಗೆ ಏನೇ ಸಮಸ್ಯೆ ಬಂದರೂ ಅವರ ಸಹೋದರನಂತೆ ನಿಂತು ಬಗೆಹರಿಸುವುದು ನನ್ನ ಕರ್ತವ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರದಲ್ಲಿ ನಿರ್ಮಿಸಿರುವ ನೂತನ ನ್ಯಾಯಾಲಯ ಸಂಕೀರ್ಣವನ್ನು ಹೈಕೋರ್ಟ್‌ ನ್ಯಾಯಾಧೀಶರಾದ ವಿಭು ಬಖ್ರು ಜೊತೆ ಉದ್ಘಾಟಿಸಿ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಡಿಕೆಶಿ, ಕನಕಪುರದಲ್ಲಿರುವ 240 ವಕೀಲರಿಗೆ ನಾನು ಕೃತಜ್ಞತೆ ಅರ್ಪಿಸಲ್ಲಿದ್ದು ಎಲ್ಲಾ ಬೆಂಗಳೂರಿನಲ್ಲಿ ಬದುಕಬೇಕು ಎಂದು ಬಯಸುತ್ತಾರೆ. ಆದರೆ ನೀವು ನಮ್ಮ ತಾಲೂಕಿನ ಜನರಿಗಾಗಿ ಸೇವೆ ಮಾಡುತ್ತಿರುವುದು ಸಂತೋಷದ ವಿಚಾರ. ಗ್ರಾಮೀಣರ ಪರ ವಕಾಲತು ವಹಿಸಲು ಮುಂದಾಗಿದ್ದೀರಿ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಚಿಂತಿಸಬೇಡಿ, ನಾನು ನಿಮ್ಮ ಸಹೋದರನಂತೆ ಇದ್ದೇನೆ. ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಇದೆ. ಜನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಮಾಡಿದಂತೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಬರುತ್ತಾರೆ. ಅಂತಹವರಿಗೆ ನೀವು ನ್ಯಾಯ ಒದಗಿಸಿಕೊಡುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ನಾನು ಕಳೆದ 35 ವರ್ಷಗಳಿಂದ ಇಲ್ಲಿನ ಜನಪ್ರತಿನಿಧಿಯಾಗಿ ನನ್ನ ಕೈಲಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಈ ಜಿಲ್ಲೆಯಲ್ಲಿ ಕೆಲಸ ಮಾಡಿದ ನ್ಯಾಯಾಧೀಶರ ಬಗ್ಗೆ ನನಗೆ ಹೆಮ್ಮೆ ಇದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದ ವಕೀಲರು ಬಹಳ ಶಿಸ್ತಿನಿಂದ ಕೆಲಸ ಮಾಡುತ್ತಿದ್ದು, ಜನಪ್ರತಿನಿಧಿಯಾಗಿ ಈ ಕಟ್ಟಡ ನಿರ್ಮಾಣ ನನ್ನ ಕರ್ತವ್ಯ. ರಾಮನಗರದಲ್ಲೂ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡಬೇಕಿದ್ದು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ನ್ಯಾಯಮೂರ್ತಿ ನಾಗರತ್ನ ಅವರಿಲ್ಲದಿದ್ದರೆ ಇಂದು ಈ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗುತ್ತಿರಲಿಲ್ಲ. ಇದೇ ತಾಲೂಕಿನವರಾದ ಅವರು ಜಿಲ್ಲಾ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರ ತಂದೆ ವೆಂಕಟರಮಣಯ್ಯ ನಮ್ಮ ಊರಿನ ಅಳಿಯ. ಅವರೂ ಮುಖ್ಯ ನ್ಯಾಯಾಧೀಶರಾಗಿದ್ದರು ನಾಗರತ್ನ ಅವರು, ಈ ಜಾಗಕ್ಕೆ ಬಂದು ಇಲ್ಲಿನ ಸಮಸ್ಯೆಯನ್ನು ಅರಿತು‌ ಅದನ್ನು ಬಗೆಹರಿಸಿ ಆದೇಶ ಹೊರಡಿಸಿದರು. ಅವರಿಗೆ ಈ ವೇಳೆ ನಾನು ಇಲ್ಲಿಂದಲೇ ನಮಿಸುತ್ತೇನೆ ಎಂದರು.

ನಾನು ರಾಜ್ಯದ ಡಿಸಿಎಂ ಆದರೂ ಕನಕಪುರಕ್ಕೆ ಬಂದರೆ ಸಾಮಾನ್ಯ ಸೇವಕ. ಈ ಜನರು ನನಗೆ ಪ್ರೀತಿ, ಶಕ್ತಿ ನೀಡಿ, ನನ್ನನ್ನು ಅವರ ಮನೆ ಮಗನಂತೆ ಬೆಳೆಸಿದ್ದಾರೆ. ಸತತ 8 ಬಾರಿ ವಿಧಾನಸಭೆಗೆ ಆರಿಸಿದ್ದಾರೆ. ಸಾರ್ವಜನಿಕ ಸೇವಕನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈ ನಮ್ಮ ತಾಲೂಕು ಹಾಲು ಹಾಗೂ ರೇಷ್ಮೆ ಉತ್ಪಾದನೆಗೆ ಹೆಸರುವಾಸಿ. ಅತ್ಯಂತ ಶ್ರೇಷ್ಠವಾದ ರೇಷ್ಮೆ ಬೆಳೆಯಲಾಗುತ್ತದೆ. ಗುಜರಾತ್ ನಂತರ ಅತ್ಯಂತ ದೊಡ್ಡ ಡೈರಿ ಇದಾಗಿದೆ. ಇದು ರಾಜ್ಯದ ಗಡಿ ಭಾಗವಾಗಿದ್ದು, ಬೆಂಗಳೂರಿಗೆ ಕುಡಿಯಲು ಕಾವೇರಿ ನೀರನ್ನು ಈ ಭಾಗದ ಮೂಲಕ ನೀಡಲಾಗುತ್ತದೆ ಎಂದರು.

ಕನಕಪುರ ಪಟ್ಟಣ ಈ ಹಿಂದೆ ಹೇಗಿತ್ತು, ಈಗ ಹೇಗಾಗಿದೆ, ಇನ್ನು ಯಾವ ರೀತಿ ಆಗಲು ಸಾಧ್ಯ ಎಂದು ನೀವೇ ನೋಡ ಬೇಕು, ಪ್ರತಿ ಹಳ್ಳಿಗಳಿಗೂ ಬೆಂಗಳೂರು ನಗರದಂತೆ ಎಲ್ಲಾ ಮೂಲ ಸೌಕರ್ಯ ಒದಗಿಸಲಾಗಿದೆ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಯಾವ ರೀತಿಯ ಸಹಾಯ ಮಾಡುತ್ತೇವೆ ಎಂಬುದು ಮುಖ್ಯ ಎಂದು ತಿಳಿಸಿದರು.

ಸ್ವಾತಂತ್ರೋತ್ಸವದಲ್ಲಿ ಭಾಗಿಯಾಗದ್ದಕ್ಕೆ ಕ್ಷಮೆ ಇರಲಿ:

ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ಬಳಿಕ ಕನಕಪುರದಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಲು ಆಗಿಲ್ಲ, ನನಗೆ ನನ್ನದೇ ಆದ ಜವಾಬ್ದಾರಿಗಳಿವೆ.ಹೀಗಾಗಿ ನಾಳೆ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಧ್ವಜಾರೋಹಣ ಮಾಡಲಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಪಕ್ಷದ ಕಚೇರಿಯಲ್ಲಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಬೆಂಗಳೂರು ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಬೇಕಿದೆ. ಹೀಗಾಗಿ ನನ್ನನ್ನು ಕ್ಷಮಿಸುವಂತೆ ತಾಲೂಕಿನ ಜನರಲ್ಲಿ ಮನವಿ ಮಾಡಿದರು.

ನಾನು ವಿದ್ಯಾರ್ಥಿಯಾಗಿದ್ದಾಗ ವಕೀಲನಾಗಬೇಕು ಎಂಬ ಆಸೆ ಇತ್ತು. ಆದರೆ ಪದವಿ ಓದುತ್ತಿರುವಾಗಲೇ ನನಗೆ ಪಕ್ಷದ ಟಿಕೆಟ್ ನೀಡಲಾಯಿತು. ಹೀಗಾಗಿ ನಾನು ನನ್ನ ಮಗನನ್ನು ಕಾನೂನು ಓದಿಸುತ್ತಿದ್ದೇನೆ. ನೀನಾದರೂ ವಕೀಲನಾಗು ಎಂದು ಆತನಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ಕೆ ಕೆ ಪಿ ಸುದ್ದಿ 03:

ಕನಕಪುರದಲ್ಲಿ ನಿರ್ಮಿಸಿರುವ ನೂತನ ನ್ಯಾಯಾಲಯ ಸಂಕೀರ್ಣವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಹೈಕೋರ್ಟ್‌ ನ್ಯಾಯಾಧೀಶರಾದ ವಿಭು ಬಖ್ರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ