ಕನ್ನಡೇತರ ನಾಮಫಲಕ ತಕ್ಷಣ ತೆರವುಗೊಳಿಸಲು ಗಡುವು

KannadaprabhaNewsNetwork | Published : Jul 30, 2024 12:30 AM

ಸಾರಾಂಶ

ಕನ್ನಡೇತರ ನಾಮಫಲಕ ತಕ್ಷಣ ತೆರವುಗೊಳಿಸಬೇಕು ಎಂದು ಗಡುವು ನೀಡಲಾಯಿತು. ಗ್ರಾ.ಪಂ. ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನ್ನಡೇತರ ನಾಮಫಲಕಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗಡುವು ನೀಡಲಾಯಿತು.

ಕುಶಾಲನಗರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಘಟಕದ ಅಧ್ಯಕ್ಷರಾದ ಬಿ ಜೆ ಅಣ್ಣಯ್ಯ ಅವರ ನೇತೃತ್ವದಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕೊಪ್ಪ ಗ್ರಾಮ ಪಂಚಾಯಿತಿ ಸೇರಿದಂತೆ ಸಮೀಪದ ಟಿಬೆಟಿಯನ್ ಶಿಬಿರದಲ್ಲಿ ಸಂಪೂರ್ಣ ಇಂಗ್ಲಿಷ್ ಮತ್ತು ಟಿಬೆಟ್ ಭಾಷೆ ಫಲಕಗಳು ಎಲ್ಲೆಡೆ ರಾರಾಜಿಸುತ್ತಿವೆ. ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆಯ ಪ್ರಮುಖರು ಒತ್ತಾಯಿಸಿದರು.

ಈ ಸಂದರ್ಭ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಬಿ ಎ ದಿನೇಶ್, ತಾಲೂಕು ಗೌರವ ಅಧ್ಯಕ್ಷ ರಾಜಶೇಖರ್, ತಾಲೂಕು ಉಪಾಧ್ಯಕ್ಷರಾದ ಕೆ ಚಂದ್ರು ನಾಸಿರ್, ಪ್ರಧಾನ ಕಾರ್ಯದರ್ಶಿ ಎಂ ಪಿ ನವೀನ್, ಮಂಜುನಾಥ ಪ್ರಶಾಂತ್, ರೋನಾಲ್ಡ್ ಮತ್ತಿತರರು ಇದ್ದರು.

------------------------

ವಿದ್ಯುತ್ ತಂತಿ ತುಂಡಾಗಿ 6 ಜಾನುವಾರು ಸಾವುಮಡಿಕೇರಿ: ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಹರಿದು 6 ಜಾನುವಾರು (ಹಸು ಕರುಗಳು )ಬಲಿಯಾಗಿರುವ ಘಟನೆಪೊನ್ನಂಪೇಟೆ ತಾಲೂಕು ತೆರಾಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಬೊಜ್ಜಂಗಡ ನಟರಾಜ್ (ನಂದಾ,) ಅವರಿಗೆ ಸೇರಿದ ಜಾನುವಾರುಗಳು ಮೃತಪಟ್ಟಿವೆ. ಕೊಟ್ಟಿಗೆಗೆ ಬರುತ್ತಿದ್ದ ವೇಳೆ 11 ಕೆವಿ ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ಹರಿದು ಸಾವಿಗೀಡಾಗಿವೆ.

-----------------------------

ಕಾಫಿ ತೋಟದಲ್ಲಿ ಕಾಡಾನೆ ಸಾವು

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಆಹಾರ ಅರಸಿ ಬಂದ ಕಾಡಾನೆ ಕಾಫಿ ತೋಟದಲ್ಲಿ ಸಾವನ್ನಪ್ಪಿದೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಡಿ ಗ್ರಾಮದ ನಂದ ಅಪ್ಪಯ್ಯ ಎಂಬುವರ ತೋಟದಲ್ಲಿ ಅಂದಾಜು 18 ವರ್ಷ ಪ್ರಾಯದ ಗಂಡಾನೆ ಸಾವನ್ನಪ್ಪಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಡಾ ಚಿಟ್ಟಿಯಪ್ಪ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಾಡಾನೆಯನ್ನು ಚೆನ್ನಂಗಿ ಅರಣ್ಯಕ್ಕೆ ಸಾಗಿಸಿ ಅಬ್ಬೂರು ಗೇಟ್ ಅರಣ್ಯದಲ್ಲಿ ಕಳೇಬರವನ್ನು ಹೂತು ಹಾಕಲಾಯಿತು.

ಈ ಸಂದರ್ಭ ಆರ್ ಎಫ್ ಓ ಗಂಗಾಧರ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.

Share this article