ಗ್ರಾಮದೇವತೆ ಮಲ್ಲಿಗೆಮ್ಮನಿಗೆ ವಿಶೇಷ ಪೂಜೆ, ಅಲಂಕಾರ । ಸಂಭ್ರಮದ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿ
ದಿ.ಶ್ರೀಮತಿ ರುದ್ರಮ್ಮ ಶ್ರೀಕಂಠಯ್ಯರವರ ಜ್ಞಾಪಕವಾಗಿ , ದಿವಂಗತ ಎಸ್.ಶಾಂತವೀರಯ್ಯ ,ಸಹೋದರರು ,ಸಹೋದರಿಯರು ಮತ್ತು ದಿ. ಎ.ಎನ್.ವೀರಣ್ಣನವರ ಜ್ಞಾಪಕಾರ್ಥ ಕುಟುಂಬ ವರ್ಗದವರೂ ಶ್ರೀ ಮಲ್ಲಿಗೆಮ್ಮನವರಿಗೆ ರಜತ ಸಿಂಹಾಸನವನ್ನು ಭಕ್ತಿಪೂರ್ವಕವಾಗಿ ಶ್ರದ್ಧಾ- ಭಕ್ತಿಯೊಂದಿಗೆ ಪುಣ್ಯ ಕ್ಷೇತ್ರ ಶ್ರೀ ರಾಮೇಶ್ವರ ಹಳ್ಳದಲ್ಲಿ ಸಮರ್ಪಿಸಿದರು. ಗ್ರಾಮದೇವತೆಯರಾದ ಕರಿಯಮ್ಮ, ಮಲ್ಲಿಗೆಮ್ಮದೇವಿಯವರಿಗೆ ವಿವಿಧ ಅಭಿಷೇಕ, ಪೂಜಾ ಕೈಂಕರ್ಯಗಳು ಹಾಗೂ ಬೆಟ್ಟದಪುರ ವಸಂತಚಾರ್ರವರಿಂದ ನೂತನ ರಜತ ಸಿಂಹಾಸನದ ವಿಧಿ, ವಿಧಾನಗಳು ಜರುಗಿದವು.
ನಿಡಘಟ್ಟ ಗ್ರಾಮದ ಶಿಲ್ಪಿ ಸ್ವಾಮಿ ಹಾಗೂ ಪುತ್ರ ಚೇತನ್ ೭ ಕೆ.ಜಿ ಬೆಳ್ಳಿಯ ಕುರ್ಚಿಯಲ್ಲಿ ವಿವಿಧ ಕಲಾಕೃತಿ ಸೂಕ್ಷ್ಮ ಕಲಾ ಕುಸುರಿಯೊಂದಿಗೆ ಎರಡು ಸಿಂಹಗಳನ್ನು ಅತ್ಯಂತ ಆಕರ್ಷಣೀಯವಾಗಿ ಕೆತ್ತನೆ ಮಾಡಿದ್ದು ವಿಶೇಷವಾಗಿತ್ತು. ನಂತರ ಸಂಜೆ ವಿಶೇಷ ಪುಷ್ಪಾಲಂಕಾರ , ಸ್ವರ್ಣರಂಜಿತ ವಡವೆಗಳೊಂದಿಗೆ ವಿಶೇಷ ಅಲಂಕಾರದಲ್ಲಿ ಪ್ರಮುಖ ಬೀದಿಗಳಲ್ಲಿ ಶ್ರೀ ಕರಿಯಮ್ಮ ದೇವಿ , ಶ್ರೀ ಮಲ್ಲಿಗೆಮ್ಮ ದೇವಿ ಹಾಗೂ ಕೆಂಚರಾಯ ಸ್ವಾಮಿಯವರನ್ನು ಸಾರೋಟದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು.ಶ್ರೀ ಚೆಲುವರಾಯ, ದೂತರಾಯ ಸ್ವಾಮಿಯವರ ಕುಣಿತ ನೋಡುಗರ ಮನಸೂರೆಗೊಂಡಿತ್ತು. ಮೆರವಣಿಗೆ ಹಾಗೂ ಮಣೇವು ಕಾರ್ಯಕ್ರಮದಲ್ಲಿ ನಗರದ ಸಾವಿರಾರು ಭಕ್ತರು ಭಾಗವಹಿಸಿ, ನೂತನ ರಜತ ಸಿಂಹಾಸನದಲ್ಲಿ ಶ್ರೀ ಮಲ್ಲಿಗೆಮ್ಮ ದೇವಿಯವರನ್ನು ನೋಡಿ ಸಂತಸಗೊಂಡರು.