ಸಮರ್ಪಣೆ ಸಂಕಲ್ಪ ಸಮಾವೇಶ: ಭವ್ಯ ವೇದಿಕೆ ತೆರವು ಕಾರ್ಯ

KannadaprabhaNewsNetwork |  
Published : May 22, 2025, 01:12 AM IST
21ಎಚ್‌ಪಿಟಿ1- ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಹಾಕಲಾಗಿದ್ದ ವೇದಿಕೆ ತೆರವುಗೊಳಿಸುವ ಕಾರ್ಯ ನಡೆಯಿತು. | Kannada Prabha

ಸಾರಾಂಶ

ವಿಜಯನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಹಾಕಲಾಗಿದ್ದ ಭವ್ಯ ವೇದಿಕೆ ತೆರವುಗೊಳಿಸುವ ಕಾರ್ಯ ನಡೆದಿದೆ. ಇನ್ನೊಂದೆಡೆ ಕ್ರೀಡಾಂಗಣದಲ್ಲಿ ನೀರಿನ ಹಾಗು ಮಜ್ಜಿಗೆ ಪ್ಯಾಕೆಟ್‌ಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಸ್ವಚ್ಛತಾ ಕೆಲಸವೂ ನಡೆದಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಹಾಕಲಾಗಿದ್ದ ಭವ್ಯ ವೇದಿಕೆ ತೆರವುಗೊಳಿಸುವ ಕಾರ್ಯ ನಡೆದಿದೆ. ಇನ್ನೊಂದೆಡೆ ಕ್ರೀಡಾಂಗಣದಲ್ಲಿ ನೀರಿನ ಹಾಗು ಮಜ್ಜಿಗೆ ಪ್ಯಾಕೆಟ್‌ಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಸ್ವಚ್ಛತಾ ಕೆಲಸವೂ ನಡೆದಿದೆ.

ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶಕ್ಕಾಗಿ ಬೆಂಗಳೂರಿನ ಉಡುಪಾಸ್ ಸಂಸ್ಥೆ ಜರ್ಮನ್ ಟೆಂಟ್ ಮಾದರಿಯ ಭವ್ಯ ವೇದಿಕೆ ನಿರ್ಮಿಸಿತ್ತು. ಈ ಸಮಾವೇಶದಲ್ಲಿ 2 ಲಕ್ಷ ಕುರ್ಚಿಗಳನ್ನು ಹಾಕಲಾಗಿತ್ತು. ಸಮಾವೇಶಕ್ಕೆ ಲಕ್ಷಾಂತರ ಜನರು ಹರಿದು ಬಂದಿದ್ದು, ಭಾರೀ ಮಳೆಯಲ್ಲೂ ಸಮಾವೇಶ ನಡೆದು, ಯಶಸ್ಸು ಕಂಡಿದೆ. ಈಗ ಈ ಜರ್ಮನ್ ಟೆಂಟ್‌ನ ಭವ್ಯ ವೇದಿಕೆ ತೆರಗೊಳಿಸುವ ಕಾರ್ಯ ಸಾಗಿದೆ.

ಕ್ರೇನ್ ಬಳಕೆ:

ಭವ್ಯ ವೇದಿಕೆ ತೆರವು ಮಾಡಲು ಕ್ರೇನ್ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಭಾರೀ ಗಾತ್ರದ ಸಲಾಕೆಗಳು ಮತ್ತು ಫ್ಯಾನ್‌ಗಳನ್ನು ಕೂಡ ಅಳವಡಿಕೆ ಮಾಡಲಾಗಿದೆ. ಇವುಗಳನ್ನು ಈಗ ತೆರವು ಮಾಡಲಾಗುತ್ತಿದೆ. ಕಾರ್ಮಿಕರು ಕುರ್ಚಿ ಹಾಗು ಇತರೆ ವಸ್ತುಗಳನ್ನು ಕೂಡ ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು.

ಸಮಾವೇಶಕ್ಕೆ 5 ಲಕ್ಷ ನೀರಿನ ಪ್ಯಾಕೆಟ್‌ಗಳು ಮತ್ತು ಮೂರು ಲಕ್ಷ ಮಜ್ಜಿಗೆ ಪ್ಯಾಕೆಟ್‌ಗಳನ್ನು ತರಿಸಲಾಗಿತ್ತು. ಭಾರೀ ಮಳೆ ಬಂದ ಹಿನ್ನೆಲೆ ಈ ಪ್ಯಾಕೆಟ್‌ಗಳ ಬಟವಾಡೆ ಸಮರ್ಪಕವಾಗಿ ಆಗದ್ದರಿಂದ ಮಜ್ಜಿಗೆ, ನೀರಿನ ಪ್ಯಾಕೆಟ್‌ಗಳ ಚೀಲಗಳು ಕ್ರೀಡಾಂಗಣದಲ್ಲಿ ಅಲ್ಲಲ್ಲಿ ಬಿದ್ದಿವೆ. ಇನ್ನು 2ಲಕ್ಷ ಜನರಿಗೆ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಊಟ ಕೂಡ ಉಳಿದಿದ್ದು, ಮಳೆ ನಿಂತ ಬಳಿಕ ಉಳಿದಿದ್ದ ಆಹಾರವನ್ನು ಜನರಿಗೆ ನೀಡಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಸಮಾವೇಶಕ್ಕೆ ಘಟಾನುಘಟಿ ನಾಯಕರು:

ಈ ಭವ್ಯ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್ ಮತ್ತಿತರರ ನಾಯಕರು ಆಗಮಿಸಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದು, ಮಳೆಯ ನಡುವೆ ಕಾರ್ಯಕ್ರಮ ಯಶಸ್ವಿ ಆಗಿರುವ ಹಿನ್ನೆಲೆ ವಿಜಯನಗರ ಜಿಲ್ಲಾಡಳಿತಕ್ಕೂ ಉತ್ತಮ ಹೆಸರು ಬಂದಿದೆ.

20 ಕಿಮೀ ಟ್ರಾಫಿಕ್:

ಹೊಸಪೇಟೆಯ ಮರಿಯಮ್ಮನಹಳ್ಳಿ, ಕೊಪ್ಪಳದ ಕಿರ್ಲೋಸ್ಕರ್ ಕಾರ್ಖಾನೆ, ಬಳ್ಳಾರಿ ರಸ್ತೆಯ ಪಾಪಿನಾಯಕನಹಳ್ಳಿ ಗ್ರಾಮದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲ್ಲೆಡೆಯೂ ಜನಸ್ತೋಮ ಇದ್ದುದ್ದರಿಂದ ಸಮಾವೇಶ ಮುಗಿಸಿ ಸಚಿವರು, ಶಾಸಕರು ತೆರಳಲು ಕೂಡ ಪರದಾಡುವಂತಾಗಿತ್ತು. ಇನ್ನು ಸಮಾವೇಶಕ್ಕೆ ಆಗಮಿಸುತ್ತಿದ್ದ ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರು ಕೂಡ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು, ಸಮಾವೇಶಕ್ಕೆ ಬರಲು ಆಗದೇ ಪರದಾಡಿದರು. 20 ಕಿಮೀವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಸ್‌ಗಳು, ಟ್ರ್ಯಾಕ್ಸ್‌ಗಳು ರಸ್ತೆಯಲ್ಲಿ ನಿಂತಿದ್ದು, ಸಮಾವೇಶಕ್ಕೆ ಬರುತ್ತಿದ್ದ ಜನರು ರಸ್ತೆಗಳಲ್ಲೇ ನಿಂತಿದ್ದು, ಈ ಕುರಿತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ