ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಠಿಣ ಪರಿಶ್ರಮ ಹೊಂದಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ತಿಳಿಸಿದರು. ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ (ಸಿಬಿಎಸ್ಇ) ಪರೀಕ್ಷೆಯಲ್ಲಿ ೫೮೦ ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎನ್.ಹರ್ಷಿತಾ ಅವರನ್ನು ಸನ್ಮಾನಿಸಿ ಮಾತನಾಡಿದರು. ಓದುವ ಹಾಗೂ ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯವಿದೆ. ಹರ್ಷಿತಾಳಿಗೆ ಉತ್ತಮ ಭವಿಷ್ಯವಿದ್ದು, ಮುಂದಿನ ದಿನಗಳಲ್ಲಿ ಉನ್ನತ ಸ್ಥಾನವನ್ನು ಗಳಿಸುವ ದಿಕ್ಕಿನಲ್ಲಿ ಪಯಣ ಬೆಳೆಯಲಿ. ಹರ್ಷಿತಾಳ ಈ ಸಾಧನೆಗೆ ಅವರ ತಂದೆ-ತಾಯಿ ಉತ್ತೇಜನ, ಶಾಲೆಯ ಪ್ರಾಂಶುಪಾಲರು, ಶಿಕ್ಷಕವೃಂದವರು ಪ್ರೋತ್ಸಾಹ ಮೆಚ್ಚುವಂತಾಗಿದೆ. ಇದೇ ರೀತಿ ನಗರದಲ್ಲಿರುವ ಜೆಎಸ್ಎಸ್ ಪಬ್ಲಿಕ್ ಶಾಲೆ ಕಳೆದ ೧೦ ವರ್ಷಗಳಿಂದ ಶೇ.೧೦೦ರಷ್ಟು ಫಲಿತಾಂಶ ನೀಡುವ ಜೊತೆಗೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸುತ್ತಾ ಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಇಂಥ ಸಾಧಕರು ನಿಮ್ಮೆಲ್ಲರಿಗೂ ಮಾದರಿ ಆಗಬೇಕು. ಸಿನಿಮಾ ನಟರನ್ನು, ಇನ್ಯಾವುದೋ ಕ್ಷೇತ್ರದಲ್ಲಿರುವವರನ್ನು ಅನುಸರಿಸುವ ಬದಲು ನಮ್ಮೊಂದಿಗೆ ಇದ್ದು, ಸಾಧನೆ ಮಾಡುವ ಹರ್ಷಿತಾ ಅಂಥವರು ಮಾದರಿಯಾಗಬೇಕು. ಅವರಂತೆ ನಾನು ಸಹ ಸಾಧನೆ ಮಾಡಬೇಕು ಎಂಬ ಛಲ ನಿಮ್ಮಲ್ಲಿ ಮೂಡಬೇಕು. ಹೀಗಾಗಿ ನಿಮ್ಮೆಲ್ಲರ ಉಪಸ್ಥಿತಿಯಲ್ಲಿ ಹರ್ಷಿತಾಳನ್ನು ಅಭಿನಂದಿಸುತ್ತೇವೆ ಎಂದು ರವಿಕುಮಾರ್ ತಿಳಿಸಿದರು. ಜೆಎಸ್ಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕು. ಶಿಕ್ಷಣದಿಂದ ಬದುಕು ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಹರ್ಷಿತಾಳ ಭವಿಷ್ಯ ಉಜ್ವಲವಾಗಲಿ. ಜೆಎಸ್ಎಸ್ ಸಂಸ್ಥೆ ಇಂಥ ಸಾಧಕರು ಹಾಗೂ ಪರಿಶ್ರಮ ಪಟ್ಟು ಓದುವ ಎಲ್ಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತದೆ ಎಂದರು. ಜೆಎಸ್ಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಮಾತನಾಡಿ, ನಮ್ಮ ವಿದ್ಯಾರ್ಥಿನಿ ಹರ್ಷಿತಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಇಂದು ಹರ್ಷಿತಾಳನ್ನು ಅಭಿನಂದಿಸುತ್ತೇವೆ. ಮುಂದಿನ ವರ್ಷ ನಿಮ್ಮಲ್ಲಿರುವ ಈ ವೇದಿಕೆಯಲ್ಲಿ ಟಾಫರ್ ಆಗಿ ಸನ್ಮಾನಿಸಿಕೊಳ್ಳಬೇಕು. ಯಾರು ಬರುತ್ತೀರಿ ಎನ್ನುತ್ತಿದ್ದಂತೆ ೧೦ ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಕೈ ಮೇಲೆತ್ತುವ ಮೂಲಕ ಪ್ರಶಂಸೆಗೆ ಪಾತ್ರರಾದರು. ಜೆಎಸ್ಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಚ್.ಎಂ. ಉಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ೮ನೇ ತರಗತಿಯಿಂದಲೇ ಕಠಿಣ ಆಭ್ಯಾಸ ಹಾಗೂ ಪರಿಶ್ರಮ ಪಟ್ಟು ವ್ಯಾಸಂಗ ಮಾಡಿದರೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಿದೆ. ಮುಂದಿನ ವರ್ಷ ಕನಿಷ್ಠ ೪ ಮಂದಿಯಾದರು ಜಿಲ್ಲೆಗೆ ಟಾಪರ್ ಆಗಬೇಕು ಎಂದರು. ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಎನ್. ಹರ್ಷಿತಾ ಮಾತನಾಡಿ, ಅಂದಿನ ಪಾಠವನ್ನು ಆ ದಿನವೇ ಓದುವ ಜೊತೆಗೆ ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವುದು ಬಹಳ ಮುಖ್ಯ. ಮೊಬೈಲ್ನಿಂದ ದೂರವಿದ್ದು, ಓದಿನ ಕಡೆ ಹೆಚ್ಚು ನಿಗಾ ವಹಿಸಿದ ಪರಿಣಾಮ ನಾನು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅನುಭವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ಪೋಷಕರಾದ ಎನ್. ನಾಗೇಂದ್ರ, ನಳಿನನಾಗೇಂದ್ರ, ಶಿಕ್ಷಕರಾದ ರೂಪ, ದೇವಕಿ, ಸೌಮ್ಯ, ವಿನುತಾ, ಉಷಾ. ಸಹ ಶಿಕ್ಷಕ ವೃಂದವರು ಉಪಸ್ಥಿತರಿದ್ದರು.