)
ಕನ್ನಡಪ್ರಭ ವಾರ್ತೆ ಬೆಂಗಳೂರು
ಬ್ಯಾಂಕುಗಳಿಗೆ ಕೋಟ್ಯಂತರ ರು. ವಂಚನೆ ಸಂಬಂಧ ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧರಿಸಿ ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್, ಅದರ ನಿರ್ದೇಶಕ ಕೆ.ವೆಂಕಟೇಶ್ವರ ರಾವ್ ಮತ್ತು ಇತರರ ವಿರುದ್ಧ ಇ.ಡಿ. ತನಿಖೆ ಆರಂಭಿಸಿತ್ತು. ಆದರಂತೆ ಮೇ 21 ಮತ್ತು 29ರಂದು ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿ, ನಿರ್ದೇಶಕರ ನಿವಾಸ, ಕಚೇರಿ ಸೇರಿದಂತೆ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಶೋಧ ಕಾರ್ಯದ ವೇಳೆ ವಂಚನೆ ಸಂಬಂಧ ಹಲವು ದಾಖಲೆಗಳು, ಚಿನ್ನಾಭರಣ, ನಗದು ಜಪ್ತಿ ಮಾಡಿದೆ.
899.35 ಕೋಟಿ ರು. ಸಾಲ ಪಡೆದು ವಂಚನೆ:ಈ ದೀಪಕ್ ಕೇಬಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯು ಎಸ್ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟದಿಂದ 899.35 ಕೋಟಿ ರು. ಸಾಲ ಪಡೆದು ಬಳಿಕ ಆ ಸಾಲದ ಹಣವನ್ನು ಬೇರೆಗೆ ವರ್ಗಾಯಿಸುವ ಮುಖಾಂತರ ವಂಚಿಸಿರುವ ಗಂಭೀರ ಆರೋಪವಿದೆ. ಅಂತೆಯೆ ಕಂಪನಿಯು ನಕಲಿ ಹಣಕಾಸು ದಾಖಲೆಗಳನ್ನು ಸೃಷ್ಟಿಸಿ ಮತ್ತು ಖಾತೆಗಳ ದಾಖಲೆಗಳನ್ನು ತಿರುಚಿ ಬ್ಯಾಂಕ್ಗಳಿಗೆ ಸಲ್ಲಿಸಿ ಸಾಲ ಪಡೆದಿರುವ ಆರೋಪವಿದೆ.
ಸಾಲದ ಹಣವನ್ನು ಬೇರೆ ಕಡೆಗೆ ವರ್ಗಾಯಿಸಲು ನಕಲಿ ಕಂಪನಿಗಳನ್ನು ಸೃಷ್ಟಿಸಲಾಗಿದೆ. ಸುಳ್ಳು ಖರೀದಿ ಮತ್ತು ಮಾರಾಟದ ಮೂಲಕ ಕೃತಕವಾಗಿ ಕಂಪನಿಯ ವಹಿವಾಟು ಹೆಚ್ಚಿಸಲಾಗಿದೆ. ಸಾಲಗಳನ್ನು ಮರೆಮಾಚಲು ಮತ್ತು ಬ್ಯಾಂಕ್ಗಳಿಂದ ಮತ್ತಷ್ಟು ಸಾಲ ಪಡೆಯಲು ನಕಲಿ ಕಾರ್ಪೊರೇಟ್ ಗ್ಯಾರಂಟಿಗಳನ್ನು ನೀಡಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ.