ನರಸಿಂಹರಾಜಪುರ: ಫೆ.1ರಂದು ಪಟ್ಟಣದಲ್ಲಿ ನಡೆಯುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ರಾಜ ಬೀದಿಯಲ್ಲಿ ಹಚ್ಚುವ ದೀಪವು ಕೇವಲ ಧರ್ಮಕ್ಕೆ ಮಾತ್ರವಲ್ಲ. ದೇಶಕ್ಕೆ, ಭೂಮಿಗೆ ಸಮರ್ಪಣೆಯಾಗಲಿದೆ ಎಂದು ಸಿಂಹನಗದ್ದೆ ಬಸ್ತಿಮಠದ ಪೀಠಾಧಿಪತಿ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಹಿಂದೂ ಸಮಾಜೋತ್ಸವಕ್ಕೆ ಎನ್.ಆರ್.ಪುರ ಪಟ್ಟಣ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಪಾಲ್ಗೊಳ್ಳಬೇಕು. ದೀಪೋತ್ಸವವವು ಧರ್ಮ ಜಾಗೃತಿಯ ಸೂಚಕವಾಗಿದೆ. ಹಿಂದೂ ಸಮಾಜೋತ್ಸವವು ದೇವಲ ಧಾರ್ಮಿಕ ಉತ್ಸವ ಮಾತ್ರವಲ್ಲ. ಸಮಾಜದಲ್ಲಿ ಏಕತೆ ಮೂಡಿಸಲಾಗುತ್ತದೆ. ಹಿಂದೂಗಳೆಲ್ಲಾ ಸಹೋದರರಂತೆ. ದೇಶದಲ್ಲಿ ಸಾವಿರಾರು ಭಾಷೆ, ಪ್ರಾಂತ್ಯ, ಸಂಪ್ರದಾಯ ಇದ್ದರೂ ನಾವೆಲ್ಲರೂ ಹಿಂದೂಗಳೇ ಆಗಿದ್ದೇವೆ. ದೇಶ ಭಕ್ತರು ಒಟ್ಟುಗೂಡಿ ದೇಶ ದ್ರೋಹಿಗಳನ್ನು ಕುಗ್ಗಿಸಬೇಕಾಗಿದೆ ಎಂದು ಕರೆ ನೀಡಿದರು.
ದೇಶ ಉಳಿದರೆ ಮಾತ್ರ ನಮ್ಮ ಧರ್ಮ, ವ್ಯಾಪಾರ, ವಹಿವಾಟು ಉಳಿಯುತ್ತದೆ. ನಾವು ಒಗ್ಗಟ್ಟಾಗದಿದ್ದರೆ ಧರ್ಮವು ಉಳಿಯುದಿಲ್ಲ. ದೇಶವೂ ಉಳಿಯುದಿಲ್ಲ ಎಂದು ಎಚ್ಚರಿಕೆ ನೀಡಿದರು.ಸನಾತನ ಎಂಬುದು ಕೇವಲ ಧರ್ಮಕ್ಕೆ ಸೀಮಿತವಲ್ಲ. ಭಾರತ ಭೂಮಿಗೆ ನಮಸ್ಕಾರ ಮಾಡುವುವರೆಲ್ಲಾ ಸನಾತರಾಗಿದ್ದಾರೆ. ದೇವಸ್ಥಾನ, ರಸ್ತೆಯ ಎರಡೂ ಬದಿಗಳಲಿ ದೀಪಹಚ್ಚುವ ಮೂಲಕ ದೀವಾಪಳಿ ಆಚರಿಸಬೇಕಾಗಿದೆ. ದೀಪಹಚ್ಚುವ ಮೂಲಕ ಅಜ್ಞಾನ ಎಂಬ ಕತ್ತಲೆಯನ್ನು ದೂರ ಮಾಡಬೇಕು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡಿದವರಿಗೂ ದೀಪ ಹಚ್ಚಬೇಕು ಎಂದು ಹೇಳಿದರು.
ಧರ್ಮ ಕಟ್ಟಲು ಎಲ್ಲರೂ ಒಂದೇ ಮನಸ್ಸು ಮಾಡಬೇಕು. ಸಿಂಹನಗದ್ದೆ ಬಸ್ತಿಮಠವು ಧರ್ಮದ ಉಳಿವಿಗಾಗಿ, ಸಂಸ್ಕೃತಿ, ಸಂಪ್ರದಾಯದ ಉಳಿವಿಗಾಗಿ ಸದಾ ಬದ್ಧವಾಗಿದೆ. ಹಿಂದೂ ಸಮಾಜೋತ್ಸವಕ್ಕೆ ಎಲ್ಲಾ ಸಹಾಯ ನೀಡುತ್ತೇವೆ. ಸಮಾಜಕ್ಕಾಗಿ ದುಡಿಯುವ ಪತ್ರಕರ್ತರು, ಆಟೋರಿಕ್ಷಾದವರಿಗೆ ಸಿಂಹನಗದ್ದೆ ಬಸ್ತಿಮಠ ಸಹಾಯ ಹಸ್ತ ಚಾಚಿದೆ ಎಂದು ತಿಳಿಸಿದರು.ತಾಲೂಕು ಹಿಂದೂ ಸಮಾಜೋತ್ಸವ ಆಯೋಜನ ಸಮಿತಿಯ ಸಂಯೋಜಕ ಯಡಗೆರೆ ಸುಬ್ರಮಣ್ಯ, ಉಪಾಧ್ಯಕ್ಷೆ ಸುಜಾತ, ಹಿಂದೂ ಪರಿವಾರದ ಮುಖಂಡ ಎಂ.ವಿ.ರಾಜೇಂದ್ರ ಕುಮಾರ್, ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಸದಸ್ಯರಾದ ಎಸ್.ಎಸ್.ಸಂತೋಷ್ ಕುಮಾರ್, ವೈ.ಎಸ್.ರವಿ, ಅರುಣಕುಮಾರ್ ಜೈನ್, ಸೋಮೇಶ್, ಮಂಜುನಾಥ್, ಶಾಂತರಾಜ್, ಭಾಗ್ಯನಂಜುಂಡಸ್ವಾಮಿ, ಪ್ರೇಮಶ್ರೀನಿವಾಸ್, ಭಾನುಮತಿ, ವಸಂತಿ, ಶೈಲಾ, ಜಾನಕಮ್ಮ ಮತ್ತಿತರರು ಇದ್ದರು.
ಇದಕ್ಕೂ ಮೊದಲು ಬಸ್ತಿಮಠದ ಜ್ವಾಲಾಮಾಲಿನಿ ದೇವಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.