ಸಾಗರ: ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನ ಮಾಡಿದ ಅಂಬಿಗರ ಚೌಡಯ್ಯ ಒಂದರ್ಥದಲ್ಲಿ ಬಂಡಾಯದ ಶರಣನಾಗಿ ನಮ್ಮ ಮುಂದೆ ನಿಲ್ಲುತ್ತಾರೆ ಎಂದು ಪತ್ರಕರ್ತ ಬಿ.ಡಿ.ರವಿಕುಮಾರ್ ಅಭಿಪ್ರಾಯಪಟ್ಟರು.
ತಾನು ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ. ಭವಸಾಗರದಲ್ಲೂ ಬವಣೆಯಿಂದ ಬಳಲುವ ಭಕ್ತಜನರನ್ನು ವಚನಾಮೃತದ ಮೂಲಕ ಸಾಂತ್ವನಗೊಳಿಸುವ ಶರಣ ಎನ್ನುವುದನ್ನು ತೋರಿಸಿ ಕೊಟ್ಟಿರುವ ಅಂಬಿಗರ ಚೌಡಯ್ಯನವರು ತಮ್ಮ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ತನ್ನದೆ ತೀಕ್ಷ್ಣ ಪದಗಳ ಆಡುನುಡಿಯ ಮೂಲಕ ವಚನಗಳಾಗಿ ಪರಿವರ್ತಿಸಿ, ನಿರ್ಭಿಡೆಯಿಂದ ಇಷ್ಟ ದೈವದ ಬದಲಿಗೆ ತನ್ನದೆ ಅಂಕಿತ ನಾಮ ಇರಿಸಿ ಹೇಳಿದ್ದಾರೆ ಎಂದು ವಿವರಿಸಿದರು.
ಗಂಗಾಮತ ಸಮಾಜದ ಅಧ್ಯಕ್ಷ ಶಿವಾನಂದ್ ಆರ್. ಮಾತನಾಡಿದರು. ಉಪ ತಹಸೀಲ್ದಾರ್ ತೋಯಜಾಕ್ಷಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ರವಿ ಆಯನೂರು, ರವಿಕುಮಾರ್, ಭಾಸ್ಕರ್, ಮಧುರಾ ಶಿವಾನಂದ್, ವೆಂಕಟೇಶ್ ಚಂದಳ್ಳಿ, ಪರಿಮಳ, ಆನಂದ ಬಾಳೆಕೊಪ್ಪ, ಶಿವಾನಂದ ಗೇರುಬೀಸು, ದೇವರಾಜ್, ದಯಾನಂದ್ ಇನ್ನಿತರರು ಹಾಜರಿದ್ದರು. ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.