ಡಂಬಳ: ಡಂಬಳ ಮತ್ತು ಹಿರೇವಡ್ಡಟ್ಟಿ ಗ್ರಾಮದ ಮಧ್ಯೆ ಭಾಗದಲ್ಲಿ ಬರುವ ಜಮೀನುಗಳಲ್ಲಿ ಇರುವ 50ಕ್ಕೂ ಹೆಚ್ಚು ಜಿಂಕೆಗಳ ಹಿಂಡು ರೈತ ಸಿದ್ದಪ್ಪ ಬಂಡಾರಿ ಎಂಬುವವರ 2 ಎಕರೆದಲ್ಲಿ ಬೆಳೆದಿದ್ದ ಅಲಸಂದಿ ಬೆಳೆ ಹೊಲಕ್ಕೆ ನುಗ್ಗಿ ನಾಶ ಮಾಡಿವೆ.
ಈ ಭಾಗದಲ್ಲಿ ಬೇಸಿಗೆಯಲ್ಲಿ ಬರುವ ಅಲ್ಪ ಸ್ವಲ್ಪ ಕೊಳವೆಬಾವಿ ನೀರಿನಿಂದ ಬಿತ್ತನೆ ಮಾಡಿ ಅಲಸಂದಿ, ತರಕಾರಿ ಬೆಳೆಗಳನ್ನು ಬೆಳೆಯುವ ಪ್ರಯತ್ನದಲ್ಲಿರುವ ರೈತರು ಜಿಂಕೆಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.ಬೆಳೆದ ಬೆಳೆಯನ್ನು ಉಳಿಸಿಕೊಳ್ಳಬೇಕೆಂದು ರೈತರು ಹಗಲು ರಾತ್ರಿ ಕಾಯುತ್ತಿದ್ದಾರೆ.
ಒಂದೊಂದು ಹಿಂಡಿನಲ್ಲಿ 40ರಿಂದ 50ರಷ್ಟಿರುವ ಜಿಂಕೆಗಳು ಕೇವಲ ಅರ್ಧ ಗಂಟೆಯಲ್ಲಿ 2ರಿಂದ 4 ಎಕರೆ ಪ್ರದೇಶದಲ್ಲಿನ ಬೆಳೆಗಳನ್ನು ನಾಶಪಡಿಸುತ್ತಿವೆ. ಮನುಷ್ಯನ ವಾಸನೆ ಬಂದೊಡನೆಯೇ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ ಎನ್ನುತ್ತಾರೆ ರೈತರು.ಬೆಳೆ ರಕ್ಷಿಸಿಕೊಳ್ಳಲು ಬೆಳಗ್ಗೆಯಿಂದ ಸಂಜೆಯವರೆಗೂ ಹಾಗೂ ರಾತ್ರಿಯಿಂದ ಬೆಳಗಿನವರೆಗೂ ಸರದಿಯಲ್ಲಿ ಕಾಯಬೇಕಿದೆ. ಸ್ವಲ್ಪ ಯಾಮಾರಿದರೂ ಜಿಂಕೆಗಳು ಜಮೀನಿಗೆ ಬಂದು ಪೈರು ತಿಂದು ಹಾಕುತ್ತವೆ ಎನ್ನುವುದು ಈ ಭಾಗದ ರೈತರ ಆರೋಪವಾಗಿದೆ.
ಜಿಂಕೆಗಳ ಸಂತತಿ ಹೆಚ್ಚಳ: ಕಪ್ಪತ್ತಗುಡ್ಡ ಪಕ್ಕದಲ್ಲೇ ಇರುವುದರಿಂದ ಪ್ರತಿ ವರ್ಷ ಜಿಂಕೆಗಳ ಸಂತತಿ ಹೆಚ್ಚುತ್ತಲೇ ಇದೆ. ರೈತರ ಬೆಳೆ ಪ್ರತಿವರ್ಷ ನಾಶವಾಗುವುದನ್ನು ಸರ್ಕಾರ ಗಮನಿಸುತ್ತಿಲ್ಲ. ಪ್ರತಿ ವರ್ಷ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಿವೆ ಪರಿಹಾರ ಮಾತ್ರ ಸಿಕ್ಕಿಲ್ಲ ಎನ್ನುತ್ತಾರೆ ರೈತರು.ಜಿಂಕೆಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕು ಮತ್ತು ಜಿಂಕೆಗಳ ದಾಳಿಯಿಂದಾಗಿ 2 ಎಕರೆಯಲ್ಲಿ ಸಾಲ ಮಾಡಿ ಬೆಳೆದಿದ್ದ ಆಲಸಂದಿ ಬೆಳೆ ಹಾನಿಯಾಗಿದ್ದು ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಡಂಬಳ ಗ್ರಾಮದ ಸಿದ್ದಪ್ಪ ಬಂಡಾರಿ ಹೇಳಿದರು.