ಸಂತೋಷ ನಾಯ್ಕ ಸಾವಿನ ಪ್ರಕರಣದಲ್ಲಿ ಯಾರ ಒತ್ತಾಯಕ್ಕೂ ಮಣಿಯದೆ ಸೂಕ್ತ ತನಿಖೆ ನಡೆಸಬೇಕು
ಸಿದ್ದಾಪುರ: ಸಂತೋಷ ನಾಯ್ಕ ಸಾವಿನ ಪ್ರಕರಣದಲ್ಲಿ ಯಾರ ಒತ್ತಾಯಕ್ಕೂ ಮಣಿಯದೆ ಸೂಕ್ತ ತನಿಖೆ ನಡೆಸಬೇಕು ಹಾಗೂ ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಆದರೆ ನಿರಪರಾಧಿಗಳಿಗೆ ಶಿಕ್ಷೆ ಆಗುವಂತೆ ಆಗಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೇಳಿದರು.
ಗುರುವಾರ ಸಂತೋಷ್ ನಾಯ್ಕ ಸಾವಿನ ಕುರಿತಂತೆ ವಿಚಾರಣೆಗೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ, ವಿಚಾರಣೆ ಮುಗಿಸಿ ಹೊರಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಕಾಳೆನಳ್ಳೀಯಲ್ಲಿ ಸಂತೋಷ್ ನಾಯ್ಕ ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ನನಗೂ ಏನೂ ಸಂಬಂಧ ಇಲ್ಲ. ಜೂ. ೭ರಂದು ಚೆನ್ಮಾವನ ಲೋಕೇಶ್ ಎನ್ನುವ ಹುಡುಗ ನನಗೆ ಕರೆ ಮಾಡಿ, ಸೊರಬ ತಾಲೂಕಿನ ಓರ್ವ ಹುಡುಗ ಫೇಕ್ ಐಡಿ ಮಾಡಿಕೊಂಡು, ಹುಡುಗಿ ಫೋಟೋ ಹಾಕಿಕೊಂಡು, ನಮ್ಮ ತಂದೆಗೆ ಆರಾಮ ಇಲ್ಲ, ಮಣಿಪಾಲದಲ್ಲಿ ಅಡ್ಮಿಟ್ ಆಗಿದ್ದೇವೆ, ನಮಗೆ ಹಣ ಸಹಾಯ ಮಾಡಿ ಎಂದು ಕೇಳಿದ್ದಾನೆ, ಸುಮಾರು ₹3 ಲಕ್ಷ ಹಣ ಹಾಕಿಸಿಕೊಂಡಿದ್ದಾನೆ ಎಂದು ಹೇಳಿದರು. ಈ ಸಮಸ್ಯೆ ಬಗೆಹರಿಸಿಕೊಡಿ ಎಂದು ಲೋಕೇಶ ಕೇಳಿದರು. ನೀವು ತಕ್ಷಣ ಪೊಲೀಸ್ ಸ್ಟೇಷನ್ಗೆ ಹೋಗಿ ಕಂಪ್ಲೇಂಟ್ ಕೊಡಿ ಎಂದು ನಾನು ಅವರಿಗೆ ಹೇಳಿದ್ದೇನೆ. ಅವರು ಜೂ. ೭ರಂದು ಆರು ಗಂಟೆಗೆ ಕಂಪ್ಲೇಟ್ ಕೊಟ್ಟಿದ್ದಾರೆ. ಕಂಪ್ಲೇಂಟ್ ಕೊಟ್ಟು ಮೂರು ದಿವಸಗಳಾದರೂ ಯಾವುದೇ ಅಧಿಕಾರಿ ಈ ಬಗ್ಗೆ ಕ್ರಮ ವಹಿಸಿಲ್ಲ. ಈಗ ಅನಾವಶ್ಯಕವಾಗಿ ನನ್ನನ್ನು ವಿಚಾರಣೆ ನಡೆಸಿ, ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ವಸಂತ ನಾಯ್ಕ ಹೇಳಿದರು.
ಅನವಶ್ಯಕವಾಗಿ ಎಫ್ಐಆರ್ ಮಾಡಿದರೆ ನಾನು ಕೂಡ ಅಧಿಕಾರಿಗಳ ವಿರುದ್ಧ, ಬಿಜೆಪಿಯವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ನನ್ನದು ಕಮಿಷನ್ ವ್ಯವಹಾರ ಇಲ್ಲ ಎಂದರು.
ಈ ಪ್ರಕರಣದಲ್ಲಿ ನನ್ನ ಹೆಸರನ್ನು ಎಫ್ಐಆರ್ನಲ್ಲಿ ಸೇರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಒತ್ತಾಯಿಸಿದ್ದಾರೆ. ನನ್ನ ಘನತೆಗೆ ಧಕ್ಕೆ ತಂದ ಕಾರಣಕ್ಕೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಅಲ್ಲದೆ ಪಪಂ ಸದಸ್ಯ ಕೆ.ಜಿ.ನಾಯ್ಕ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.