ಶ್ರೀ ಆದಿಚುಂಚನಗಿರಿ ಸಭಾ ಭವನದಲ್ಲಿ ವಿಧ್ಯಾರ್ಥಿ ಸಂಘಗಳ ಉದ್ಘಾಟನೆ,
ಪ್ರಸ್ತುತ ದಿನಗಳಲ್ಲಿ ಮಾನವೀಯ,ನೈತಿಕ ಮೌಲ್ಯಗಳ ಅಧಃಪತನವಾಗುತ್ತಿದ್ದು, ಕುಸಿಯುತ್ತಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮಿಜಿ ಹೇಳಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಸಭಾ ಭವನದಲ್ಲಿ ಆಯೋಜಿಸಿದ್ದ ಪಿಯುಸಿ ಹಾಗೂ ಪ್ರೌಢಶಾಲಾ ವಿಧ್ಯಾರ್ಥಿ ಸಂಘಗಳ ಉದ್ಘಾಟನೆ, ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಉದ್ಯೋಗ ಗಳಿಸಬಹುದು, ಹಣ ಸಂಪಾದಿಸಬಹುದು, ಆದರೆ ಶಿಕ್ಷಣದಿಂದ ಸಂಸ್ಕೃತಿ, ಸಂಸ್ಕಾರ ಕಲಿಯುವುದು ಮುಖ್ಯ.ಇತ್ತೀಚಿನ ದಿನಗಳಲ್ಲಿ ಹಣ ಸಂಪಾದನೆ ಜೀವನದ ಮುಖ್ಯ ಗುರಿಎಂಬಂತೆ ವರ್ತಿಸುತ್ತಿದ್ದಾರೆ. ಲೌಕಿಕ ಜಂಜಾಟದಲ್ಲಿ ನಮ್ಮತನ ಮರೆತು ಗುರಿಯಿಲ್ಲದ ಬದುಕು ಸಾಗಿಸುತ್ತಿದ್ದೇವೆ. ಇದು ಬದಲಾಗಬೇಕು. ನಮ್ಮ ಹಿರಿಯರು ನೀಡಿ ಹೋದ ಆದರ್ಶ ಮೌಲ್ಯಗಳನ್ನು ಬೆಳೆಸಿ ಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಆತ್ಮವಿಶ್ವಾಸದಿಂದ ಜೀವನದ ಎಡರು ತೊಡರುಗಳನ್ನು ಎದುರಿಸಿದಾಗ ಮಾತ್ರ ಬದುಕು ಸಾರ್ಥಕ.
ಪಿಯುಸಿ, ಎಸ್ಎಸ್ಎಲ್ ಸಿಯಲ್ಲಿ ರಾಜ್ಯ,ಜಿಲ್ಲಾ ಮಟ್ಟದಲ್ಲಿ ರಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಕೆ.ಸಿ.ನಾಗೇಶ್, ನಿವೃತ್ತ ಪ್ರಾಚಾರ್ಯ ದುಗ್ಗಪ್ಪಗೌಡ, ಸಂಜಯ ಮಿರ್ಜಿ, ಕಿರಣ್ ಕುಮಾರ್, ಹರೀಶ್, ವಿಶ್ರಾಂತ್, ಆಶಾ, ಭಾರತಿ ಮತ್ತಿತರರು ಇದ್ದರು.
ಶೃಂಗೇರಿ ಪಟ್ಟಣದ ಶ್ರೀ ಆದಿಚುಂಚನಗಿರಿ ಸಭಾಭವನದಲ್ಲಿ ನಡೆದ ಬಿಜಿಎಸ್ ಪದವಿಪೂರ್ವ, ಪ್ರೌಢಶಾಲಾ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭವನ್ನು ಗುಣನಾಥ ಶ್ರೀಗಳು ನೆರವೇರಿಸಿದರು.