ಗದಗ: ಆಯುಷ್ ಇಲಾಖೆ ಹಾಗೂ ಎನ್ಐಎಂಎ ಜಂಟಿ ಸಹಯೋಗದೊಂದಿಗೆ ಆಯುಷ್ ಚಿಕಿತ್ಸಾ ಪದ್ಧತಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗೋಣ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೊರೆಕರ ಹೇಳಿದರು.
ಎನ್ಐಎಂಎ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಅಧ್ಯಕ್ಷ ಡಾ. ಜಯಕುಮಾರ ಬ್ಯಾಳಿ ಮಾತನಾಡಿ, ನಮ್ಮ ಸಂಘಟನೆಯು 1948 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಂದ ಉದ್ಘಾಟಿಸಲ್ಪಟ್ಟ ಹಾಗೂ ರಾಷ್ಟ್ರಮಟ್ಟದ ನೋಂದಾಯಿತ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ 2ನೇ ಜಿಲ್ಲೆ ಗದಗ ಜಿಲ್ಲೆಯಾಗಿದೆ ಎಂದ ಅವರು, ಮುಂದಿನ 2 ವರ್ಷಗಳವರೆಗೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ತಿಳಿಸಿದರು.
ಡಾ.ರಾಜೇಶ್ವರಿ ಹಿರೇಮಠ ಹಾಗೂ ಡಾ.ಉಮಾ ಗಾಣಿಗೇರ ಧನ್ವಂತರಿ ಪ್ರಾರ್ಥನೆ ಮಾಡಿದರು. ರೋಣದ ರಾಜೀವ್ ಗಾಂಧಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಐ.ಬಿ.ಕೊಟ್ಟೂರಶೆಟ್ಟಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಜಿ.ಪಾಟೀಲ, ಡಾ. ಯು.ವಿ.ಪುರದ, ಸಿಎಂಇ ಕಾರ್ಯಕ್ರಮದ ಅಂಗವಾಗಿ ಸೌಖ್ಯದ ಆಸ್ಪತ್ರೆಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಚಿಕ್ಕ ಮಕ್ಕಳ ತಜ್ಞ ಡಾ.ಶಿವನಗೌಡ ಜೋಳದರಾಶಿ ನವಜಾತ ಶಿಶುಗಳ ಆರೈಕೆ ಹಾಗೂ ಡಾ.ಪ್ರವೀಣ ಡಂಬಳ ಮೂತ್ರ ರೋಗಗಳ ಬಗ್ಗೆ ತಿಳಿಸಿದರು.ಅಧ್ಯಕ್ಷತೆಯನ್ನು ಡಾ. ಎಸ್.ಆರ್.ಹಿರೇಮಠ ವಹಿಸಿದ್ದರು. ನೂತನ ಅಧ್ಯಕ್ಷ ಡಾ.ಜಯಕುಮಾರ್ ಬ್ಯಾಳಿ, ಕಾರ್ಯದರ್ಶಿ ಡಾ. ಬಸವರಾಜ ಚನ್ನಪ್ಪಗೌಡ್ರ, ಖಜಾಂಚಿ ಡಾ. ಗಿರೀಶ ಬಡಿಗೇರ ಹಾಗೂ ಉಳಿದ ಎಲ್ಲ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಗದಗ ನಗರ ಸೇರಿದಂತೆ ಎಲ್ಲ ತಾಲೂಕುಗಳಿಂದ ನೂರಕ್ಕು ಹೆಚ್ಚು ವೈದ್ಯರು ಭಾಗವಹಿಸಿದ್ದರು.