ಕನ್ನಡಪ್ರಭ ವಾರ್ತೆ ಮಂಡ್ಯ
ಮುಂದಿನ ವರ್ಷ ಯುಗಾದಿ ವೇಳೆಗೆ ರೈತರಿಗೆ ಹೊಸ ಆಯಾಮದ ಕೃಷಿ ಬಿತ್ತನೆಗಳನ್ನು ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ. ಎಚ್.ಎಸ್.ಶಿವರಾಮ್ ತಿಳಿಸಿದರು,ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ರೈತರು ಬಿತ್ತನೆ ಮಾಡುವುದಕ್ಕೆ ಸಾಕಷ್ಟು ಹೊಸ ಹೊಸ ತಳಿಗಳು ಮಾರುಕಟ್ಟೆಗೆ ಬಂದಿವೆ. ಅದರ ಬಳಕೆ ಮಾಡಿಕೊಳ್ಳಬೇಕು. ಹೈನುಗಾರಿಕೆ, ಕೃಷಿ, ಪಶು ಸಂಗೋಪನೆ ಸೇರಿದಂತೆ ಎಲ್ಲಾ ರೀತಿಯ ಕೃಷಿಗೆ ಸಂಬಂಧಿಸಿರುವ ಅಂಶಗಳಿಗೆ ರೈತರು ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ತಿಳಿಸಿದರು.
ಮಂಡ್ಯ ಮತ್ತು ಭದ್ರಾವತಿ ಭಾಗದಲ್ಲಿ ಮೊದಲು ಬೆಲ್ಲ ತಯಾರಿಕೆಯಲ್ಲಿ ರಾಸಾಯನಿಕ ಉಪಯೋಗಿಸುತ್ತಿದ್ದರು. ಅದು ಆರೋಗ್ಯಕ್ಕೆ ಮಾರಕವೆಂದು ಬಹುಕೊಪ್ಪರಿಕೆ ಮಾದರಿಯಲ್ಲಿ ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿವೆ ಎಂದರು.ಕೃಷಿ ಮೇಳದಲ್ಲಿ ಸಾವಿರಾರು ಜನ ಸೇರಿರುವುದು ಹೆಮ್ಮೆಯ ವಿಷಯ. ರೈತರು ಮೇಳದ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚು ಆದಾಯ ಗಳಿಸಿಕೊಳ್ಳಬೇಕು. ಕೃಷಿ ಇಲಾಖೆಯ ಎಲ್ಲ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರಾದ ಡಾ.ವೈ.ಎನ್.ಶಿವಲಿಂಗಯ್ಯ ಅವರು ಮಾತನಾಡಿ ಕೃಷಿ ಮೇಳವು ಸಾಮಾನ್ಯವಾಗಿ ರೈತರಿಗೆ ಹಬ್ಬವಿದ್ದಂತೆ. ರೈತರಿಗೆ ಉಪಯೋಗವಾಗುವಂತಹ ಸಾಕಷ್ಟು ವಿಷಯ ಅಂಶಗಳನ್ನು ಈ ಕೃಷಿ ಮೇಳದಲ್ಲಿ ಅನಾವರಣಗೊಳಿಸಲಾಗಿದೆ. ಮೇಳದ ಸದುಪಯೋಗವನ್ನು ಕೃಷಿಕ ಮಂದಿಯವರು ಪಡೆದುಕೊಂಡಿದ್ದಾರೆ ಎಂದರು.ವೇದಿಕೆಯ ಮೇಲೆ ಕೃಷಿ ಮೇಳದಲ್ಲಿ ಆಯೋಜನೆ ಮಾಡಿದ್ದ ಕೃಷಿಗೆ ಸಂಬಂಧಿಸಿದ ಪ್ರದರ್ಶನಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯ ಡೀನ್ (ಕೃಷಿ ) ಡಾ.ಪಿ.ಎಸ್.ಫಾತಿಮಾ, ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಕಮಲಾಬಾಯಿ ಕೂಡಗಿ ಇತರರಿದ್ದರು.