ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆ ತಲುಪಿಸಿ: ಉದಯಶಂಕರ

KannadaprabhaNewsNetwork | Published : Feb 16, 2025 1:47 AM

ಸಾರಾಂಶ

ಲೋಪವಿಲ್ಲದೇ ತಲುಪಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು

ಹರಪನಹಳ್ಳಿ: ಪಂಚಗ್ಯಾರಂಟಿಗಳ ಯೋಜನೆಗಳು ಸಕಾಲದಲ್ಲಿ ರಾಜ್ಯ ಸರ್ಕಾರ ಅನುಷ್ಠಾನ ಮಾಡಿದ್ದು, ಇದು ಅರ್ಹ ಎಲ್ಲ ಫಲಾನುಭವಿಗಳಿಗೂ ಶೇ.100 ನಿರಂತರವಾಗಿ ಯಾವುದೇ ಲೋಪವಿಲ್ಲದೇ ತಲುಪಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಶ್ರಮಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಉದಯಶಂಕರ್ ಮಾಗಾನಹಳ್ಳಿ ಹೇಳಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಹಿರೇಮೇಗಳಗೆರೆ, ಅರಸೀಕೆರೆ, ಹಲವಾಗಲು, ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗುಂದಿ, ನೀಲಗುಂದ, ಅರಸನಾಳು, ಮತ್ತೂರು, ಶಿವಪುರ ತಾಂಡದಿಂದ ಹರಪನಹಳ್ಳಿಗೆ ಬಸ್ ಇಲ್ಲದಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಗ್ರಾಮಗಳಿಂದ ಹರಪನಹಳ್ಳಿಗೆ ಸಂಚರಿಸಲು ಹೆಚ್ಚವರಿಯಾಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲು ಗ್ಯಾರಂಟಿ ಯೋಜನೆಗಳ ಸದಸ್ಯರು ಹಾಗೂ ಸಾರ್ವಜನಿಕರಿಂದ ನಮಗೆ ಮನವಿಗಳು ಬಂದಿವೆ. ಹೀಗಾಗಿ ಈ ಭಾಗಗಳಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಲು ಘಟಕದ ವ್ಯವಸ್ಥಾಪಕಿ ಮಂಜುಳ ರವರಿಗೆ ಸಮಿತಿಯ ಅಧ್ಯಕ್ಷ ಉದಯಶಂಕರ್ ಮಾಗಾನಹಳ್ಳಿ ಸೂಚಿಸಿದರು.

ಕೆಎಸ್ಸಾರ್ಟಿಸಿ ಘಟಕ ವ್ಯವಸ್ಥಾಪಕಿ ಮಂಜುಳಾ ಮಾತನಾಡಿ, ಶಕ್ತಿ ಯೋಜನೆಯಡಿ 70 ರೂಟ್ ಮಾರ್ಗ ಮಾಡಲಾಗಿದೆ. ಅದರಲ್ಲಿ ಸಾಮಾನ್ಯ ಮಾರ್ಗಸೂಚಿಗಳು 34 ಇದ್ದು, ವೇಗಮಾರ್ಗ ಸೂಚಿಗಳು 24 ಇದ್ದು, ರಾತ್ರಿ ವೇಳೆ ವೇಗ ಮಾರ್ಗ ಸೂಚಿಗಳು 12 ಇದ್ದು, ಒಟ್ಟು ನಿರ್ಗಮನ ವಾಹನಗಳು 45 ಇವೆ. ಪ್ರತಿ ದಿನ 27126 ಕಿ.ಮೀ. ಕಾರ್ಯಾಚರಣೆಯಲ್ಲಿವೆ. ಜೂನ್ 2023ರಿಂದ ಜನವರಿ 2025ರ ವರೆಗೆ ಆದಾಯ ₹30.71 ಕೋಟಿ ಆದಾಯ ಬಂದಿದೆ. ಇನ್ನು ತಾಲೂಕಿನ 230 ಗ್ರಾಮಗಳಲ್ಲಿ ಸರ್ವೇ ಮಾಡಿದಂತೆ 8ರಿಂದ10 ಗ್ರಾಮಗಳ ಮಾರ್ಗದಲ್ಲಿ ಬಸ್‌ಗಳು ಚಲಿಸಿದೇ ಇರುವುದು ಕಂಡುಬಂದಿದೆ. ಬಸ್‌ಗಳನ್ನು ಯಡಿಹಳ್ಳಿ, ಉಚ್ಚಂಗಿದುರ್ಗ, ಕುರೇಮಾಗಿನಹಳ್ಳಿ ಈ ಭಾಗದಲ್ಲಿ ಸ್ಥಳೀಯ ಬಸ್‌ಗಳನ್ನು ಕಳಿಸಲಾಗುವುದು. ಇನ್ನು ಇದೇ ಫೆ.17 ರಂದು ಹರಪನಹಳ್ಳಿ ಘಟಕ್ಕೆ 11ನೂತನ ಹೊಸ ಬಸ್‌ಗಳು ಲೋಕಾರ್ಪಣೆ ಆಗುತ್ತಿವೆ ಎಂದು ತಿಳಿಸಿದರು.

ಹರಪನಹಳ್ಳಿ ತಾಪಂ ಇಒ ಚಂದ್ರಶೇಖರ್ ವೈ.ಎಚ್. ಮಾತನಾಡಿ, ರಾಜ್ಯ ಸರ್ಕಾರ ಅನುಷ್ಠಾನ ಮಾಡಿರುವ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಪ್ರತಿ ಅರ್ಹ ವ್ಯಕ್ತಿಗಳಿಗೆ ತಲುಪಬೇಕಾದರೆ ಇದರಲ್ಲಿ ಎಲ್ಲರ ಶ್ರಮವೂ ಇದೆ. ಈ ಯೋಜನೆಗಳನ್ನು ಬೇರೆ ಬೇರೆ ರಾಜ್ಯಗಳು ಕೂಡ ಅಳವಡಿಸಿಕೊಳ್ಳಲು ಹಾಗೂ ಅಧ್ಯಯನ ನಡೆಸಲು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ ಎಂದರೆ ಇವುಗಳ ಜನಪ್ರಿಯತೆ ಎಷ್ಟು ಇರಬೇಕು ಎಂಬುದನ್ನು ನಾವೆಲ್ಲರೂ ಅರಿತುಕೊಂಡು ಕೆಲಸ ನಿರ್ವಹಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಲಕ್ಕಳ್ಳಿ ಗಂಗಪ್ಪ, ಯು.ಮಂಜಪ್ಪ, ಹಲವಾಗಲು ಶಿವಪುತ್ರಪ್ಪ, ಪಂಪಾಚಾರಿ ಮತ್ತಿಹಳ್ಳಿ, ಡಿ.ಗಣೇಶನಾಯ್ಕ, ಎಂ.ಸೋಮನಾಥ, ಬಡಗಿ ದಾದಾಪೀರ್, ಬಿ.ಪಿ. ಬಸವರಾಜ, ಚೆನ್ನಮ್ಮ ಮೈದೂರು ರಾಮಣ್ಣ, ತಿಪ್ಪನಾಯಕನಹಳ್ಳಿ ಫಕ್ಕೀರಪ್ಪ, ಎಸ್.ಕರಿಯಪ್ಪ, ಪಂ.ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ, ಹರಪನಹಳ್ಳಿ ಮತ್ತು ತೆಲಿಗಿ ವ್ಯಾಪ್ತಿಯ ಬೆಸ್ಕಾಂ ಇಲಾಖೆಯ ಎಇಇ ಪ್ರಕಾಶ್ ಪತ್ತೆನೂರು, ಹರಪನಹಳ್ಳಿ ಕೆಎಸ್ಸಾರ್ಟಿಸಿ ಘಟಕ ವ್ಯವಸ್ಥಾಪಕಿ ಮಂಜುಳ, ಆಹಾರ ಶಿರಸ್ತೇದಾರ ಭರತ್ ಇದ್ದರು.

Share this article