ಮುಡುಬ ಸಿದ್ದಾಪುರ ಗ್ರಾ.ಪಂ ನೂತನ ಸದಸ್ಯರಾದ ದ್ರಾಕ್ಷಾಯಣಪ್ಪ ಒತ್ತಾಯಕನ್ನಡಪ್ರಭ ವಾರ್ತೆ ಶಿಕಾರಿಪುರ ಸುಳ್ಳು ಜಾತಿ ಪ್ರಮಾಣ ಸಲ್ಲಿಸಿ ಗ್ರಾ.ಪಂ ಚುನಾವಣೆಯಲ್ಲಿ ಜಯಸಾಧಿಸಿದ ಅಭ್ಯರ್ಥಿಯ ಸದಸ್ಯತ್ವ ನ್ಯಾಯಾಲಯ ರದ್ದುಗೊಳಿಸಿದ್ದು, ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಇದುವರೆಗೂ ಕಠಿಣ ಕ್ರಮ ಕೈಗೊಳ್ಳದೆ ಪರಿಶಿಷ್ಟ ವರ್ಗಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ತಾಲೂಕಿನ ಮುಡುಬ ಸಿದ್ದಾಪುರ ಗ್ರಾ.ಪಂ ನೂತನ ಸದಸ್ಯರಾದ ದ್ರಾಕ್ಷಾಯಣಮ್ಮ ತಿಳಿಸಿದರು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಬಸಮ್ಮನವರ ಸದಸ್ಯತ್ವ ರದ್ದುಗೊಳಿಸಿ ಚುನಾವಣೆಯಲ್ಲಿ 12 ಮತಗಳ ಹಿನ್ನಡೆಯಿಂದ ಎರಡನೇ ಸ್ಥಾನಗಳಿಸಿದ ನನಗೆ ಡಿ.20ರಂದು ಸದಸ್ಯತ್ವ ನೀಡಿದ್ದಾರೆ ಎಂದು ತಿಳಿಸಿದ ಅವರು, ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಬಸಮ್ಮ ಸಹಿತ ಚುನಾವಣಾಧಿಕಾರಿ ಕೆರೆಯಪ್ಪ ಮತ್ತಿತರರ ನಾಲ್ಕು ಆರೋಪಿಗಳ ವಿರುದ್ಧ ದೂರು ದಾಖಲಾ ಗಿದ್ದು ಇದುವರೆಗೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕಾನೂನಿನ ಭಯವಿಲ್ಲದೆ ರಾಜಾರೋಷವಾಗಿ ತಿರುಗುತ್ತಿರುವ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಅಧಿಕಾರಿಗಳು ಆರೋಪಿಗಳ ಪರವಾಗಿದ್ದಾರೆ ಎಂದು ದೂರಿದರು.
ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಮಹಿಳೆಗೆ ಆದ ಅನ್ಯಾಯಕ್ಕೆ ಸೂಕ್ತ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದ ಅವರು, ಪುನಃ ಇಂತಹ ಘಟನೆ ಮರುಕಳಿಸದ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗ್ರಾ.ಪಂ ಸದಸ್ಯ ಜಿ.ಬಸವರಾಜ ಮಾತನಾಡಿ, ಬಹುತೇಕ ಶಾಲಾ ಕಾಲೇಜುಗಳಲ್ಲಿ ದಾಖಲಿಸುವಾಗ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಲಾಗುತ್ತಿದ್ದು, ಇಂತಹ ಘಟನೆ ಸಾಮಾನ್ಯವಾಗುತ್ತಿದೆ. ಜನತೆಗೆ ಕಾನೂನಿನ ಭಯವಿಲ್ಲವಾಗಿದೆ ಸುಳ್ಳು ಜಾತಿ ಪ್ರಮಾಣ ಪತ್ರದ ಮೂಲಕ ಹಲವರು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಇದರಿಂದ ಪರಿಶಿಷ್ಟ ಜನಾಂಗ ಮೀಸಲಾತಿಯಿಂದ ವಂಚಿತವಾಗಲಿದೆ. ಈ ದಿಸೆಯಲ್ಲಿ ಕಟ್ಟುನಿಟ್ಟಿನ ಕ್ರಮದ ಮೂಲಕ ದುರುಪಯೋಗವನ್ನು ತಡೆಗಟ್ಟಬೇಕಾಗಿದೆ ಎಂದು ಆಗ್ರಹಿಸಿದರು.