ದಾವಣಗೆರೆ : ಹಾಸನದಲ್ಲಿ ಪ್ರಭಾವಿ ರಾಜಕಾರಣಿ ಕುಟುಂಬದ ಸದಸ್ಯರು ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಆಘಾತಕಾರಿ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಆಕ್ರೋಶ ವ್ಯಕ್ತಪಡಿಸಿದೆ.
ನಗರದ ಜಯದೇವ ವೃತ್ತದಲ್ಲಿ ಗುರುವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಭಾರತಿ ಮಾತನಾಡಿ, ಹೆಣ್ಣುಮಕ್ಕಳ ಮೇಲೆ ಎಸಗಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಸರಣಿ ದೃಶ್ಯಾವಳಿಗಳಿರುವ ಪೆನ್ ಡ್ರೈವ್ಗಳು ಹಾಸನದ ಹಾದಿ ಬೀದಿಗಳಲ್ಲಿ ಚೆಲ್ಲಲಾಗಿದೆ ಎನ್ನುವ ಆಘಾತಕಾರಿ ಸಂಗತಿ ರಾಜ್ಯವನ್ನು ತಲ್ಲಣಗೊಳಿಸಿದೆ ಎಂದರು.
ಮನೆ ಕೆಲಸದ ಮಹಿಳೆಯಿಂದ ಹಿಡಿದು ಜಿಪಂ ಸದಸ್ಯೆ ಹಾಗೂ ಉನ್ನತ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಗಳು ಕೂಡ ಈ ಲೈಂಗಿಕ ದೌರ್ಜನ್ಯದ ಬಲಿಪಶುಗಳು ಎಂಬುದು ಇನ್ನೂ ಆಘಾತಕಾರಿ ವಿಷಯ. ಈಗ ಕೆಲವು ಸಂತ್ರಸ್ತ ಹೆಣ್ಣುಮಕ್ಕಳು ಬಂದು ತಮ್ಮ ಮೇಲಾದ ದೌರ್ಜನ್ಯದ ಕುರಿತು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಈ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಕಾ ತಂಡ (ಎಸ್ಐಟಿ) ವನ್ನು ರಚಿಸಿದೆ. ಆದರೆ ಇದು ಇಷ್ಟಕ್ಕೆ ನಿಲ್ಲಬಾರದು ಮತ್ತು ಯಾವುದೇ ರಾಜಕೀಯ ಹಿತಾಸಕ್ತಿಗೆ ಇದು ಬಳಕೆ ಆಗಬಾರದು ಎಂದರು.
ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಎಷ್ಟೇ ಪ್ರಭಾವಿತರಾಗಿದ್ದರೂ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ರಾಜ್ಯ ಸರ್ಕಾರವು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಸಂತ್ರಸ್ತ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಸಂಘಟನೆ ಜಿಲ್ಲಾ ಸಮಿತಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಜ್ಯೋತಿ ಕುಕ್ಕವಾಡ, ಮಮತಾ, ರತ್ನಮಾಲಾ, ಅನಿತಾ, ಸರಸ್ವತಿ, ಶ್ವೇತಾ, ತಾರಾ ರಾಣಿ ಮುಂತಾದವರು ಇದ್ದರು.- - -