ಕನ್ನಡಪ್ರಭ ವಾರ್ತೆ ಮೂಡಲಗಿ
ರಾಜ್ಯದಲ್ಲಿ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಾಲೂಕಿನ ಧರ್ಮಸ್ಥಳದ ನೂರಾರು ಭಕ್ತಾಭಿಮಾನಿಗಳು ಮೂಡಲಗಿ ತಹಸೀಲ್ದಾರ್ ಶ್ರೀಶೈಲ ಗುಡಮೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಧರ್ಮಸ್ಥಳ ಕ್ಷೇತ್ರ ದಕ್ಷಿಣ ಕಾಶಿ ಎಂದೇ ನಾಮಾಂಕಿತವಾಗಿದೆ. ರಾಜ್ಯದಲ್ಲಿ ಅಷ್ಟೆ ಅಲ್ಲದೇ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹೀಗೆ ದೇಶದ ಬೇರೆ ಬೇರೆ ಕಡೆಗಳಿಂದ ನಿತ್ಯ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಲಕ್ಷಗಂಟಲೆ ಭಕ್ತರು ಆಗಮಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ಗಿರೀಶ್ ಮಟ್ಟಣ್ಣನವರ್, ಮಹೇಶ ಶೆಟ್ಟಿ ತಿಮರೋಡಿ, ಸಮೀರ್ ಎಂ.ಡಿ, ಸಂತೋಷ ಶೆಟ್ಟಿ, ಜಯಂತ್.ಟಿ, ಅಜಯ್ ಅಂಚನ್ ಮತ್ತು ಅವನ ಸಹಚರರು ಸೇರಿಕೊಂಡು ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ಹೆಸರಿಗೆ ಕಳಂಕ ತರುವಂಹತ ಕೀಳು ಮಟ್ಟದ ಭಾಷೆ ಉಪಯೋಗಿಸಿ ವಿಡಿಯೋಗಳ ತುಣುಕುಗಳನ್ನು ತಯಾರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಿಕೊಂಡು ಯಾವುದೇ ದಾಖಲೆಗಳಿಲ್ಲದೇ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದರಿಂದ ಶ್ರೀಕ್ಷೇತ್ರದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇದರಿಂದಾಗಿ ಈಗಾಗಲೇ ಸಮಾಜದಲ್ಲಿ ಎರಡು ಬಣಗಳು ನಿರ್ಮಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿ ಭಂಗಕ್ಕೆ ಕಾರಣವಾಗಬಹುದಾಗಿದೆ. ಅನಾಮಿಕ ವ್ಯಕ್ತಿಯೋರ್ವ ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುತ್ತಿರುವುದನ್ನು ಶ್ರೀಕ್ಷೇತ್ರದ ಭಕ್ತ ವೃಂದದವರಾದ ನಾವೆಲ್ಲರೂ ಗೌರವದಿಂದ ಸ್ವಾಗತಿಸುತ್ತೇವೆ. ಆದರೆ, ಇದೀಗ ಅನಾಮಿಕ ದೂರುದಾರನನ್ನು ಬಳಸಿಕೊಂಡು ಶ್ರೀಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ತಮ್ಮ ಯೂ-ಟ್ಯೂಬ್, ಫೇಸಬುಕ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಮಾಹಿತಿಗಳನ್ನು ಭಿತ್ತರಿಸಿ ಭಕ್ತರಲ್ಲಿ ಗೊಂದಲವನ್ನು ನಿರ್ಮಿಸುತ್ತಿದ್ದಾರೆ. ಕು.ಸೌಜನ್ಯಾಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ದಾಳಿಗೆ ಹೊರಟ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎಂ.ಡಿ, ಸಂತೋಷ ಶೆಟ್ಟಿ, ಜಯಂತ್.ಟಿ, ಅಜಯ್ ಅಂಚನ್ ಇವರುಗಳು ಷಡ್ಯಂತ್ರ ಹಾಗೂ ಅಪಪ್ರಚಾರ ಮಾಡುತ್ತಿರುವುದರ ಹಿನ್ನೆಲೆ ಏನು?, ಸುಳ್ಳು ಆರೋಪ ಮಾಡಲು ಪ್ರಚೋದಿಸುತ್ತಿರುವವರು ಯಾರು? ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ? ಎಂಬುವುದನ್ನು ತಿಳಿಯಲು ಸೂಕ್ತ ತನಿಖೆ ನಡೆಸಬೇಕಾಗಿದೆ ಎಂದರು.ತಮ್ಮ ಮೊಬೈಲ್ನಲ್ಲಿ ಸಾಕ್ಷಿಗಳಿವೆ ಎಂದು ವೇದಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಘಂಟಾಘೋಷವಾಗಿ ಭಾಷಣ ಮಾಡುತ್ತಿರುವ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎಂ.ಡಿ, ಸಂತೋಷ ಶೆಟ್ಟಿ, ಜಯಂತ್.ಟಿ, ಅಜಯ್ ಅಂಚನ್ ಇವರುಗಳನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈಗಿರುವ ಎಸ್.ಐ.ಟಿ ತಂಡ ಅಥವಾ ಇನ್ನೊಂದು ತನಿಖಾ ತಂಡವನ್ನು ರಚಿಸಿ ತಕ್ಷಣ ತನಿಖೆಯನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಮುಂದಿನ ದಿನಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗಳು ಪ್ರಸಾರವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಮಯದಲ್ಲಿ ಮಾತೋಶ್ರೀ ಕಾವ್ಯಾಶ್ರೀ ಅಮ್ಮನವರು, ರಾಜಕೀಯ ಮುಖಂಡ ಬರಮಣ್ಣ ಉಪ್ಪಾರ, ಅಂದಾನಿ ಅನಂತಪುರ, ಶಿವಾನಂದ ಗೊಟುರ, ಸಿದ್ಧಪ್ಪ ದಡ್ಡಿ, ಶಿವಪ್ಪ ಮದಿಹಳ್ಳಿ, ಆನಂದ ಜೆ.ಕೆ, ಬಸವರಾಜ ಗೌರಾಣಿ, ಶಿವಾನಂದ್ ರಡರಟ್ಟಿ, ಭರಮಪ್ಪ ಕೇರಿ, ರಮೇಶ ಆಟಮಟ್ಟಿ, ಸುರೇಶ ಪೂಜೇರಿ, ದಯಾನಂದ ಸುಣಧೋಳಿ, ಮಲಕಾರಿ ಮುತ್ತೆನ್ನವರ, ಕಲ್ಲಪ್ಪ ವಡೆರಹಟ್ಟಿ, ಭೀಮಶಿ ಸವಸುದ್ದಿ, ನಿಂಗಪ್ಪ ಮುತ್ನಾಳ, ಮಂಜು ಬೆಟಗೇರ, ಕೆಂಪಣ್ಣ ರುದ್ರಾಪುರ, ರಾಮಸ್ವಾಮಿ ಸೈದಾಪುರ, ಸುನಂದಾ ಭಜಂತ್ರಿ, ಸುಪ್ರಿತ ಕಾಳೆ, ನಾಗಪ್ಪ ಸಿಳನವರ, ಸಿದ್ಧಪ್ಪ ದಾನಪ್ಪಗೋಳ, ಅಜಯ ಭಜಂತ್ರ್ರಿ, ಭೀಮಶಿ ಭಜಂತ್ರಿ, ಲಕ್ಕಪ್ಪ ಹೋಲ್ಕರ, ಸುರೇಶ ಬಳಿಗಾರ, ಮುತ್ತಪ್ಪ ಮುತ್ತೆನ್ನವರ, ಹನಮಂತ ದ್ಯಾಪರಟ್ಟಿ, ಮಹಾದೇವ ಗೋಲಬಾಂವಿ, ರಾಜು ಸಾತನ್ನವರ, ಶ್ರೀಶೈಲ ಡವಳೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.