ಗಂಗಾವತಿ-ದರೋಜಿ ನೂತನ ಬ್ರಾಡ್ಗೇಜ್ ರೈಲು ಮಾರ್ಗ ಸರ್ವೇ ಕಾರ್ಯ ಮುಗಿದಿದ್ದು, ಅಂದಾಜು ವೆಚ್ಚ ₹919.49 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ರೈಲ್ವೆ ಸಚಿವ ಸೋಮಣ್ಣ ಅವರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದ್ದಾರೆ.
ಗಂಗಾವತಿ: ಗಂಗಾವತಿ-ದರೋಜಿ ನೂತನ ಬ್ರಾಡ್ಗೇಜ್ ರೈಲ್ವೆ ಲೈನ್ 31.30 ಕಿಮೀ ಕಾಮಗಾರಿಯ ಸರ್ವೇ ಕಾರ್ಯ ಮುಗಿದಿದ್ದು, ಅಂದಾಜು ವೆಚ್ಚ ₹919.49 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ರೈಲ್ವೆ ಸಚಿವ ಸೋಮಣ್ಣ ಅವರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವರ ನಿವಾಸದಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ. ಗಂಗಾವತಿ ನಗರದಿಂದ ಬಳ್ಳಾರಿ ನಗರಕ್ಕೆ ರಸ್ತೆ ಮಾರ್ಗವಾಗಿ ಕೇವಲ 60 ಕಿಮೀ ಅಂತರವಿದ್ದು, ರೈಲ್ವೆ ಮಾರ್ಗದ ಮೂಲಕ ಬಳ್ಳಾರಿ ತಲುಪಬೇಕಾದರೆ ಗಂಗಾವತಿಯಿಂದ ಗಿಣೆಗೇರ ರೈಲ್ವೆ ನಿಲ್ದಾಣಕ್ಕೆ ವಿರುದ್ಧ ದಿಕ್ಕಿನಲ್ಲಿ (28 ಕಿಮೀ) ತಲುಪಿ ಅಲ್ಲಿ ಎಂಜಿನ್ ಬದಲಿಸಿ, ಅಲ್ಲಿಂದ ಹೊಸಪೇಟೆ ಮಾರ್ಗವಾಗಿ ದರೋಜಿ ರೈಲ್ವೆ ನಿಲ್ದಾಣ (64 ಕಿಮೀ) ತಲುಪಬೇಕು. ಅಲ್ಲಿಂದ ಬಳ್ಳಾರಿ (27 ಕಿಮೀ), ಇದರಿಂದ ಒಟ್ಟು ಅಂತರ 119 ಕಿಮೀ ಕ್ರಮಿಸಿ ಬಳ್ಳಾರಿ ತಲುಪಬೇಕಾಗುತ್ತದೆ.
ಉದ್ದೇಶಿತ ಗಂಗಾವತಿ-ದರೋಜಿ ರೈಲು ಮಾರ್ಗ ನಿರ್ಮಾಣವಾದರೆ ಗಂಗಾವತಿ ನಗರದಿಂದ ಬಳ್ಳಾರಿ, ಬೆಂಗಳೂರು, ಗುಂತಕಲ್, ಗುಂಟೂರು ನಗರಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಧಾರ್ಮಿಕ ಕ್ಷೇತ್ರಗಳಾದ ತಿರುಪತಿ, ಶ್ರೀಶೈಲ ಹಾಗೂ ಗುಂತಕಲ್ ಜಂಕ್ಷನ್ ತಲುಪಲು ಸರಳವಾಗುತ್ತದೆ.
ಆದ್ದರಿಂದ ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೈಲು ಮಾರ್ಗ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಅನುದಾನ ನೀಡಿ ಪ್ರಾಶಸ್ತ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.