ಕೊಡವರ ಸಾಂವಿಧಾನಿಕ ಭದ್ರತೆಗಾಗಿ ಹಕ್ಕೊತ್ತಾಯಗಳ ಕುರಿತು ಸರ್ಕಾರದ ಗಮನ ಸೆಳೆಯಲು ಐದು ಹಂತಗಳಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಸಂವಿಧಾನದ ಆರ್ಟಿಕಲ್ 244 R/w 6 ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 3ನೇ ಹಂತದ ಪಾದಯಾತ್ರೆಯ ಮುಂದುವರಿದ ಭಾಗವನ್ನು ದಕ್ಷಿಣ ಕೊಡಗಿನ ಕಿರ್ನಾಲ್ನಾಡ್ - ಗುಮ್ಮತ್ಮಾಡ್ ನಾಡ್ ಮಂದ್ (ಕರ್ಗೂರ್-ಬೆಸಗೂರ್) ಮತ್ತು ಪತ್ತ್ ಕಟ್ನಾಡ್ (ಬೆಕ್ಕೆಸೆಡ್ಲೂರ್-ಕಾನೂರ್) ಮಂದ್ ನಲ್ಲಿ ನಡೆಸಿತು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆ ಆರಂಭಿಸಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ, 9 ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿದರು. ಕೊಡವರ ಸಾಂವಿಧಾನಿಕ ಭದ್ರತೆಗಾಗಿ ಹಕ್ಕೊತ್ತಾಯಗಳ ಕುರಿತು ಸರ್ಕಾರದ ಗಮನ ಸೆಳೆಯಲು ಐದು ಹಂತಗಳಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ಬೇಡಿಕೆ ಈಡೇರುವವರೆಗೆ ಸಿಎನ್ಸಿ ಹೋರಾಟ ಮುಂದುವರಿಯಲಿದೆ. ಸರ್ವ ಕೊಡವರು ಈ ಹೋರಾಟದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ, ಕೊಡವ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ ‘ಕಿರ್ಪಾನ್’ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ ವಿಧಿಗಳಡಿಯಲ್ಲಿ ಕೊಡವರ ‘ಧಾರ್ಮಿಕ ಸಂಸ್ಕಾರ’ವೆಂದು ರಕ್ಷಿಸುವುದು, ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್ಗೆ ಸೇರಿಸುವುದು ಸೇರಿದಂತೆ 9 ಬೇಡಿಕೆಗಳ ಕುರಿತು ನಾಚಪ್ಪ ವಿವರಿಸಿದರು. ಕೋಡೆಂಗಡ ಪವಿತ್ರಾ ಸುರೇಶ್, ಚೆಪ್ಪುಡಿರ ಪೊನ್ನಪ್ಪ, ಚೆಪ್ಪುಡಿರ ಮನೋಜ್, ಕೋಡೆಂಗಡ ವಿಠಲ್, ಚೆಪ್ಪುಡಿರ ಡಿಕ್ಕಿ, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಪರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಬೊಟ್ಟಂಗಡ ಜಪ್ಪು, ಕಿರ್ನಾಳ್ನಾಡ್ ಶರಿನ್, ಕಿರಿಯಮಾಡ ಶಾನ್, ಕಿರಿಯಮಾಡ ಸಫನ್, ಕಾಕಮಾಡ ದೀಕ್ಷಿತ್, ಚಿರಿಯಪಂಡ ಲೋಹಿತ್ ಮತ್ತಿತರರು ಪಾಲ್ಗೊಂಡಿದ್ದರು. * ಇಂದಿನ ಪಾದಯಾತ್ರೆ ಅ.10ರಂದು ಬೆಳಗ್ಗೆ 10 ಗಂಟೆಗೆ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನಾಡ್ ಈ ನಾಲ್ಕು ನಾಡು ಮಂದ್ಗಳಲ್ಲಿ (ಬಾಡಗರ ಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲ್ಲೂಕು).
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.