- ತರೀಕೆರೆ ಮೆಸ್ಕಾಂನ ಜನಸಂಪರ್ಕ ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಪರಮೇಶ್ವರಪ್ಪ
ತಾಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ ಹಿನ್ನೆಲೆಯಲ್ಲಿ ರೈತರು ನೀರು ಹಾಯಿಸಲು ತೋಟ ಗಳಿಗೆ ರಾತ್ರಿ ಹೋಗಲು ಭಯಬೀತರಾಗಿದ್ದಾರೆ. ಹಾಗಾಗಿ ಮೆಸ್ಕಾಂ ಅಧಿಕಾರಿಗಳು ಕೃಷಿ ಪಂಪ್ ಸೆಟ್ ಗಳಿಗೆ ಹಗಲಿನಲ್ಲಿ ತ್ರೀಫೇಸ್ ವಿದ್ಯುತ್ ನೀಡಬೇಕೆಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ.ಕೆ ಒತ್ತಾಯಿಸಿದ್ದಾರೆ.
ಗುರುವಾರ ಪಟ್ಟಣದ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿಮಾತನಾಡಿದರು. ತಾಲೂಕಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಕಾಟ ವಿಪರೀತವಾಗಿದ್ದು ಸಮೀಪದ ಕಾಡಿನಿಂದ ಆನೆ, ಚಿರತೆ ಮತ್ತಿತರ ಕಾಡು ಪ್ರಾಣಿಗಳು ಹಗಲು ಮತ್ತು ರಾತ್ರಿ ವೇಳೆಯಲ್ಲಿ ರೈತರ ತೋಟ, ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಪಡಿಸುತ್ತಿವೆ. ಇದರಿಂದ ರಾತ್ರಿ ಸಮಯದಲ್ಲಿ ರೈತರು ಕೃಷಿ ಕಾರ್ಯಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಆದುದರಿಂದ ಮೆಸ್ಕಾಂ ಇಲಾಖೆ ರಾತ್ರಿಗಿಂತ ಹಗಲಿನಲ್ಲಿ ನಿರಂತರವಾಗಿ 7 ಗಂಟೆ ಕಾಲ ತಪ್ಪದೇ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.ಗುರುಪುರದ ಬಾಲು ಮಾತನಾಡಿ ಗುರುಪುರ ಗ್ರಾಮದಲ್ಲಿ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ 3 ವರ್ಷಗಳ ಹಿಂದೆಯೇ ಆಯ್ಕೆಯಾದ್ದ ಐದು ಮನೆಗಳೀಗೆ ಎರಡು ತಿಂಗಳ ಹಿಂದಷ್ಟೇ ವಿದ್ಯುತ್ ಸಂಪರ್ಕ ಕಲ್ಪಿಸಿ 3 ವರ್ಷದ ವಿದ್ಯುತ್ ಬಿಲ್ಲನ್ನು ನೀಡಿದ್ದಾರೆ. ಇಲಾಖೆ ಈ ತಪ್ಪನ್ನು ಸರಿಪಡಿಸಬೇ. ಸರ್ಕಾರ ಎಸ್.ಸಿ.ಪಿ. ಮತ್ತು ಟಿ.ಎಸ್. ಪಿ. ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಸಮರ್ಪಕ ವಿದ್ಯುತ್ ಕಲ್ಪಿಸಲು ಒತ್ತಾಯಿಸಿದರು. ಸುಣ್ಣದಹಳ್ಳಿ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಎಸ್.ಪಿ.ಚಂದಪ್ಪ ಮಾತನಾಡಿ ಸುಟ್ಟುಹೋದ ಪರಿವರ್ತಕಗಳನ್ನು ಇಲಾಖೆ ನಿಯಮಾನುಸಾರ 72 ಗಂಟೆ ಒಳಗೆ ಬದಲಾಯಿಸಿಕೊಡಬೇಕು ಎಂದರು.ವಕೀಲ ಕೃಷ್ಣಮೂರ್ತಿ ಮಾತನಾಡಿ ತ್ರಿ ಫೇಸ್ ವಿದ್ಯುತ್ತನ್ನು ನಿರಂತರವಾಗಿ ರೈತರಿಗೆ ಇಲಾಖೆ ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ದೂರಿದರು ಸರಿಪಡಿಸುತ್ತಿಲ್ಲ ಕೂಡಲೇ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.ಸುಣ್ಣದ ಹಳ್ಳಿ ದಯಾನಂದ್ ಮಾತನಾಡಿ ಜಂಗಲ್ ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ರೈತರಾದ ಹಾದಿಕೆರೆ ಷಡಾಕ್ಷರಪ್ಪ, ಸುರೇಶಚಾರ್, ಎನ್.ಎಂ.ರುದ್ರಯ್ಯ, ತಾಲೂಕು ಕಾರ್ಯದರ್ಶಿ ದಕ್ಷಿಣಮೂರ್ತಿ, ತಾಲೂಕಿನಾದ್ಯಂತ ಗ್ರಾಹಕರು, ರೈತರು, ಭಾರತೀಯ ಕಿಸಾಸ್ ಸಂಘದ ತಾಲೂಕು ಕಾರ್ಯಕರ್ತರು ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಮಾತನಾಡಿ ನೂತನವಾಗಿ ನಿರ್ಮಾಣವಾಗಿರುವ ನಂದಿಹೊಸಳ್ಳಿ 66 11 ಕೆ.ವಿ ಕೇಂದ್ರದಿಂದ 07 ಹೊಸ 11 ಕೆ.ವಿ. ಎರಡು ಮಾರ್ಗಗಳನ್ನು ರಚಿಸುವ ಬಗ್ಗೆ ₹326 ಲಕ್ಷ ಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಶಿವಪುರ ಕೇಂದ್ರದಿಂದ 11 ಕೆ.ವಿ.ಫೀಡರ್ ರಚಿಸುವ ಬಗ್ಗೆ ₹96.5 ಲಕ್ಷ ಆಡಳಿತಾತ್ಮಕ ಅನುಮೋದನೆ ಮತ್ತು ಲಕ್ಕವಳ್ಳಿ ವಿ.ವಿ.ಕೇಂದ್ರದಿಂದ ಹೊಸ 11 ಕೆ.ವಿ.ಮಾರ್ಗಗಳ ರಚನೆ ಮತ್ತು ದೇವಿಪುರ ವಿ.ವಿ. ಕೇಂದ್ರದಿಂದ ಹೊಸ ಫೀಡರ್ ರಚನೆ ಒಟ್ಟು ₹600 ಲಕ್ಷದ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಿದೆ ಎಂದು ತಿಳಿಸಿದರು. ತಾಲೂಕಿನಾದ್ಯಂತ ಗ್ರಾಹಕರು, ರೈತರು, ಭಾರತೀಯ ಕಿಸಾಸ್ ಸಂಘದ ತಾಲೂಕು ಕಾರ್ಯಕರ್ತರು ಭಾಗವಹಿಸಿ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.ರೈತರು, ಗ್ರಾಹಕರು, ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಅಜಯ್, ಶಾಖಾಧಿಕಾರಿಗಳಾದ ಗುರುಪಾದಪ್ಪ, ತಿಪ್ಪೇಶಪ್ಪ, ರಘುನಂದನ್, ಮೋಹನ್, ರಾಮು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
18ಕೆಟಿಆರ್.ಕೆ.1ಃತರೀಕೆರೆಯಲ್ಲಿ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜುನಾಥ್, ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ್, ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಅಜಯ್ ಮತ್ತಿತರರು ಭಾಗವಹಿಸಿದ್ದರು.