ಆಟದ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದೆಂದು ಆಗ್ರಹ

KannadaprabhaNewsNetwork | Published : Apr 30, 2025 2:00 AM

ಸಾರಾಂಶ

ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನದಲ್ಲಿ ಪ್ರತಿಭಟನೆಗೆ ಅಥವಾ ಇನ್ನಿತರ ಉದ್ದೇಶಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ರಾಷ್ಟ್ರಭಕ್ತ ಬಳಗದಿಂದ ಪಾಲಿಕೆ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಆಟದ ಮೈದಾನದಲ್ಲಿ ಪ್ರತಿಭಟನೆಗೆ ಅಥವಾ ಇನ್ನಿತರ ಉದ್ದೇಶಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ರಾಷ್ಟ್ರಭಕ್ತ ಬಳಗದಿಂದ ಪಾಲಿಕೆ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರುಗಡೆಯ ಮಹಾನಗರ ಪಾಲಿಕೆಗೆ ಸೇರಿದ ಆಟದ ಮೈದಾನವನ್ನು ಮುಸ್ಲಿಂ ಸಮುದಾಯದ ಹೋರಾಟಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಇದು ವಿವಾದಿತ ಸ್ಥಳವಾಗಿದ್ದು, ಪರಿಶೀಲನೆ ನಡೆಯುತ್ತಿದೆ. ತನಿಖೆ ಮುಂದುವರೆದಿದೆ. ಈ ಹಂತದಲ್ಲಿ ಯಾವುದೇ ಕಾರಣಕ್ಕೂ ಇಲ್ಲಿ ಪ್ರತಿಭಟನೆ ಅಥವಾ ಇನ್ನಿತರ ಉದ್ದೇಶಗಳಿಗೆ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಮೈದಾನ ಪಾಲಿಕೆಯ ಸಂಪೂರ್ಣ ಒಡೆತನಕ್ಕೆ ಒಳಪಟ್ಟ ಆಸ್ತಿಯಾಗಿದ್ದು, ಸದರಿ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಮಾತ್ರ ಅನುವು ಮಾಡಿ ಕೊಡಬೇಕು. ಈ ಜಾಗದ ಖಾತೆಯನ್ನು ನಿಯಮ ಬಾಹಿರವಾಗಿ ಮಾಡಲಾಗಿದ್ದು, ತಕ್ಷಣ ಈ ಖಾತೆಯನ್ನು ರದ್ದುಪಡಿಸಿ ಪಾಲಿಕೆ ಇ ಸ್ವತ್ತನ್ನು ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.

ಕೆಲವು ದುಷ್ಕರ್ಮಿಗಳು ರಾತ್ರೋರಾತ್ರಿ ಬೇಲಿ ಹಾಕಿ ನಗರದಲ್ಲಿ ಪ್ರಕ್ಷುಬ್ದ ವಾತಾವರಣಕ್ಕೆ ಕಾರಣರಾಗಿದ್ದರು. ಮತ್ತು ಆ ಬೇಲಿ ಹಾಕಲು ರೈಲ್ವೆ ಇಲಾಖೆಯ ಕಂಬಿಗಳನ್ನು ಅಕ್ರಮವಾಗಿ ಬಳಸಿದ್ದರು. ಭಾರತ ಸರ್ಕಾರದ ಆಸ್ತಿಯನ್ನು ಕದ್ದು ತಂದಿರುವುದು ಗಂಭೀರ ಪ್ರಕರಣವಾಗಿದ್ದು, ಕೂಡಲೇ ಸ್ವಯಂ ಪ್ರೇರಿತರಾಗಿ ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ಇಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶ ನೀಡಬಾರದು, ನೀಡಿದರೆ ಮುಂದಿನ ಹೋರಾಟಕ್ಕೆ ರಾಷ್ಟ್ರ ಭಕ್ತರ ಬಳಗ ಸಿದ್ಧವಾಗಿದೆ. ಆದ್ದರಿಂದ ಶಾಂತಿಯನ್ನು ಕಾಪಾಡುವಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಳಗದ ಸಂಚಾಲಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಕೆ.ಈ.ಕಾಂತೇಶ್, ಎಂ.ಶಂಕರ್ ಬಾಲು, ಮೋಹನ್‍ಜಾಧವ್, ಕುಪೇಂದ್ರ, ಸೀತಾಲಕ್ಷ್ಮೀ, ಈ.ವಿಶ್ವಾಸ್, ಶಿವಾಜಿ ಸೇರಿದಂತೆ ರಾಷ್ಟ್ರಭಕ್ತ ಬಳಗದ ಪ್ರಮುಖರು ಉಪಸ್ಥಿತರಿದ್ದರು.

Share this article