ಕನ್ನಡಪ್ರಭ ವಾರ್ತೆ ಮೈಸೂರು
ರಜಾ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಬೇಕು. ಬಳಸಲು ಕಷ್ಟವಾಗುತ್ತಿರುವ ಹಳೆ ಟೇಬಲ್ ಮತ್ತು ಖುರ್ಚಿಗಳನ್ನು ಬದಲಾಯಿಸಬೇಕು ಮತ್ತು ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಹೊರಾಂಗಣದಲ್ಲಿ ಯಾವುದೇ ಗಿಡ ಗಂಟಿಗಳು ಹೆಚ್ಚದಂತೆ ಸ್ವಚ್ಛಗೊಳಿಸುತ್ತಿರಬೇಕು ಮತ್ತು ಹೊರಾಂಗಣದಲ್ಲಿ ಕೂತು ಊಟ ಮಾಡಲು ಕಲ್ಲು ಬೆಂಚುಗಳು ಮತ್ತು ಮೇಲ್ಚಾವಣಿಯ ವ್ಯವಸ್ಥೆ ಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹೊಸ ಪುಸ್ತಕಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಎಐಡಿವೈಒ ಜಿಲ್ಲಾಧ್ಯಕ್ಷ ಟಿ.ಆರ್. ಸುನಿಲ್ ಮಾತನಾಡಿ, ಸಾರ್ವಜನಿಕ ಗ್ರಂಥಾಲಯಗಳು ಪ್ರತಿ ಸೋಮವಾರ, ಎರಡನೇ ಮಂಗಳವಾರ, ನಾಲ್ಕನೇ ಶನಿವಾರ ಮತ್ತು ಸರ್ಕಾರಿ ರಜೆಗಳು ಹೀಗೆ ಹಲವಾರು ರಜೆಗಳಿರುವುದರಿಂದ ಉದ್ಯೋಗಾಕಾಂಕ್ಷಿಗಳು ನಿರಂತರ ಓದುವ ಅಭ್ಯಾಸಕ್ಕೆ ಸಮಸ್ಯೆ ಉಂಟಾಗುತ್ತದೆ. ಇಲ್ಲವಾದಲ್ಲಿ ಖಾಸಗಿ ಗ್ರಂಥಾಲಯಕ್ಕೆ ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ಓದಬೇಕಿದೆ. ಉದ್ಯೋಗವನ್ನು ಅರಸುತ್ತಿರುವ ವಿದ್ಯಾರ್ಥಿಗಳಿಗೆ ಇದಕ್ಕಾಗಿ ಇಷ್ಟು ಖರ್ಚು ಮಾಡುವುದು ಕಷ್ಟ ಎಂದು ತಿಳಿಸಿದರು.ಪಾಲಿಕೆಯು ಸಹ ನಗರದ ಪ್ರತಿ ಕುಟುಂಬದಿಂದ ಅಂದಾಜು ವರ್ಷಕ್ಕೆ 300 ರೂ. ಸೆಸ್ ಸಂಗ್ರಹಿಸುತ್ತದೆ. ಈ ರೀತಿ ಕೋಟಿಗಟ್ಟಲೆ ಸಂಗ್ರಹವಾದ ಹಣವನ್ನು ಸಾರ್ವಜನಿಕರಿಗೆ ಸೌಲಭ್ಯವನ್ನು ಒದಗಿಸಲು ಬಳಸದೆ ಮತ್ತೆ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಎಸ್. ಸುಮಾ, ಸದಸ್ಯೆ ನೀತುಶ್ರೀ, ಗ್ರಂಥಾಲಯದ ಓದುಗರಾದ ಶಿವಾನಂದ್, ಅನೂಪ್, ರಘು, ಭಾಸ್ಕರ್, ಹರ್ಷವರ್ಧನ್, ಗುಣ ಮೊದಲಾದವರು ಇದ್ದರು.