ಕನ್ನಡಪ್ರಭ ವಾರ್ತೆ ಪಾವಗಡ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಸಿಎಲ್ಪಿ ನಾಯಕ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ರೆಡ್ಡಿ ಸಮುದಾಯದ ಧೀಮಂತ ನಾಯಕ,ಹಿರಿಯ ಮುಖಂಡ,ಹಾಗೂ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಸಂಘದ ನಿರ್ದೇಶಕರಾದ ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ ಸಚಿವರು ಹಾಗೂ ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡರಲ್ಲಿ ಒತ್ತಾಯಿಸಿ ಮನವಿ ಮಾಡಿದ್ದಾರೆ. ಭಾನುವಾರ ಪಟ್ಟಣದಲ್ಲಿ ಸುದ್ಧಿಗಾರರ ಜತೆ ಅಧ್ಯಕ್ಷ ಚಂದ್ರಶೇಖರರೆಡ್ಡಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಸಂಖ್ಯೆಯ ರೆಡ್ಡಿ ಸಮಾಜವಿದೆ. ರಾಜ್ಯ ರೆಡ್ಡಿ ಸಮುದಾಯದ ಹಿರಿಯ ಪ್ರಭಾವಿ ಮುಖಂಡರಾದ ರಾಮಲಿಂಗಾರೆಡ್ಡಿ ಅವರು ಪಕ್ಷ ಸಂಘಟಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ತನ್ನದೇ ಆದ ಶ್ರಮ ವಹಿಸಿದ್ದಾರೆ. ಬೆಂಗಳೂರು ಬಿಟಿಎಂ ಲೇ ಔಟ್ ವಿಧಾನ ಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿ 5 ಬಾರಿ ರಾಜ್ಯ ಸಂಪುಟದಲ್ಲಿ ಸಚಿವರಾಗಿ ಪ್ರಾಮಾಣಿಕ ಹಾಗೂ ಉತ್ತಮ ಜನಪರ ಸೇವೆ ಸಲ್ಲಿಸಿದ್ದಾರೆ. ದಕ್ಷ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದು ಸಿಎಂ ಖಾತೆ ಕೊಟ್ಟರೂ ನಿಭಾಯಿಸುವಲ್ಲಿ ಸರ್ಮಥರಿದ್ದಾರೆ. ಜನಪ್ರಿಯ ನಾಯಕರಾಗಿದ್ದಾರೆಂದೇ ಹೆಗ್ಗಳಿಕೆ ಪಡೆದಿದ್ದು ಇವರಿಗೆ ಹೆಚ್ಚು ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ಜನಪರ ಅಭಿವೃದ್ಧಿಯ ಬಗ್ಗೆ ಬದ್ಧತೆ ಹಾಗೂ ಕಾಳಜಿ ಇದೆ. ಹೀಗಾಗಿ ರಾಜ್ಯ ರೆಡ್ಡಿ ಸಮಾಜಕ್ಕೆ ಪ್ರಾಶಸ್ಯ ನೀಡುವಂತೆ ಒತ್ತಾಯಿಸಿದರು. ಕಳೆದ ಐದಾರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಸರ್ಕಾರದ ಆಡಳಿತ ಜನರ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಪರ ಕೆಲಸ ಮಾಡಿ ಜನ್ನಮನ್ನಣೆಗಳಿಸಿದ್ದಾರೆ.