ಭಟ್ಕಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಟ್ಯಾಕ್ಸಿ ಚಾಲಕರು, ಮಾಲೀಕರ ಸಂಘದಿಂದ ಹೊನ್ನಾವರ ಸಹಾಯಕ ಸಾರಿಗೆ ಅಧಿಕಾರಿ(ಎಆರ್ಟಿಒ)ಗೆ ಮನವಿ ಸಲ್ಲಿಸಲಾಯಿತು.
ಖಾಸಗಿ ಕಾರಿನವರಿಗೆ ಯಾವುದೇ ರೀತಿಯಲ್ಲಿ ಬಾಡಿಗೆ ಮಾಡಲು ಅವಕಾಶವಿರುವುದಿಲ್ಲ. ಅವರಿಗೆ ಕೇವಲ ತಮ್ಮ ಸ್ವಂತಕ್ಕೆ ಮಾತ್ರ ಕಾರು ಬಳಸಲು ಅವಕಾಶವಿರುತ್ತದೆ. ಬಾಡಿಗೆ ಮಾಡುತ್ತಿರುವ ಖಾಸಗಿ ಕಾರಿನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಅದರಂತೆ ಪ್ಯಾಸೇಂಜರ್ ರಿಕ್ಷಾದವರಿಗೆ ಸರ್ಕಾರ ಕೇವಲ ಏಳು ಕಿಲೋಮೀಟರ್ ಪರವಾನಗಿ ನೀಡಿದೆ. ಆದರೆ ಅವರು ಸಿಗಂದೂರು, ಕುಂದಾಪುರ, ಕೊಲ್ಲೂರು ಮುಂತಾದ ಊರುಗಳಿಗೆ ಬಾಡಿಗೆಯನ್ನು ತೆಗೆದುಕೊಂಡು ಹೋಗುತ್ತಾರೆ. ಈ ಬಗ್ಗೆಯೂ ಗಮನ ಹರಿಸಬೇಕೆಂದು ಆಗ್ರಹಿಸಲಾಗಿದೆ.
ಭಟ್ಕಳದ ಸಾರಿಗೆ ಬಸ್ ನಿಲ್ದಾಣದ ಎದುರು ಟ್ಯಾಕ್ಸಿ ನಿಲ್ದಾಣ ಇದ್ದು, ರಸ್ತೆ ಅಗಲೀಕರಣವಾದರೆ ಕಾರು ನಿಲ್ಲಿಸಲು ಜಾಗ ಇರುವುದಿಲ್ಲ. ಹೀಗಾಗಿ ಬಸ್ ನಿಲ್ದಾಣದ ಎದುರು ಕಾರು ನಿಲ್ಲಿಸಲು ಜಾಗ ಗುರುತು ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ.ಮನವಿ ಸ್ವೀಕರಿಸಿದ ಎಆರ್ಟಿಒ ಸಮಸ್ಯೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಗಣೇಶ ದೇವಡಿಗ, ಉಪಾಧ್ಯಕ್ಷ ಅಬ್ದುಲ್ ಸಮಿ, ಕಾರ್ಯದರ್ಶಿ ಸೂರ್ಯಕಾಂತ ನಾಯ್ಕ ಮುಂತಾದವರಿದ್ದರು.