ಹಾವೇರಿ: ಡಿ.ಎಸ್.ಇ.ಆರ್.ಟಿ. ವತಿಯಿಂದ ಮುಂಬರುವ 6ರಿಂದ 9ನೇ ತರಗತಿಗಳ ಎರಡನೇ ಸಂಕಲನಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಕೇವಲ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಲಾಗಿನ್ಗೆ ಮಾತ್ರ ಕಳಿಸಲು ನಿರ್ಧರಿಸಲಾಗಿದೆ. ಆದರೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಪ್ರಶ್ನೆಪತ್ರಿಕೆಗಳನ್ನು ನೀಡಲಾಗುತ್ತಿಲ್ಲ. ಈ ತಾರತಮ್ಯ ನೀತಿಯನ್ನು ಖಂಡಿಸಿ, ಎಲ್ಲಾ ಶಾಲೆಗಳಿಗೂ ಪ್ರಶ್ನೆಪತ್ರಿಕೆಯನ್ನು ಕಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರದ ಪಠ್ಯಕ್ರಮ ಅನುಸರಿಸುತ್ತಿರುವ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಈ ರೀತಿಯಾದ ಆದೇಶದಿಂದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಕೂಡಲೇ ಈ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಚ್. ಬೆಟ್ಟೆಳ್ಳೇರ, ಕಾರ್ಯದರ್ಶಿ ಎನ್.ಎನ್. ಕುಂದೂರ, ಎಂ.ಬಿ. ರಮೇಶ, ಎಂ.ಎಸ್. ಕೆಂಚನಗೌಡರ, ಡಿ.ಡಿ.ಲಂಗೋಟಿ, ಮಾಲತೇಶ ಚಲುವಾದಿ, ದೇವಗಪ್ಪನವರ, ಶೋಭಾ ಜಾಗಟಗೇರಿ, ಎನ್.ಎಂ. ಓಲೇಕಾರ, ಬಸವರಾಜ ಪಾಟೀಲ, ಎಸ್.ಸಿ. ಎಲಿ, ಸೂರಗೊಂಡರ, ರವಿ ವಿ. ಸಂಗಮೇಶ ಪರಡ್ಡಿ, ವಿ. ಎನ್. ಹಾವನೂರ, ಎಸ್.ಬಿ. ಚನ್ನೂರ, ಪೂಜಾರ ಇತರರು ಇದ್ದರು.