ಇಲಾಖೆ ಮಾಹಿತಿ ತಾಲೂಕು ಅಭಿವೃದ್ಧಿಗೆ ಪೂರಕ

KannadaprabhaNewsNetwork |  
Published : Jun 18, 2026, 02:45 AM IST
17ಬಿಎಸ್ವಿ04- ಬಸವನಬಾಗೇವಾಡಿ ತಾಲೂಕು ಪಂಚಾಯಿತಿಯ ರಾಜೀವಗಾಂಧಿ ಸೇವಾಕೇಂದ್ರದ ಸಭಾಭವನದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಬಸವನಬಾಗೇವಾಡಿ ತಾಲೂಕು ಪಂಚಾಯಿತಿಯ ಇಓ ವೆಂಕಟೇಶ ವಂದಾಲ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಿಗದಿಯಾದ ದಿನಾಂಕದ ಎರಡು ದಿನಗಳ ಮುಂಚೆ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿಯನ್ನು ತಾಲೂಕು ಪಂಚಾಯಿತಿಗೆ ಒದಗಿಸಿದರೆ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಾಪಂ ಇಒ ವೆಂಕಟೇಶ ವಂದಾಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಿಗದಿಯಾದ ದಿನಾಂಕದ ಎರಡು ದಿನಗಳ ಮುಂಚೆ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿಯನ್ನು ತಾಲೂಕು ಪಂಚಾಯಿತಿಗೆ ಒದಗಿಸಿದರೆ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಾಪಂ ಇಒ ವೆಂಕಟೇಶ ವಂದಾಲ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿಯ ರಾಜೀವ ಗಾಂಧಿ ಸೇವಾಕೇಂದ್ರದ ಸಭಾಭವನದಲ್ಲಿ ಬುಧವಾರ ಜರುಗಿದ 2026-27 ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಅಮಗೊಂಡ ಬಿರಾದಾರ ಮಾತನಾಡಿ, ತಾಲೂಕಿನಲ್ಲಿ ಬೀಜ,ಗೊಬ್ಬರ ದಾಸ್ತಾನು ಇದೆ. ಮುಂಗಾರು ಹಂಗಾಮಿನಲ್ಲಿ ಬಸವನಬಾಗೇವಾಡಿ, ಹೂವಿನಹಿಪ್ಪರಗಿ, ಮನಗೂಳಿ ಹೋಬಳಿ ಮಟ್ಟದಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದೆ. ಬಿತ್ತನೆ ಕಾರ್ಯ ಆರಂಭವಾಗಿದೆ. ನಿಡಗುಂದಿ ಭಾಗದಲ್ಲಿ ಕಡಿಮೆ ಮಳೆಯಾಗಿದೆ. ಈ ವರ್ಷ ತೊಗರಿಗಿಂತ ಹತ್ತಿ ಬಿತ್ತನೆ ಜಾಸ್ತಿಯಾಗಿದ್ದು, ಈಗ ಮಳೆಯಾಗಬೇಕಿದೆ ಎಂದರು.

ರೈತರು ತಾವು ಬಿತ್ತನೆ ಮಾಡುವ ಬೆಳೆಗೆ ವಿಮೆ ಕಂತು ತುಂಬಿದರೆ ಅವರಿಗೆ ಬೆಳೆ ನಷ್ಟ ವಿಮೆ ಹಣ ಬರುತ್ತದೆ. ಜಿಲ್ಲೆಗೆ 2025-26 ನೇ ಸಾಲಿನಲ್ಲಿ ₹ 132 ಕೋಟಿ ಬೆಳೆ ವಿಮೆ ಹಣ 79 ಸಾವಿರ ರೈತರಿಗೆ ಸಂದಾಯವಾಗಿದೆ. ರೈತ ಬಾಂಧವರಿಗೆ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ ಕುರಿತು ಮಾಹಿತಿ ನೀಡಿದರು.

ಬೆಳೆ ವಿಮೆ ಕಂತು ತುಂಬುವ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕು. ಈ ಕುರಿತು ರೈತರಿಗೆ ಮಾರ್ಗದರ್ಶನ ನೀಡುವಂತೆ ಇಒ ವೆಂಕಟೇಶ ವಂದಾಲ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿ ಕ್ಷಯ ರೋಗ ಮುಕ್ತ ಭಾರತ ಎಂಬ ಯೋಜನೆ ಇದೆ. ತಾಲೂಕಿನಲ್ಲಿ 800 ಜನರಲ್ಲಿ 15 ಜನರಿಗೆ ಕ್ಷಯ ರೋಗದ ಲಕ್ಷಣ ಕಂಡುಬಂದಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮ ಮಟ್ಟದಲ್ಲಿ ಜನರ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ರಾಜಶೇಖರ ಚಿಂಚೋಳಿಗೆ ಹೇಳಿದರು.

ಸಿಡಿಪಿಒ ಇಲಾಖೆಯವರು ಮಳೆಗಾಲ ಆರಂಭವಾಗಿದ್ದರಿಂದ ಶಿಥಿಲಾವಸ್ಥೆಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಕೂಡಿಸಿದಂತೆ ಗಮನ ಹರಿಸಬೇಕೆಂದು ಸೂಚಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯವರು ವಸತಿ ನಿಲಯದ ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸಬೇಕು. ಹೆಣ್ಣುಮಕ್ಕಳ ಮೇಲೆ ಹೆಚ್ಚು ಗಮನ ಹರಿಸುವುದು ತುಂಬ ಅಗತ್ಯವಿದೆ. ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯವರು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಕುರಿತು ಗಮನ ಹರಿಸಬೇಕೆಂದು ಸೂಚನೆ ನೀಡಿದರು.

ಪಶು ಇಲಾಖೆಯ ಡಾ.ಪಂಚಾಕ್ಷರಿ ಸಂಖ ಮಾತನಾಡಿ, 22 ವಾರದವರೆಗೆ ಜಾನುವಾರುಗಳಿಗೆ ಮೇವಿನ ಸಮಸ್ಯೆಯಿಲ್ಲ. ನಾಯಿ ಕಡಿತದಿಂದ ರೋಗ ಜಾಸ್ತಿಯಾಗಿದೆ. ಜನರು ಇದರ ಬಗ್ಗೆ ಜಾಗೃತ ವಹಿಸಬೇಕಿದೆ. ಪಶು ಇಲಾಖೆಯಿಂದ ಜಾನುವಾರುಗಳ ಆರೋಗ್ಯ ತಪಾಸಣೆ ಶಿಬಿರದ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಶಿಕ್ಷಣ, ಸಿಡಿಪಿಒ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹೆಸ್ಕಾಂ, ತೋಟಗಾರಿಕೆ, ಕಾರ್ಮಿಕ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆಯವರು ಸಭೆಗೆ ಮುನ್ನ ಪ್ರಗತಿ ಪತ್ರ ನೀಡಿಲ್ಲ. ಮುಂದಿನ ಸಭೆಯಲ್ಲಿ ನೀಡವಂತೆ ಸೂಚನೆ ನೀಡಲಾಗಿದೆ.

ಸಭೆ ಅಧ್ಯಕ್ಷತೆ ವಹಿಸಿಕೊಳ್ಳಬೇಕಿದ್ದ ತಾಪಂ ಆಡಳಿತಾಧಿಕಾರಿ, ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿಯ ಅಧೀಕ್ಷಕ ಅಭಿಯಂತರ ಗೋವಿಂದ ರಾಠೋಡ ಸಭೆಗೆ ಹಾಜರಾಗಿರಲಿಲ್ಲ. ಸಭೆಯಲ್ಲಿ ಕೊಲ್ಹಾರ ತಾಪಂ ಇಒ ಅಧಿಕಾರಿ ಸುನೀಲ ಮದ್ದಿನ, ಸೇರಿದಂತೆ ವಿವಿಧ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಟ್‌ಪ್ರತಿ ಎರಡು ತಿಂಗಳಿಗೊಮ್ಮೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಬೇಕು. ಸಾಮಾನ್ಯ ಸಭೆಗೆ ಸಾಧ್ಯವಾದಷ್ಟು ಎಲ್ಲ ಇಲಾಖೆಯ ಮುಖ್ಯಸ್ಥರು ಹಾಜರಾಗಬೇಕು ಎಂದು ಸೂಚನೆ ನೀಡಿದರು. ಅಲ್ಲದೇ, ಈ ಸಾಮಾನ್ಯ ಸಭೆಗೆ ಹಾಜರಾಗದಿರುವ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನೊಟೀಸ್ ನೀಡಬೇಕು.ವೆಂಕಟೇಶ ವಂದಾಲ, ತಾಪಂ ಇಒ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈಕಲ್ ಬಳಕೆ ಆರೋಗ್ಯ ವೃದ್ದಿಗೆ ಪೂರಕ: ವಿಜಯಾ ಕೋರಿಶೆಟ್ಟಿ
ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿರಲಿ