ಜಿಲ್ಲೆಯಲ್ಲಿ ಬಯಲು ಶೌಚಾಲಯ ಇಲ್ಲದಂತೆ ಮಾಡಲು ಇಲಾಖೆಗಳು ನಿಗಾ ವಹಿಸಬೇಕು: ಕೆ.ಎಂ.ಗಾಯತ್ರಿ

KannadaprabhaNewsNetwork | Published : Nov 20, 2024 12:33 AM

ಸಾರಾಂಶ

ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಶೌಚಾಲಯ ಬಳಕೆ‌ ಮಾಡಬೇಕಿದ್ದು, ಜಾಗತಿಕ ತಾಪಮಾನದ ಬದಲಾವಣೆಯಲ್ಲಿ ಶೌಚಾಲಯ ಬಳಕೆಯೂ ಮುಖ್ಯವಾಗಿದೆ. ಶೌಚಾಲಯ ಬಳಕೆ ಗೌರವದ ಪ್ರಶ್ನೆಯೂ ಆಗಿದೆ. ಹೀಗಾಗಿ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಶೌಚಾಲಯ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯಲ್ಲಿ ಶೌಚಾಲಯಗಳ ನಿರ್ಮಾಣದ ಜೊತೆಗೆ ಅದನ್ನು ಬಳಸುವಂತೆ ಮಾಡುವುದು ಸವಾಲಿನ‌ ಸಂಗತಿಯಾಗಿದ್ದು, ಜಿಲ್ಲೆಯಲ್ಲಿ ಬಯಲು ಶೌಚಾಲಯ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಇಲಾಖೆಗಳು ನಿಗಾ ವಹಿಸಬೇಕಿದೆ ಎಂದು ಜಿಪಂ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಮ್ಮ ಶೌಚಾಲಯ ನಮ್ಮ ಗೌರವ ಶೀರ್ಷಿಕೆಯಡಿಯಲ್ಲಿ ಅಂದದ‌ ಶೌಚಾಲಯ- ಆನಂದದ ಜೀವನ ಎಂಬ ಘೋಷವಾಕ್ಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಶೌಚಾಲಯ ಬಳಕೆ‌ ಮಾಡಬೇಕಿದ್ದು, ಜಾಗತಿಕ ತಾಪಮಾನದ ಬದಲಾವಣೆಯಲ್ಲಿ ಶೌಚಾಲಯ ಬಳಕೆಯೂ ಮುಖ್ಯವಾಗಿದೆ. ಶೌಚಾಲಯ ಬಳಕೆ ಗೌರವದ ಪ್ರಶ್ನೆಯೂ ಆಗಿದೆ. ಹೀಗಾಗಿ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಶೌಚಾಲಯ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ಶೌಚಾಲಯ ನಿರ್ಮಾಣಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಬಳಿಕ ಪಿಡಿಒಗಳು ಮನೆಗಳಿಗೆ ತೆರಳಿ ಪರಿಶೀಲಿಸಿ, ಅರ್ಹರಿಗೆ ಶೌಚಾಲಯ ನಿರ್ಮಿಸಿ ಕೊಡಲಾಗುವುದು. ಆದರೆ, ಶೌಚಾಲಯಗಳ ನಿರ್ಮಾಣದ ಜೊತೆಗೆ ಅದರ ಬಳಕೆ ಮಾಡುವಂತೆ ಮಾಡುವುದು ಸವಾಲಿನ‌ ಸಂಗತಿಯಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ಇದ್ದರೂ ಅದರ ಬಳಕೆಯ ಕಡಿಮೆ ಇದೆ. ಇದಕ್ಕೆ ನೀರಿನ ಸಮಸ್ಯೆ ಮುಖ್ಯ ಕಾರಣವಾಗಿದ್ದು, ಈ ಬಗ್ಗೆ ಅರಿವು ಮೂಡಿಸಿದರೆ ಅದರ ಬಳಕೆ ಪ್ರಮಾಣ ಹೆಚ್ಚಲಿದೆ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ 8ನೇ ತರಗತಿ ನಂತರದಲ್ಲಿ ಬಹುತೇಕ ಹೆಣ್ಣು ಮಕ್ಕಳು ನರೇಗಾ ಮೂಲಕ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ. ಬಿಇಒಗಳು ಶೌಚಾಲಯದಲ್ಲಿ ಸಮಸ್ಯೆ ಇದ್ದರೆ ಅದರ ಸರ್ವೇ ನಡೆಸಿ ಮಾಹಿತಿ ನೀಡಿದರೆ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಅಲ್ಲದೇ ಆರೋಗ್ಯ ಇಲಾಖೆ ಮೂಲಕ ಬಯಲ ಶೌಚಾಲಯ ಬಳಿಕೆಯಿಂದ‌ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಶೌಚಾಲಯದ ಸ್ವಚ್ಛತೆ ಕಾಪಾಡುವ ಬಗ್ಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಅರಿವು ಮೂಡಿಸಬೇಕು. ಮಹಿಳಾ ಮತ್ತು ಮಕ್ಕಳ ಇಲಾಖೆ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಉದ್ಘಾಟಿಸಿದರು. ನಂತರ ಶೌಚಾಲಯದ ಬಳಕೆ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ಪ್ರತಿಜ್ಞಾವಿಧಿ ಬೋಧಿಸಿದರು.

ಜಿಪಂ ಉಪ ಕಾರ್ಯದರ್ಶಿ ಡಾ. ಕೃಷ್ಣರಾಜು, ಹಿರಿಯ ಪತ್ರಕರ್ತ ಸಿ.ಕೆ. ಮಹೇಂದ್ರ ಮೊದಲಾದವರು ಇದ್ದರು.

Share this article