ಖಿನ್ನತೆ, ಒತ್ತಡ ಆತ್ಮಹತ್ಯೆಗೆ ಕಾರಣ

KannadaprabhaNewsNetwork |  
Published : Sep 12, 2025, 12:06 AM IST
11ಕೆಪಿಎಲ್22 ದದೇಗಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅರಿವು ನೆರವು ಕಾರ್ಯಕ್ರಮ | Kannada Prabha

ಸಾರಾಂಶ

ಮಾನಸಿಕ ಆರೋಗ್ಯ ವ್ಯಕ್ತಿಯ ವ್ಯಕ್ತಿತ್ವದ ಕನ್ನಡಿಯಾಗಿದ್ದು ಮಾನಸಿಕ ಸದೃಢತೆ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಖಿನ್ನತೆಯಿಂದ ಕೂಡಿದ ಮಾನಸಿಕ ಸ್ಥಿತಿಯು ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ.

ಕೊಪ್ಪಳ:

ಖಿನ್ನತೆ ಮತ್ತು ಒತ್ತಡ ಆತ್ಮಹತ್ಯೆಗೆ ಮುಖ್ಯ ಕಾರಣವಾಗಿದ್ದು ಪ್ರತಿಯೊಬ್ಬರು ಮಾನಸಿಕ ಹಾಗೂ ಬೌದ್ಧಿಕ ಆರೋಗ್ಯಕ್ಕೆ ಒತ್ತು ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಹೇಳಿದರು.

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ದದೇಗಲ್ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ ಅಂಗವಾಗಿ ದದೇಗಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಆರೋಗ್ಯ ವ್ಯಕ್ತಿಯ ವ್ಯಕ್ತಿತ್ವದ ಕನ್ನಡಿಯಾಗಿದ್ದು ಮಾನಸಿಕ ಸದೃಢತೆ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಖಿನ್ನತೆಯಿಂದ ಕೂಡಿದ ಮಾನಸಿಕ ಸ್ಥಿತಿಯು ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬೇಕು ಎಂದರು.

ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿಗಳು ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಚ್. ಪ್ರಕಾಶ ಮಾತನಾಡಿ, ಜೀವನದಲ್ಲಿ ನಿರಾಶೆ, ಒತ್ತಡ, ಮಾದಕ ವಸ್ತುಗಳ ವ್ಯಸನ ಸೇರಿದಂತೆ ಅನೇಕ ಕಾರಣಗಳಿಂದ ವ್ಯಕ್ತಿ ಆತ್ಮಹತ್ಯೆಗೆ ಒಳಗಾಗುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಇತರರೊಂದಿಗೆ ತಮ್ಮ ಭಾವನೆ ಹಂಚಿಕೊಳ್ಳಬೇಕು. ಅವಶ್ಯವಿದ್ದಲ್ಲಿ ಆಪ್ತ ಸಮಾಲೋಚಕರನ್ನು ಭೇಟಿಯಾಗಬೇಕು. ಆರೋಗ್ಯ ಇಲಾಖೆಯ 14416ಕ್ಕೆ ಕರೆ ಮಾಡಿ ಸೂಕ್ತ ಸಮಯಕ್ಕೆ ಆಪ್ತ ಸಮಾಲೋಚನೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ ಎಂ.ಎಚ್‌. ಮಾತನಾಡಿ, ಜೀವನದಲ್ಲಿ ನಿರೀಕ್ಷೆ ಕಡಿಮೆಯಾದರೆ, ಯೋಜನೆ ನಿಖರವಾಗಿದ್ದರೆ ಜೀವನ ವ್ಯವಸ್ಥಿತವಾಗಿರುತ್ತದೆ. ಶಿಸ್ತು, ಕ್ರಮಬದ್ಧ ಜೀವನ ಶೈಲಿ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯಕರ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತವೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯೆ ಡಾ. ಲಕ್ಷ್ಮೀದೇವಿ ಎಂ. ಪಾಟೀಲ, ಆತ್ಮಹತ್ಯೆ ಬಗ್ಗೆ ಇರುವ ಅಪನಂಬಿಕೆ ಮತ್ತು ಕಳಂಕ ದೂರ ಮಾಡುವುದು ಮುಖ್ಯವಾಗಿದೆ. ಆತ್ಮಹತ್ಯೆಗೆ ಮೊರೆ ಹೋಗುವ ಅಪಾಯದಂಚಿನಲ್ಲಿರುವವರ ಜತೆಗೆ ಸಹನೆ ಹಾಗೂ ಸಹಾನೂಭೂತಿಯಿಂದ ಮಾತನಾಡುವುದು, ಕೌಟುಂಬಿಕ ಬೆಂಬಲ, ಒಂಟಿಯಾಗಿರಲು ಬಿಡದಿರುವುದು ಮುಖ್ಯವಾಗಿದೆ ಎಂದರು.

ಪ್ರಾಚಾರ್ಯ ಕೆ. ವೀರೇಶಕುಮಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಶಶಿಧರ ಆಲೂರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಮನಃಶಾಸ್ತ್ರಜ್ಞರಾದ ಪುಷ್ಪಾ ಥೆರೇಸಾ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ವರ್ಗದವರು, ಸುರೇಶ ಬಿ. ಶಶಿಧರ ಪೂಜಾರ ಮತ್ತು ಸಂಸ್ಥೆಯ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!